ಡಾ. ಫ.ಗು. ಹಳಕಟ್ಟಿ ವಚನ ವಿನ್ಯಾಸಕಾರ: ಡಾ. ಈಶ್ವರ ಮಂಟೂರ

0
109

ಕಲಬುರಗಿ: ಜನಸಾಹಿತ್ಯದ ತಾಯಿಬೇರು ವಚನ ಸಾಹಿತ್ಯ. ಜೀವಾನುಭವದಿಂದ ವಾಸ್ತವಿಕ ನೆಲೆಗಟ್ಟಿನ ಮೇಲೆ ಒಡಮೂಡಿದ ವಚನ ಸಾಹಿತ್ಯ ಜನ ಬದುಕುವ ಸಾಹಿತ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಯುವ ಘಟಕದ ವತಿಯಿಂದ ಡಾ. ಫ.ಗು. ಹಳಕಟ್ಟಿ ಅವರ ಬದುಕು-ಬರಹ ಕುರಿತು ನಗರದ ವಿಶ್ವನಾಥರೆಡ್ಡಿ ಮುದ್ನಾಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಜನರ ಹೃದಯಕ್ಕೆ ತಟ್ಟುವ ಇಂತಹ ವಚನ ಸಾಹಿತ್ಯವನ್ನು ಸಂಗ್ರಹಿಸಿಕೊಟ್ಟ ಫ.ಗು. ಹಳಕಟ್ಟಿಯವರನ್ನು ಕನ್ನಡಿಗರು ಸದಾ ಸ್ಮರಿಸಬೇಕು ಎಂದರು.

Contact Your\'s Advertisement; 9902492681

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಪೇಂದ್ರ ಪಾಟೀಲ ಆಶಯ ನುಡಿ ನುಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ಎಸ್.ಡಿ. ನಿಜಗುಣಿ ಮುಖ್ಯ ಅತಿಥಿಯಾಗಿದ್ದರು. ಪ್ರಾಚಾರ್ಯರಾದ ಡಾ. ಪ್ರೇಮಾ ಅಪಚಂದ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ವೇದಿಕೆಯಲ್ಲಿದ್ದರು.

ಗೋಷ್ಠಿ-೧: ಶರಣ ಸಾಹಿತ್ಯಕ್ಕೆ ಫ.ಗು. ಹಳಕಟ್ಟಿ ಅವರ ಕೊಡುಗೆ ವಿಷಯ ಕುರಿತು ಹುನ್ನೂರ-ಮದರಖಂಡಿ ಬಸವ ಜ್ಞಾನ ಗುರುಕುಲದ ಡಾ. ಈಶ್ವರ ಮಂಟೂರ ಮಾತನಾಡಿ, ಕನ್ನಡದ ಅನರ್ಘ್ಯರತ್ನದಂತಿರುವ ವಚನ ಸಾಹಿತ್ಯ ಬೆಳಕಿಗೆ ಬರಲು ಫ.ಗು. ಹಳಕಟ್ಟಿಯವರ ಕೊಡುಗೆ ಅಪಾರವಾಗಿದ್ದು, ಮನೆ, ಮಠ-ಮಂದಿರಗಳ ಜಗಲಿ ಮೇಲೆ ಪೂಜೆಗೊಂಡು ಹಾಳಾಗುತ್ತಿದ್ದ ವಚನದ ಕಟ್ಟುಗಳನ್ನು ಸಂರಕ್ಷಿಸಿ ಪರಿಷ್ಕರಿಸಿ ಅವರು ಕೊಟ್ಟಿದ್ದರಿಂದಲೇ ನಾವಿಂದು ವಚನ ಸಾಹಿತ್ಯ, ಅದರ ಪ್ರಸ್ತುತತೆ, ವಾಸ್ತವಿಕತೆ ಇತ್ಯಾದಿಗಳ ಬಗ್ಗೆ ಮಾತನಾಡುವಂತಾಗಿದೆ ಎಂದು ಹೇಳಿದರು.
ಪೂಜಿಸುವ ಕೈಗಳು ಕಾಯಕ ಮಾಡಬೇಕು, ಜೀವನ ಅಶಾಶ್ವತ ಸಾಹಿತ್ಯ ಶಾಶ್ವತ, ಬದಲಾವಣೆಗೆ ಹಾತೊರೆದು ಕೆಲಸ ಮಾಡಿದರೆ ಯಶಸಸ್ಸು ನಮ್ಮ ಕಣ್ಣ ಮುಂದೆ ಇರುತ್ತದೆ ಎಂದು ನುಡಿದ ಹಳಕಟ್ಟಿಯವರು, ಕುಶಾಗ್ರಮತಿ, ತಾಳ್ಮೆ, ಆತ್ಮಸ್ಥೈರ್ಯದಿಂದ ಮುನ್ನುಗ್ಗಿದರೆ ಅಸಾಧ್ಯವಾದುದು ಸಾಧ್ಯವಾಗಬಲ್ಲದು. ಕೆಲಸ ಆಗುವವರೆಗೆ ಛಲ ಬಿಡಬಾರದು ಎಂದು ಬದುಕಿನ ಸೂತ್ರ ಹೇಳಿಕೊಟ್ಟಿದ್ದಾರೆ. ಅವರು ಕೇವಲ ವಚನಗಳನ್ನು ಮಾತ್ರ ಸಂಗ್ರಹಿಸಲಿಲ್ಲ.

