ಶಿಕ್ಷಕರಿಗೆ ‘ಆದರ್ಶ ಶಿಕ್ಷಕ’ ಪ್ರಶಸ್ತಿ ಪ್ರದಾನ

0
32

ಕಮಲಾಪುರ: ನಾವು ಪಡೆಯುವ ಅಕ್ಷರದ ಬೆಳಕಿನಿಂದ ಸಮಾಜದಲ್ಲಿನ ಅಜ್ಞಾನದ ಗಾಡಾಂಧಕಾರವನ್ನು ತೆಗೆದು ಹಾಕಿ ಆತ್ಮವಿಶ್ವಾಸ. ಚೈತನ್ಯ ನೀಡಬೇಕು. ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರ ಪಾತ್ರ ಮತ್ತು ಅವರು ನೀಡುವ ಮೌಲ್ಯಗಳನ್ನೊಳಗೊಂಡಿರುವ ಸಂದೇಶಗಳು ಮಹತ್ತರ ಪಾತ್ರ ವಹಿಸುತ್ತವೆ. ಹಾಗಾಗಿಯೇ ಶಿಕ್ಷಕ ವೃತ್ತಿಗೆ ತನ್ನದೇ ಆದ ವಿಶಿಷ್ಠ ಘನತೆ, ಗೌರವ ಮತ್ತು ಮಹತ್ತರ ಜವಾಬ್ದಾರಿ ಕೂಡ ಇದೆ. ಈ ನಿಟ್ಟಿನಲ್ಲಿ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರ ಸಾಮಾಜಿಕ ಕಳಕಳಿ ಇಂದಿನ ಸಮಾಜಕ್ಕೆ ಮಾದರಿಯಾಗುತ್ತದೆ ಎಂದು ಮಹಾಗಾಂವ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ನುಡಿದರು.

ಕಲ್ಯಾಣ ಕರ್ನಾಟಕೋತ್ಸವ ಅಂಗವಾಗಿ ಕಲಬುರಗಿಯ ವಿಶ್ವಜ್ಯೋತಿ ಪ್ರತಿಷ್ಠಾನವು ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢ ಶಾಲಾ ಆವರಣದಲ್ಲಿ ಗುರುವಾರ ಆಯೋಜಿಸಿದ ‘ಕಲ್ಯಾಣ ಶಿಕ್ಷಣ’ ವಿಶೇಷ ಅಬಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಿದ್ಯೆ ನಮ್ಮನ್ನು ನಾವು ಅರಿತುಕೊಳ್ಳುವ ಕೈ ಗನ್ನಡಿವಿದ್ದಂತೆ. ವ್ಯಕ್ತಿಯ ಒಳಗಣ್ಣನ್ನು ತೆರೆಸಿ ಜೀವನದ ಬೆಳಕನ್ನು ತೋರಿಸುವುದು ನಿಜವಾದ ಶಿಕ್ಷಣವೆನಿಸಿಕೊಳ್ಳುತ್ತದೆ. ನಾವು ಪಡೆದ ಆ ಶಿಕ್ಷಣದಿಂದಲೇ ನಮ್ಮ ಬದುಕು ಮತ್ತು ನಮ್ಮ ಪ್ರದೇಶ ಕಲ್ಯಾಣವಾಗಬೇಕಾಗಿದೆ. ಈ ದಿಸೆಯಲ್ಲಿ ಪ್ರತಿಷ್ಠಾನ ಸಮಾಜದ ಬದಲಾವಣೆಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆ ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ಪಣ ತೊಡಲಾಗಿದೆ ಎಂದರು.

ತಹಾಸೀಲ್ದಾರ್ ಅಂಜುಮ್ ತಬಸ್ಸುಮ್ ಮಾತನಾಡಿ, ಪದವಿ, ಹಣ, ಅಂತಸ್ತನ್ನು ಗಳಿಸಿಕೊಡುವುದು ಮುಖ್ಯವಲ್ಲ. ನೈತಿಕತೆ, ಜ್ಞಾನ, ಜೀವನ ಕೌಶಲ್ಯ, ಮಾನವೀಯ ಮೌಲ್ಯಗಳು ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣದ ಗುರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಕ ವೃತ್ತಿಯ ಜತೆಗೆ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ತಾಲೂಕಿನ ವಿವಿಧ ಶಾಲೆಗಳ ಪ್ರತಿಭಾವಂತ ಶಿಕ್ಷಕರಿಗೆ ‘ಆದರ್ಶ ಶಿಕ್ಷಕ’ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು.

ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಮುಖ್ಯಸ್ಥ ಜೀವನರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್.ಐ. ಬಿ.ಎಸ್.ಪಾಟೀಲ, ಕಸಾಪ ಮಾಜಿ ಅಧ್ಯಕ್ಷ ದಾಸಿಮಯ್ಯಾ ವಡ್ಡನಕೇರಿ, ತಾಲೂಕಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ ತಪಲಿ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಸಾಹಿತ್ಯ ಪ್ರೇರಕರಾದ ಅಶೋಕ ಸೂಗೂರ, ರಾಮಕೃಷ್ಣ ಖಡಕೆ,  ನಿವೃತ್ತ ಶಿಕ್ಷಕ ಪುಂಡಲಿಕರಾವ ಚಿರಡೆ, ಶಿಕ್ಷಕ ಸಾಹಿತಿ ರವಿಕುಮಾರ ಎಲ್.ಹೂಗಾರ ಮಾಡಿಯಾಳ, ಪ್ರಮುಖರಾದ ಸಂತೋಷ ಕುಡಳ್ಳಿ, ಸಂತೋಷ ಕುಂಬಾರ, ವಿಶ್ವನಾಥ ತೊಟ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here