ಕಲಬುರಗಿ: ಸೋಷಿಯಲ್ ವರ್ಕ್ ಎಂದರೆ ಬಹಳಷ್ಟು ಜನರಲ್ಲಿ ಈಗಲೂ ಕೂಡ ತಪ್ಪು ಅಭಿಪ್ರಾಯಗಳಿವೆ. ಹೀಗೆಂದರೆ ಸಮಾಜ ಸೇವೆಯೆಂದು ಪರಿಗಣಿಸುವವರು ಹಲವರಾದರೆ, ಈ ಕೆಲಸ ಮಾಡಲು ಯಾವುದೇ ಪದವಿ ಹಾಗೂ ಓದಿನ ಅಗತ್ಯವಿಲ್ಲ ಎನ್ನುವವರು ಇನ್ನು ಕೆಲವರು. ಆದರೆ ಸಮಾಜ ಕಾರ್ಯವು ವ್ಯಕ್ತಿಯ ವ್ಯಕ್ತಿತ್ವ ವಿಕಸನ ಗೊಳಿಸುತ್ತೆ. ಈ ಸಮಾಜ ಕಾರ್ಯವು ಒಂದು ಕೋರ್ಸ್ ಆಗಿ ಅದರ ವ್ಯಾಪ್ತಿ ಇಂದು ಬಹಳ ವಿಸ್ತರಿಸಿದೆ ಎಂದು ಪಾರಸ್ ಕಾಲೇಜಿನ ಅಧ್ಯಕ್ಷ ಡಾ. ಅತೀಕ ಉರ್ ರೆಹಮಾನ್ ಹೇಳಿದರು.
ಪಾರಸ್ ಸಮಾಜ ಕಾರ್ಯ ಮಹಾವಿದ್ಯಾಲಯದ ವತಿಯಿಂದ ಪಾಳಾ ಗ್ರಾಮದಲ್ಲಿ ಸಮಾಜ ಕಾರ್ಯ ಶಿಬಿರವನ್ನು ಏಳು ದಿನಗಳ ಕಾಲ ನಡೆಯುಸುವ ಮೂಲಕ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದಕ್ಕೆ ಬಹಳಷ್ಟು ಕಾರಣಗಳಿವೆ. ಮುಖ್ಯ ಕಾರಣ ಆಧುನಿಕ ಸಮಾಜದಲ್ಲಿ ಮಾನವ ಎದುರಿಸುತ್ತಿರುವ ಮನೋಸಾಮಾಜಿಕ ಸಮಸ್ಯೆಗಳು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವುದು.
ಈ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಹಾಗೂ ನೆಮ್ಮದಿಯ ಜೀವನಕ್ಕೆ ನೆಲಗಟ್ಟನ್ನು ಸಿದ್ಧಪಡಿಸುವುದು ಸಾಮಾಜಿಕ ಸೇವಾ ಕಾರ್ಯಕರ್ತರ ಕೆಲಸ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಯಾವ ಭಾಗದಲ್ಲಿ ಸಮಸ್ಯೆ ಇದೆ ಎಂದು ನಿಖರವಾಗಿ ಹೇಳಬಲ್ಲ ದಿಟ್ಟತನ ಸಾಮಾಜಿಕ ಸೇವಾ ಕಾರ್ಯಕರ್ತರಲ್ಲಿ ಎದ್ದು ಕಾಣುತ್ತಿರುವುದು ಇನ್ನೊಂದು ಕಾರಣ.
ಸಮಾಜದ ಒಟ್ಟು ತೊಂದರೆಗೆ ಕಾರಣಗಳನ್ನು ನಿಚ್ಚಳವಾಗಿ ಪಟ್ಟಿ ಮಾಡಿ ಸಮಸ್ಯೆ, ಸವಾಲುಗಳಿಗೆ ಪರಿಹಾರ ನೀಡುವ, ಪರಿಣಾಮವನ್ನು ವಿಶ್ಲೇಷಿಸುವ ಹಲವಾರು ಮಾರ್ಗಗಳಲ್ಲಿ ಆಧುನಿಕ ಸಮಾಜ ಕಾರ್ಯವು ಮುಂಚೂಣಿಯಲ್ಲಿದೆ ಎನ್ನಬಹುದು ಎಂದು ಅವರು ಹೇಳಿದರು.
ಪಾಳಾದ ಮೂಲ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳು ಆದ ಗುರುಮೂರ್ತಿ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಶಿಬಿರ ನಿರ್ದೇಶಕರು ಸುಖದೇವ ಕಟ್ಟಿಮನಿ, ಸುರೇಖ ಪಿ ಗಾಯಕವಾಡ ಪವನ ಗುಲಗುಂಜಿ ಶ್ರೀ ಹುಸೇನ್ ಇತರರು ಹಾಜರಿದ್ದರು.