ವಚನ ಸಾರವನ್ನು ಸಹ ಸಂಗ್ರಹಿಸಿಕೊಡುವ ಮೂಲಕ ಶರಣ ಚರಿತ್ರಾಮೃತಕ್ಕೆ ಮುನ್ನುಡಿ ಬರೆದಿದ್ದಾರೆ. ಅಂತೆಯೇ ಅವರನ್ನು ವಚನ ವಿನ್ಯಾಸಕಾರ, ವಚನ ಗುಮ್ಮಟ, ವಚನ ಪಿತಾಮಹ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ನಿವೃತ್ತ ಕೃಷಿ ಅಧಿಕಾರಿ ಬಸವರಾಜ ಎಸ್. ಪುಣ್ಯಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಡಾ. ಜಯಶ್ರೀ ದಂಡೆ ಅಧ್ಯಕ್ಷತೆ ವಹಿಸಿದ್ದರು. ಸಮಾಜಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಡಾ. ಫ.ಗು. ಹಳಕಟ್ಟಿಯವರ ಕೊಡುಗೆ ಕುರಿತು ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಪಾಟೀಲ ಮಾತನಾಡಿದರು. ವಚನೋತ್ಸವ ಪ್ರತಿಷ್ಠಾನದ ಅಧ್ಯಕ್ಷ ಡಾ. ಬಸವರಾಜ ಮೋದಿ ಮುಖ್ಯ ಅತಿಥಿಯಾಗಿದ್ದರು. ಹಟಗಾರ ಸಮಾಜದ ರಾಜ್ಯಾಧ್ಯಕ್ಷ ಆರ್.ಸಿ. ಘಾಳೆ ಅಧ್ಯಕ್ಷತೆ ವಹಿಸಿದ್ದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ವಕೀಲ ಬಾಬುರಾವ ಮಂಗಾಣೆ ಸಮಾರೋಪ ನುಡಿಗಳನ್ನಾಡಿದರು. ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ತೇಗಲತಿಪ್ಪಿ ಸ್ವಾಗತಿಸಿದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ಸಂಗಮೇಶ ಕರಡಿ ವಂದಿಸಿದರು. ಬಿ.ಎಂ. ಪಾಟೀಲ ಕಲ್ಲೂರ, ಶರಣಬಸವ ಮಂಗಲಗಿ, ವಿನೋದಕುಮಾರ ಜೇನೆವರಿ, ಚಾಂದಪಾಶಾ, ಡಾ. ಶೈಲಜಾ ಬಾಗೇವಾಡಿ, ವಿಶ್ವನಾಥ ಮಂಗಲಗಿ, ಶಿವಶರಣ ಪಾಟೀಲ, ರಮೇಶ ದೊಡ್ಡಮನಿ, ರಾಜಶೇಖರ ಮರಪಳ್ಳಿ, ಸಿದ್ಧಲಿಂಗೇಶ್ವರ ಶಿರೂರಮಠ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here