ಶಹಾಬಾದ:ಪಕ್ಷಕ್ಕಾಗಿ ದುಡಿದವರಿಗೆ ಪಕ್ಷದಲ್ಲಿ ಸ್ಥಾನಮಾನ ದೊರೆಯುತ್ತದೆ ಎನ್ನುವುದಕ್ಕೆ ಇಂದು ಮಲ್ಲಿಕಾರ್ಜುನ ಪೂಜಾರಿ ಅವರು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾಗಿರುವುದೇ ಸಾಕ್ಷಿ ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಹೇಳಿದರು.
ಅವರು ಸೋಮವಾರ ಭಂಕೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನೂತನ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರಿ ಅವರಿಗೆ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪಕ್ಷದಲ್ಲಿ ದುಡಿದವರಿಗೆಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಿಲ್ಲ.ಪಕ್ಷಕ್ಕಾಗಿ ನಿಷ್ಠಾಂವತರಾಗಿ ಯಾರು ದುಡಿಯುತ್ತಾರೆ ಅವರನ್ನು ಗುರುತಿಸಿ ಸ್ಥಾನಮಾನಗಳನ್ನು ನೀಡುತ್ತದೆ.ಆದ್ದರಿಂದ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಒತ್ತು ನೀಡಬೇಕು.ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷ ನಿಮ್ಮನ್ನು ಗುರುತಿಸುವಂತೆ ಕೆಲಸ ಮಾಡಬೇಕು.ಅಲ್ಲದೇ ಪಕ್ಷಕ್ಕಾಗಿ ದುಡಿದ ಮಲ್ಲಿಕಾರ್ಜುನ ಪೂಜಾರಿ ಅವರನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಅವರನ್ನುಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದೆ.ಈಗ ಅವರ ಜವಾಬ್ದಾರಿ ಎಂದಿಗಿಂತಲೂ ಹೆಚ್ಚಾಗಿದೆ.ಪಕ್ಷ ನೀಡಿದ ಸ್ಥಾನಮಾನಗಳನ್ನು ಬಳಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮವಹಿಸಬೇಕೆಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಪೀರಪಾಶಾ ಮಾತನಾಡಿ, ಯಾರಲ್ಲಿ ತಾಳ್ಮೆ, ಪ್ರಾಮಾಣಿಕತೆ, ಪಕ್ಷಕ್ಕಾಗಿ ಬದ್ಧತೆ ಇದೆ ಅವರನ್ನು ಪಕ್ಷ ಗುರುತಿಸುತ್ತದೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರು ದೊಡ್ಡ ಹುದ್ದೆಗಳನ್ನು ನಿಭಾಯಿಸಿ, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಅಲ್ಲದೇ ಅನೇಕ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಜನರು ಕೈ ಹಿಡಿಯಲಿಲ್ಲ.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾಗಿ ಪಕ್ಷ ನೇಮಕ ಮಾಡಿದೆ. ಸುಳ್ಳು-ಗೊಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯ ಅಸಲಿಯತ್ತು ಜನರ ಮುಂದೆ ತರುವಂಥ ಕೆಲಸ ಕಾರ್ಯಕರ್ತರು ಮಾಡಬೇಕು. ಯುವಕರನ್ನು ಪಕ್ಷದತ್ತ ಸೆಳೆಯುವ ಮೂಲಕ ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಮಾಡುವ ಮೂಲಕ ಹಿಂದುಳಿದ ವರ್ಗದ ಸಮುದಾಯವನ್ನು ಒಟ್ಟುಗೂಡಿಸುವ ಕೆಲಸ ಮಾಡಬೇಕಿದೆ.ಅದಕ್ಕೆ ಎಲ್ಲಾ ಮುಖಂಡರು, ಕಾರ್ಯಕರ್ತರು ಮುಂದಾಗಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಸುರೇಶ ಮೆಂಗನ, ರವಿ ನರೋಣಿ ಮಾತನಾಡಿದರು. ಮುಖಂಡರಾದ ಅಜಿತ್ಕುಮಾರ ಪಾಟೀಲ, ಮೃತ್ಯುಂಜಯ್ ಹಿರೇಮಠ,ಭೀಮುಗೌಡ, ಮಾಣಿಕಗೌಡ, ವಿಶ್ವರಾಧ್ಯ ಬೀರಾಳ, ಶರಣಬಸಪ್ಪ ಧನ್ನಾ, ಶರಣಗೌಡ ದಳಪತಿ, ಮುನ್ನಾ ಪಟೇಲ್, ಮುಜಾಹಿದ್ದಿನ್, ದೇವೆಂದ್ರ ಕಾರೊಳ್ಳಿ, ಭರತ್ ಧನ್ನಾ,ಮಹ್ಮದ್ ಜಾಕೀರ, ಇಮ್ರಾನ್ ಇತರರು ಇದ್ದರು.