ಶ್ರೇಷ್ಠ ಶರಣರ ದಾಂಪತ್ಯ ಬದುಕಿದ ಬಾಚಿ ಕಾಯಕದ ಬಸವಯ್ಯ ದಂಪತಿ

0
225

೧೨ನೇ ಶತಮಾನವನ್ನು ಸಾಂಸ್ಕೃತಿಕ, ಸಾಹಿತ್ಯಕ, ರಾಜಕೀಯ, ಆಧ್ಯಾತ್ಮಿಕ, ವಿಶಿಷ್ಟ, ವಿನೂತನ ಯುಗವೆಂದು ಕರೆಯುತ್ತಾರೆ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಹಲವು ಬಗೆಯ ಕ್ರಾಂತಿಗಳು ನಮ್ಮನ್ನು ಕಣ್ತೆರೆಸುವಂತೆ ಮಾಡುತ್ತವೆ. ಸ್ತ್ರೀ ಸಮಾನತೆಗೆ ಅವರು ಮಾಡಿದ ಕ್ರಾಂತಿ ಬಹಳ ದೊಡ್ಡದು. ಹೆಣ್ಣನ್ನು ಅಸ್ಪೃಶ್ಯಳು ಎಂಬ ಭಾವಿಸಿಕೊಂಡ ಕಾಲದಲ್ಲಿ, ಶೂದ್ರಳೆಂದು ತಳಿದಿದ್ದ ಕಾಲದಲ್ಲಿ ಬಸವಣ್ಣ ಈ ನಾಡಿನಲ್ಲಿ ಉದಯಿಸಿ (೧೧೩೪) ಬಂದರು.

Contact Your\'s Advertisement; 9902492681

ಇಂದು ಬಸವಣ್ಣ ನಮಗೆಲ್ಲರಿಗೂ ಪ್ರಾಣವಾಯುವಿನಂತೆ ಅವಶ್ಯ. ಬಡವ-ಬಲ್ಲಿದ, ಸ್ತ್ರೀ-ಪುರುಷ, ಉಚ್ಚ-ನೀಚ ಎಂದು ಜಾತಿಯ ಆಧಾರದಲ್ಲಿ ವರ್ಗೀಕರಿಸಿದ್ದ ಕಾಲದಲ್ಲಿ ಬಸವಣ್ಣ ನಮಗೆ ನುಡಿಗಲಿಸಿದ, ನಡೆಗಲಿಸಿದ. ಅವರಿಟ್ಟ ನಡೆ ಇತಿಹಾಸವಾಯಿತು. ಹೆಣ್ಣು ಮಕ್ಕಳಿಗೆ ಅವರು ಬಹುದೊಡ್ಡ ಸ್ಥಾನ ಕೊಟ್ಟರು. ಮಹಾದೇವಿಯ ಸ್ಥಾನ ನೀಡಿದರು. ಇಂತಹ ಸ್ತ್ರೀ ಆಂದೋಲನಕ್ಕೆ ಮೊದಲ ಕಹಳೆ ಊದಿದವಳು ಅಕ್ಕ ಮಹಾದೇವಿ.

ಪರವಧುವನು ಮಹಾದೇವಿಯೆಂಬೆ, ಪರಧನ, ಪರಸ್ತ್ರೀಯರಿಗೆ ಮನ ಎಳಸಬಾರದು, ಮೊಲೆ ಉಂಬ ಭಾವ ತಪ್ಪಿ ಅಪ್ಪಿದರೆ ಹೇಗೆ? ಕೊಲಬೇಡ, ಕಲಬೇಡ….ಮುಂತಾದ ಬಸವಾದಿ ಶರಣರು ಕೆಲವು ನೀತಿ ಸಂಹಿತೆಗಳನ್ನು ಹೇಳಿದ್ದಾರೆ.

ಲಿಂಗ ಶರೀರವಾದ ಬಳಿಕ ಅಂಗದ ಮೇಲೆ ಸದಾ ಲಿಂಗ ಧರಿಸಬೇಕು. ಇದನ್ನು ಜ್ಞಾನ ತನುವಿನಿಂದ ಅಪ್ಪಿಕೊಳ್ಳಬೇಕು. ನಾರಿಗೆ ಗುಣವೇ ಶೃಂಗಾರವೆಂದಂತೆ ನಮ್ಮ ಕಿವಿಗಳಿಗೆ ಶರಣರ ಸೂಳ್ನುಡಿಗಳೇ ಸುನೀತಗಳಾಗಿವೆ. ಹೀಗಾಗಿ ನಿಮ್ಮ ಮುಡಿಗೆ ಹೂ ತರುವೆನಲ್ಲದೆ ಹುಲ್ಲ ತಾರೆನು ಎಂದು ಅಕ್ಕ ಮಹಾದೇವಿ ಹೇಳಿದರು. ಆಸೆಯೆಂಬುದು ಅರಸಂಗಲ್ಲದೆ, ಶಿವಭಕ್ತರಿಗುಂಟೆ? ಎಂದ ಆಯ್ದಕ್ಕಿ ಲಕ್ಕಮ್ಮ ಪ್ರಾಮಾಣಿಕ ಜೀವನ ಕಲಿಸಿಕೊಟ್ಟರು. ಅವರು ಇಂದಿಂಗೆ ನಾಳಿಂಗೆ ಬೇಕೆಂದನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಹೇಳಿದರು.

