’ರೇಷ್ಮೆ ಬೆಳೆಯಿಂದ ನಾನು ಪ್ರತಿ ತಿಂಗಳು ನೌಕರರಂತೆ ಸಂಬಳ ಪಡೆಯುತ್ತಿರುವೆ’

0
17

ಕಲಬುರಗಿ: ಸಾಹೇಬ್ರ, ರೇಷ್ಮೆ ಬೆಳೆಯಿಂದ ನಾನು ಪ್ರತಿ ತಿಂಗಳು ಸಂಬಳ ಪಡೆತ್ತೀನಿ. ರೇಷ್ಮೆ ಕೃಷಿ ನನಗೆ ಸರ್ಕಾರಿ ನೌಕರಿ ಇದ್ಹಂಗ.॒.ಈ ಮಾತು ಆಡಿದ್ದು ರೇಷ್ಮೆ ಬೆಳೆಗಾರ ಶ್ರೀಶೈಲ ಗೊಬ್ಬೂರ.

ಹೌದು, ಇಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮೇಳಕುಂದಾ-ಬಿ ಗ್ರಾಮದಲ್ಲಿ ರೇಷ್ಮೆ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ. ಕೆ. ಸಿ. ನಾರಾಯಣ ಗೌಡ ಆವರು ರೇಷ್ಮೆ ಬೆಳೆಗಾರರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ರೈತರು ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಂಡರು.

Contact Your\'s Advertisement; 9902492681

ನಾನು ಗೊಬ್ಬೂರು-ಬಿ ಗ್ರಾಮದಲ್ಲಿ ೩ ಎಕರೆ ಜಮೀನಿನಲ್ಲಿ ಕಳೆದ ೧೫ ವರ್ಷದಿಂದ ರೇಷ್ಮೆ ಬೆಳೆಯುತ್ತಿದ್ದೇನೆ. ಈ ವರ್ಷ ಎರಡು ಬೆಳೆ ಬೆಳೆದಿದ್ದು, ಕ್ರಮವಾಗಿ ತಲಾ ೨ ಲಕ್ಷದ ೧೦ ಸಾವಿರ ರೂಪಾಯಿ ಹಾಗೂ ೨ ಲಕ್ಷದ ೩೦ ಸಾವಿರ ರೂಪಾಯಿ ಪಡೆದಿದ್ದೇನೆ. ಇದು ನಾನು ಪ್ರತಿ ತಿಂಗಳು ಪಗಾರ ಪಡೆದಂಗೆ ಆಗ್ತಿದೆ ಎಂದು ಹೆಮ್ಮೆಯಿಂದ ಶ್ರೀಶೈಲ ಅವರು ಸಚಿವರಿಗೆ ತಿಳಿಸಿದರು. ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ, ದೂರದ ರಾಮನಗರದ ಮಾರುಕಟ್ಟೆಗೆ ರೇಷ್ಮೆಗೂಡನ್ನು ಮಾರಾಟಕ್ಕೆ ಕೊಂಡೊಯ್ಯಲು ಸಮಸ್ಯೆಯಾಗುತ್ತಿದೆ. ಕಲಬುರಗಿಯಲ್ಲೇ ಮಾರುಕಟ್ಟೆ ಸ್ಥಾಪಿಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಮತ್ತೊಬ್ಬ ಬೆಳೆಗಾರ ಅಂಬರಾಯ ಅವರು ಕೂಡ ಹುಮ್ಮಸ್ಸಿನಿಂದ ತನ್ನ ರೇಷ್ಮೆ ಕೃಷಿ ಕಾಯಕದ ಬಗ್ಗೆ ಮಾತನಾಡಿದರು. ೨೫ ವರ್ಷದಿಂದ ರೇಷ್ಮೆ ಕೃಷಿಯಲ್ಲಿ ತೊಡಗಿದ್ದು, ಈ ವರ್ಷ ಈಗಾಗಲೇ ೪ ಬೆಳೆ ತೆಗೆದಿದ್ದೇನೆ. ರಾಮನಗರ ಮಾರುಕಟ್ಟೆಯಲ್ಲಿ ಒಂದು ಕೆಜಿ ರೇಷ್ಮೆಗೂಡಿಗೆ ೫೧೧ ರೂಪಾಯಿ ಸಿಕ್ಕಿದೆ ಎಂದು ಸಂತಸದಿಂದ ನುಡಿದರು. ಆರಂಭದಲ್ಲಿ ಬುಟ್ಟಿ (ಚಂದ್ರಿಕೆ)ಯಲ್ಲಿ ರೇಷ್ಮೆ ಹುಳುಗಳ ಸಾಕುತ್ತಿದ್ದೆ. ನಂತರದ ವರ್ಷಗಳಲ್ಲಿ ಹೊಸ ವಿಧಾನ ಕಂಡುಕೊಂಡಿದ್ದೇನೆ ಎಂದರು.

