ನಮ್ಮ ಪ್ರಮಥ ಮತ್ತು ಚಿತ್ರ ನಟ ಪುನೀತ್

0
65
  • ಡಾ. ಶಿವರಂಜನ್ ಸತ್ಯಂಪೇಟೆ, ಕಲಬುರಗಿ

ಇಂದು ಅಕ್ಟೋಬರ್ 29 (ಶುಕ್ರವಾರ) ಮಧ್ಯಾಹ್ನ ಸುಮಾರು 12.30 ಗಂಟೆಯಾಗಿರಬಹುದು. ನಮ್ಮ ನೆರೆಮನೆಯ ಸಹೋದರಿಯೊಬ್ಬರು ನನ್ನ ಹೆಂಡತಿಗೆ ಫೋನ್ ಮಾಡಿ ಪುನೀತ್ ರಾಜಕುಮಾರ್ ಗೆ ಹಾರ್ಟ್ ಅಟ್ಯಾಕ್ ಅಂತೆ ಟಿವಿಯಲ್ಲಿ ಬರುತ್ತಿದೆ ನೋಡಿ ಎಂದು ಹೇಳಿದರು.

ಟಿವಿ ಆನ್ ಮಾಡಿದ್ದೇ ತಡ ಪುನೀತ್ ಆರೋಗ್ಯ ಸ್ಥಿತಿ ಗಂಭೀರ-ಚಿಂತಾಜನಕ ಎಂಬಿತ್ಯಾದಿಯಾಗಿ ಹೇಳುತ್ತಿದ್ದರು. ನನ್ನನ್ನು ಸೇರಿದಂತೆ ಮಡಿದಿ ಮಕ್ಕಳಿಗೆಲ್ಲ ಏಕದಂ ಶಾಕ್ ಆದಂತಾಯಿತು. ಸಿಎಂ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಚಿತ್ರರಂಗದ ಗಣ್ಯಾತಿಗಣ್ಯರು ಬೆಂಗಳೂರಿನ ವಿಕ್ರಮ ಆಸ್ಪತ್ರೆಗೆ ಬಂದು ಹೋಗುವುದನ್ನು ನೋಡಿದಾಗ ನನಗಂತೂ ಅವರು ತೀರಿಕೊಂಡಿದ್ದಾರೆ ಎಂಬುದು ಖಾತ್ರಿಯಾಯಿತು.

Contact Your\'s Advertisement; 9902492681

ಕೆಲಸದ ನಿಮಿತ್ತ ಹೊರಗಡೆ ಹೋಗುವುದರಿಂದ ನಮ್ಮ ಮನೆಯವರಿಗೆ ಅವರು ಖಂಡಿತ ತೀರಿಕೊಂಡಿದ್ದಾರೆ. ಆದರೆ ಅದಿನ್ನೂ ಡಿಕ್ಲೇರ್ ಮಾಡುತ್ತಿಲ್ಲ ಎಂದು ಹೇಳಿ ಬೈಕ್ ಹತ್ತಿದೆ. ನವಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದೆ. ಮಧ್ಯಾಹ್ನ ಸರಿಯಾಗಿ ಎರಡುವರೆ ಗಂಟೆಯಾಗಿತ್ತು. ಟಿವಿಯಲ್ಲಿ ಪುನೀತ್ ಸಾವಿನ ಸುದ್ದಿಯನ್ನು ಡಿಕ್ಲೇರ್ ಮಾಡುತ್ತಿದ್ದಂತೆಯೇ ನನ್ನ ಕಿರಿಯ ಮಗ ಪ್ರಣವ ನನಗೆ ವಿಡಿಯೋ ಕಾಲ್ ಮಾಡಿ, “ಪಪ್ಪಾ ಪುನೀತ್ ರಾಜಕುಮಾರ ಸತ್ತಿರುವುದಕ್ಕೆ ಪ್ರಮಥ ಅಣ್ಣ ಅಳುತ್ತಿದ್ದಾನೆ” ಎಂದು ಹೇಳಿದ.

ಫೋನ್‌ ನಲ್ಲಿಯೇ ಅವನಿಗೆ ಸಮಾಧಾನಪಡಿಸಲು ಯತ್ನಿಸಿದರೂ ಅವನು ಮಾತೇ ಆಡಲಿಲ್ಲ. ಬದಲಿಗೆ ಮುಖ ಮುಚ್ವಿಕೊಂಡು ದುಃಖಿಸುತ್ತಿದ್ದ. ತಕ್ಷಣವೇ ಮನೆಗೆ ಹೋಗಿ ಅವನನ್ನು ಸಮಾಧಾನಪಡಿಸಿದೆ. ಚಿಕ್ಕವನಿದ್ದಾಗಿನಿಂದ ಪುನೀತ್ ರಾಜಕುಮಾರ್ ನ ಅಪ್ಪಟ ಅಭಿಮಾನಿಯಾಗಿದ್ದ ಅವನು, ಪುನೀತ್ ರಾಜಕುಮಾರ ಟಿವಿ, ಸಿನಿಮಾ ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿ ಕೊಂಡರೆ ಸಾಕು ಅವರನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಮಾತ್ರವಲ್ಲ ಅವರಂತೆ ಅನುಕರಣೆ ಮಾಡುತ್ತಿದ್ದ. ತೀರಾ ಇತ್ತೀಚೆಗೆ ತೆರೆ ಕಂಡಿದ್ದ ಪುನೀತ್ ರಾಜಕುಮಾರ ಅವರ ನಟ ಸಾರ್ವಭೌಮ ಹಾಗೂ ಯುವ ರತ್ನ ಸಿನೆಮಾಗಳನ್ನು ಅವನ ಒತ್ತಾಯಕ್ಕೆ ಮಣಿದು ಕೊರೊನಾ ಕಾಲಘಟ್ಟದಲ್ಲೂ ಥೇಟರ್ ಗೆ ಹೋಗಿ ಮನೆ ಮಂದಿಯೆಲ್ಲಾ ಸಿನಿಮಾ ನೋಡಿ ಬಂದಿದ್ದೇವು.