ಶರಣರು ಒಕ್ಕಲು ಮಕ್ಕಳ ದಾರಿಯಲ್ಲಿ ನಡೆದವರು. ಅಂತಹ ಶರಣರಲ್ಲಿ ಬಾಚಿ ಕಾಯಕದ ಬಸವಯ್ಯ ಮತ್ತು ಪುಣ್ಯಶ್ತ್ರೀ ಕಾಳವ್ವೆ ದಂಪತಿ ಕೂಡ ಒಬ್ಬರು. ಇಬ್ಬರೂ ವಚನಗಳನ್ನು ರಚಿಸಿದ್ದಾರೆ. ಬಸವಯ್ಯನ ೩೧ ವಚನಗಳು, ಕಾಳವ್ವೆಯ ೨ ವಚನ ದೊರೆತಿವೆ. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರಲಿಂಗ, ಕರ್ಮಹರ ಕಾಲೇಶ್ವರ ಬಸವಯ್ಯನ ಒಂದು ವಚನ ೭೫ ಸಾಲಿನ ವಚನವಿದೆ.

ಶ್ರೇಷ್ಠ ಶರಣರು ಒಪ್ಪಿದ ದಾಂಪತ್ಯ ಅವರದಾಗಿತ್ತು. ಒಂದು ಕೈಯಲ್ಲಿ ಸಂಸಾರ ಹಿಡಿದಿರಬೇಕು, ಇನ್ನೊಂದು ಕೈಯಲ್ಲಿ ವಚನ ಶಾಸ್ತ್ರ ಇನ್ನೊಂದು ಕೈಯಲ್ಲಿ ಇರಬೇಕು. ಜಾಣನು ಎರಡನ್ನೂ ನಡೆಸುವಂತೆ ಇವರ ದಾಂಪತ್ಯವಿತ್ತು. ವಿಕಾರಿ ವಿರಕ್ತನೇ? ಕುಹಕಿ ಗುರುಮೂರ್ತಿಯೇ? ಎಂದು ಪ್ರಶ್ನಿಸಿದ ಬಸವವಯ್ಯ, ಕಾಯಕ ತಪ್ಪಿದಡೆ ಸೈರಿಸಬಾರದು ಎಂದು ಕಾಳವ್ವೆ ಹೇಳಿದರು. ಅವರಿಬ್ಬರೂ ಕಾಯಕದಲ್ಲಿ ತೊಡಗಿದಾಗ, ಹೆಣ್ಣುಮಗಳನ್ನು ಬಸವಯ್ಯ ನೋಡಿದ ಬಾಚಿ ಕೈತಪ್ಪಿ ಕಾಲಿಗೆ ಬಡಿದು ರಕ್ತ ಬಂತು. ವೈದ್ಯ ಸಂಗಣ್ಣನ ಔಷಧಿ ತೆಗೆದುಕೊಂಡು ಬಾ ಎಂದು ಕಾಳವ್ವೆಗೆ ಹೇಳುತ್ತಾನೆ. ಆಗ ಕಾಳವ್ವೆ ಔಷದಿಯನ್ನು ತಂದು ಹಚ್ಚದೆ.

ಕೈತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತಹೀನನ ನೆರೆಯಲು ನರಕಕ್ಕೆ ಮೂಲ
ಕರ್ಮಹರ ಕಾಳೇಶ್ವರಾ

ಎಂಬ ವಚನದ ಸಾಲು ತಾಡೋಲೆಯಲ್ಲಿ ಬರೆಯುವ ಮೂಲಕ ಕೇವಲ ಬಸವಯ್ಯನಿಗೆ ಮಾತ್ರ ಎಚ್ಚರಿಸಲಿಲ್ಲ. ತಪ್ಪುವುದು ಕೈಯಾದರೂ ಬಡಿಸಿಕೊಳ್ಳುವುದು ಕಾಲು. ಕಾಯಕದ ವ್ರತ ತಪ್ಪಿದೆ ನೀನು. ಇದಕ್ಕೆಲ್ಲ ಮನಸ್ಸು ಕಾರಣ. ಇಂತಹ ಮನಸ್ಸುನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ತನ್ನ ಪತಿ ಬಸವಯ್ಯನಿಗೆ ಹೇಳುವುದರ ಜೊತೆಗೆ ಸಮಾಜದ ಬದುಕನ್ನು ಎಚ್ಚಿರಿಸದವರು, ಎತ್ತರಿಸಿದವರು ಶರಣರು.

ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದೊಡೆ ಮಡಿವಾಳಂಗಿಕ್ಕುವುದು
ಮನ ಮಾಸಿದೊಡೆ ಕೂಡಲಸಂಗನ ಶರಣರ
ಅನುಭಾವ ಮಾಡುವುದು

ಎನ್ನುವಂತೆ ಅಜ್ಞಾನವನ್ನಳಸಿಕೊಂಡು ಸುಜ್ಞಾನದ ಬೆಳೆಯನ್ನು ಬಿತ್ತಿ ಬೆಳೆದವರು ಶರಣರು. ಇಂತಹ ಶರಣರ ನುಡಿಗಡಣಗಳು ನಮ್ಮೆಲ್ಲರ ಬದುಕಾಗಬೇಕು. ಅಂತರಂಗಶುದ್ಧಿ ಬಹಿರಂಗ ಶುದ್ಧಿಗಿಂತ ಬಹಳ ಮುಖ್ಯ. ಶರಣರ ವಚನಗಳು ಅಂತರಂಗ-ಬಹಿರಂಗ ಶುದ್ಧಿಯ ಆತ್ಮದರ್ಶನದಂತಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here