ಗುರುವನ್ನು ಹುಡುಕಿಕೊಂಡು ಹೊರಟ ಅಲ್ಲಮನ ಓಡಾಟ

0
11

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸುಮಾರು ಐದಾರು ಊರುಗಳಲ್ಲಿ ಅಲ್ಲಮಪ್ರಭುಗಳ ಸ್ಮಾರಕಗಳು ಸಿಗುತ್ತವೆ. ಜಮಖಂಡಿಯಲ್ಲಿ ಅಲ್ಲಮಪ್ರಭು ಹೆಸರಿನ ಪುರಾತನ ನೆಲ ಮಾಳಿಗೆಯ ದೇವಾಲಯ ಸಿಗುತ್ತದೆ. ಬ್ರಾಹ್ಮಣ ಕುಟುಂಬದ ಹಿರಿಯರು ತಲೆತಲಾಂತರದಿಂದ ಪ್ರಭುದೇವರ ಲಿಂಗದ ಪೂಜೆ ಮಾಡುತ್ತಿರುವುದು ಕಂಡು ಬರುತ್ತದೆ.

ಇಲ್ಲಿಂದ ನಾಲ್ಕೈದು ಕಿ. ಮೀ. ದೂರದಲ್ಲಿರುವ ಹುಳ್ಯಾಳ ಗ್ರಾಮದಲ್ಲಿ ಹಳೆಯ ದೇವಾಲಯದ ಪಾದುಕೆಗಳು ಹಿರೇಮಠ ಮನೆತನದ ಜಗುಲಿಯ ಮೇಲೆ ಇಂದಿಗೂ ಪೂಜಿಸಲ್ಪಡುತ್ತಿವೆ. ಇಲ್ಲಿಂದ 5 ಕಿ.ಮೀ. ದೂರದಲ್ಲಿ ಕಂಕನವಾಡಿ ಗ್ರಾಮದಲ್ಲಿ ಗುಹೇಶ್ವರನ ಗಡ್ಡಿ (ಗೋರ ಶಿರಪ್ಪನಗಡ್ಡಿ) ಕಂಡು ಬರುತ್ತದೆ. ಈ ಸ್ಥಳದಲ್ಲಿ ಅಲ್ಲಮಪ್ರಭುಗಳು ಓಡಾಡಿರುವುದಕ್ಕೆ ಪುರವೆಗಳಿವೆ.

Contact Your\'s Advertisement; 9902492681

ಅಲ್ಲೊಂದು ದೊಡ್ಡ ಮಂದಿರವಿದೆ. ಸುಮಾರು 600 ಎಕರೆ ಜಮೀನನ್ನು ದೇವಸ್ಥಾನದ ಪೂಜಾರಿಗಳು ಒಕ್ಕಲುತನ ಸಾಗುವಳಿಗೆ ಬಳಸಿಕೊಂಡಿರುವುದನ್ನು ಕಾಣಬಹುದು.
ಚಿಮ್ಮಡ ಗ್ರಾಮದಲ್ಲಿ ಅಲ್ಲಮಪ್ರಭುವಿನ ದೇವಾಲಯವಿದೆ. ದೇವಾಲಯದ ಎದುರಿಗೆ ಹರಿವಾಣ (ಪರ್ಯಾಣ) ಮಂಟಪವಿದೆ.

ಊರ ಹೊರಗಡೆ ಇರುವ ದೊಡ್ಡ ದಿಬ್ಬದಲ್ಲಿ ಅಲ್ಲಮಪ್ರಭುಗಳು ವಾಯು ವಿಹಾರಕ್ಕೆ ಬರುತ್ತಿದ್ದ ಸ್ಥಳವಾಗಿತ್ತು ಎಂಬುದಕ್ಕಾಗಿ ಅಲ್ಲೊಂದು ಸ್ಮಾರಕ ನಿರ್ಮಿಸಿರುವುದನ್ನು ಕಾಣಬಹುದು. ಪ್ರಭುದೇವರ ಶೂನ್ಯಪೀಠಾರೋಹಣಕ್ಕೆ ಸಂಬಂಧಪಟ್ಟಂತೆ ಚೆನ್ನಬಸವಣ್ಣನ ವಚನದಲ್ಲಿ ಹರಿವಾಣ, ಬಟ್ಟಲು, ಪ್ರಸಾದದ ಪ್ರಸ್ತಾಪ ಬರುವಂತೆ ಈ ಸ್ಥಳಗಳಲ್ಲಿ ಈಗಲೂ ಹರಿವಾಣ ಹಾಗೂ ಕಿಚಡಿ ಉತ್ಸವ ನಡೆಯುತ್ತವೆ.