ಪುನೀತ್ ರಾಜಕುಮಾರ ಅವರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಕಲಬುರಗಿಗೆ ಆಗಮಿಸಿದ ವೇಳೆ ನನ್ನ ಮಗ ಪ್ರಮಥ ‘ಪಪ್ಪಾ ನಾವೂ ಪುನೀತ್ ರಾಜ್‍ಕುಮಾರ್ ಅವರನ್ನು ನೋಡಿ ಭೇಟಿಯಾಗಿ ಬರೋಣವೇ?’ ಎಂದು ಕೇಳಿದ್ದ. ಈಗ ಬೇಡ ಮುಂದೊಂದು ದಿನ ನೀನೂ ಅವರಂತೆ ದೊಡ್ಡ ಸಾಧನೆ ಮಾಡು. ಆಗ ನಾನೇ ಬೆಂಗಳೂರಿನ ಸದಾಶಿವ ನಗರದ ಅವರ ಮನೆಗೆ ನಿನ್ನನ್ನು ಕರೆದೊಯ್ಯುವೆ ಎಂದು ಹೇಳಿದ್ದೆ. ಆದರೆ ಈಗ ಅವರೆಲ್ಲಿ?

ಈ ಹಿಂದೆ ನಮ್ಮ ಮನೆಯಲ್ಲಿ ನಮ್ಮ ಚಿಕ್ಕಪ್ಪಂದಿರಾದ ವಿಶ್ವಾರಾಧ್ಯ, ಬಸವರಾಜ ಹಾಗೂ ಅಣ್ಣ ವಿಶ್ವಾರಾಧ್ಯ ಅವರು ಕೂಡ ಅನಂತನಾಗ್ ಹಾಗೂ ಶಂಕರನಾಗ್ ಅವರ ಅಭಿಮಾನಿಯಾಗಿದ್ದರು. ಅಂತೆಯೇ ಅವರಂತೆ ಅವರುಗಳು ಹಿಪ್ಪಿ ಕಟ್ , ನೆಹರೂ ಶರ್ಟ್, ಆಫ್ ಶರ್ಟ್, ದಾಡಿ ಕೂಡ ಬಿಟ್ಟಿದ್ದರು. ನಾನು ಕೂಡ ಮೊದ ಮೊದಲು ಹಿಪ್ಪಿ ಕಟ್ ಹಾಗೂ ದಾಡಿ ಬಿಟ್ಟಿದ್ದೆ. ಆನಂತರ ವಿಷ್ಣುವರ್ಧನ್ ಅವರ ಅಭಿಮಾನಿಯಾದೆ ಆ ಮಾತು ಬೇರೆ!

ಅದು ೮೦ರ ದಶಕದಲ್ಲಿ ನಡೆದ ಗೋಕಾಕ್ ಚಳವಳಿಯ ಸಂದರ್ಭ. ವರನಟ ಡಾ. ರಾಜಕುಮಾರ ಮತ್ತು ಅವರ ಇಡೀ ಕುಟುಂಬ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಆಗಮಿಸಿತ್ತು.‌ ಡಾ. ಪಾಟೀಲ ಪುಟ್ಟಪ್ಪನವರಿಂದಾಗಿ ಅಪ್ಪನೇ ಆಗ ಕಾರ್ಯಕ್ರಮದ ಆಯೋಜಕರಲ್ಲೊಬ್ಬರಾಗಿದ್ದರು. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದ ಹಿಂಬದಿಯ ಮುನ್ಸಿಪಲ್ ಕಚೇರಿ ಬಳಿ ಕಾರಿನಿಂದ ಇಳಿದು ನಿಂತಿದ್ದ ಪಾರ್ವತಮ್ಮ ರಾಜಕುಮಾರ, ಶಿವರಾಜಕುಮಾರ, ರಾಘವೇಂದ್ರ ರಾಜಕುಮಾರ ಹಾಗೂ ಪುನೀತ್ ರಾಜಕುಮಾರ ಅವರನ್ನು ಬಹಳ ಹತ್ತಿರದಿಂದಲೇ ನೋಡಿದ್ದೆ.

ನಟನಾ ಕೌಶಲದ ಜೊತೆ ಸರಳ, ವಿನೀತಭಾವದಿಂದಾಗಿ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವಿನ ಸುದ್ದಿ ಕೇಳಿ ಇವೆಲ್ಲ ನೆನಪಾದವು ಅಷ್ಟೇ! ನನ್ನ ಮಗನ ಕನಸು ನನಸು ಮಾಡದೆ ಬಾರದ ಲೋಕಕ್ಕೆ ತೆರಳಿದ ಪುನೀತ್ ರಾಜಕುಮಾರ ನಿಧನ ನಿಜಕ್ಕೂ ತುಂಬಿ ಬಾರದ ನಷ್ಟವೇ ಸೈ!

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here