ಇನ್ನೊಬ್ಬ ಹಿಪ್ಪುನೇರಳೆ ಬೆಳೆಗಾರ ನಾಗೇಂದ್ರಪ್ಪಗೌಡ ಸಂವಾದ ನಡೆಸಿ, ಈ ವರ್ಷ ೩ ಬೆಳೆಯಿಂದ ೩ ಲಕ್ಷದ ೬೦ ಸಾವಿರ ರೂಪಾಯಿ ಗಳಿಸಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡ ಅವರು, ಪ್ರಮುಖವಾಗಿ ರೇಷ್ಮೆ ಗಿಡಗಳಿಗೆ ನೀರು ಹಾಯಿಸುವ ಡ್ರಿಪ್ ಸಮಸ್ಯೆಯಿದ್ದು, ಲ್ಯಾಟರಲ್ ನವೀಕರಣವನ್ನು ೧೦ ವರ್ಷದಿಂದ ೫ ವರ್ಷಗಳಿಗೆ ಇಳಿಸುವಂತೆ ಅವರು ಅಲವತ್ತುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಕೆ. ಸಿ. ನಾರಾಯಣ ಗೌಡ ಅವರು, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಈಗಾಗಲೇ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕಲಬುರಗಿಯಲ್ಲಿ ಬೃಹತ್ ರೇಷ್ಮೆ ಮಾರುಕಟ್ಟೆಗೆ ೧೦ ಎಕರೆ ಜಮೀನು ಒದಗಿಸಲು ಸೂಚಿಸಲಾಗಿದೆ. ಸದ್ಯದಲ್ಲೇ ಭೂಮಿ ಪೂಜೆ ಮಾಡಲಾಗುವುದು ಎಂದು ರೈತರಿಗೆ ವಾಗ್ದಾನ ಮಾಡಿದರು.

ನಾನು ಕೂಡ ಮಣ್ಣಿನ ಮಗನಾಗಿದ್ದು, ಚಿಕ್ಕಂದಿನಲ್ಲಿ ರೇಷ್ಮೆ ಬೆಳೆಯಲ್ಲಿ ತೊಡಗಿದ್ದೇನು. ಕಷ್ಟಪಟ್ಟು ದುಡಿದಲ್ಲಿ ಸಾಕಷ್ಟು ಲಾಭಗಳಿಸಬಹುದು. ಉದ್ಯೋಗವಿಲ್ಲ ಎಂದು ತಮ್ಮ ಮಕ್ಕಳನ್ನು ತಿರುಗಾಡಲು ಬಿಡದೆ, ರೇಷ್ಮೆ ಕೃಷಿಯಲ್ಲಿ ತೊಡಗಿಸಿ ಎಂದು ಬುದ್ಧಿವಾದ ಹೇಳಿದರು.

ಈ ಸಂದರ್ಭದಲ್ಲಿ ಕೆಕೆಅರ್‌ಡಿಬಿ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಮಾತನಾಡಿ, ಇದೇ ಮೊದಲ ಬಾರಿಗೆ ರೇಷ್ಮೆ ಸಚಿವರೊಬ್ಬರು ಬೆಳೆಗಾರರ ಹೊಲದಲ್ಲೇ ಸಂವಾದ ನಡೆಸುತ್ತಿದ್ದಾರೆ ಎಂದು ನಾರಾಯಣ ಗೌಡ ಅವರನ್ನು ಹಾಡಿಹೊಗಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಶ್ರೀಮತಿ ಸವಿತಾ ವಿ. ಅಮರಶೆಟ್ಟಿ, ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ್, ಕಲಬುರಗಿ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ವೀರಯ್ಯ ಮಠಪತಿ, ಕೇಂದ್ರ ಕಚೇರಿಯ ರೇಷ್ಮೆ ಜಂಟಿ ನಿರ್ದೇಶಕ ವಿಶ್ವನಾಥ, ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ನಾಗಪ್ಪ ಬಿರಾದಾರ, ಉಪನಿರ್ದೇಶಕ ಪ್ರಕಾಶ್ ಬಾಬು ಇನ್ನಿತರ ಗಣ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here