ತೇರದಾಳದಲ್ಲಿ ಕೂಡ ಅಲ್ಲಮಪ್ರಭುವಿನ ದೇವಾಲಯವಿದ್ದು, ಅದರ ಮುಂದೆಯೂ ಹರಿವಾಣ ಮಂಟಪವಿದೆ. ಅಲ್ಲಮಪ್ರಭುವಿಗೆ ಸಂಬಂಧಿಸಿದಂತೆ ಬಹು ದೊಡ್ಡ ದೇವಾಲಯವಿದು. ಇಲ್ಲಿ ದಿನಕ್ಕೆ ನಾಲ್ಕೈದು ಬಾರಿ ಪೂಜೆ ಮಾಡಲಾಗುತ್ತಿದೆ. ಕತೃ ಗದ್ದುಗೆಯ ಜೊತೆಗೆ ಮಗಿ (ಕುಂಡಲ) ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.

ಅಲ್ಲಮಪ್ರಭು ಹೆಸರಿನ ಬಾವಿ ಕೂಡ ಇದೆ ಎಂದು ಹೇಳಲಾಗುತ್ತಿದೆ. ಗುಡಿಯ ಮುಂದೆಯೇ ಸಿದ್ಧರಾಮೇಶ್ವರ ದೇವಾಲಯ ಇದೆ. ಸಿದ್ಧರಾಮನಿಗೆ ಕಂಬಳಿ ಏರಿಸುವ ಪದ್ಧತಿ ಇಲ್ಲಿರುವುದು ಬಹಳ ಮುಖ್ಯವಾದುದು.

ಗದಗನಲ್ಲಿ ಕೂಡ ಅಲ್ಲಮಪ್ರಭುಗಳ ಸ್ಮಾರಕಗಳು ಸಿಗುತ್ತವೆ. ಗದಗನಲ್ಲಿ ಇರುವ ಪ್ರಭುದೇವರ ದೇವಾಲಯವು ಈಗ ಬೇರೆಯವರ ಸುಪರ್ದಿಯಲ್ಲಿರುವುದನ್ನು ಕಾಣಬಹುದು. ಕಣವಿ ಹಾಗೂ ಕುರ್ತಕೋಟಿಗಳಲ್ಲಿ ಅಲ್ಲಮಪ್ರಭುವಿಗೆ ಸೇರಿದ ಮೂರು, ಮೂರು ಸ್ಮಾರಕಗಳಿವೆ.

ಮುಳಗುಂದದಲ್ಲಿ ಅಲ್ಲಮಪ್ರಭುವಿನ ಸ್ಮಾರಕ ಸೇರಿದಂತೆ ಮಡಿವಾಳ ಮಾಚಿದೇವರ ಶಿಲ್ಪ ಇರುವುದನ್ನು ಕಾಣಬಹುದು. ಅಲ್ಲಮಪ್ರಭುಗಳು ತಮ್ಮ ಗುರುಗಳನ್ನು ಹುಡಕಿಕೊಂಡು ಮೇಲಿನ ಈ ಭಾಗಗಳಲ್ಲಿ ಓಡಾಟ ನಡೆಸಿರಬೇಕು ಎಂಬ ವಿಷಯ ಕ್ಷೇತ್ರಕಾರ್ಯದಿಂದ ತಿಳಿದು ಬರುತ್ತವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here