ಆಹಾರ ಶ್ರೇಷ್ಠ ಕನಿಷ್ಟವಲ್ಲ, ಬದುಕು ಶ್ರೇಷ್ಠ

1
545

ಕೋಲಾರದಿಂದ ನನ್ನ ಸಹೋದರನೊಬ್ಬ ನನ್ನನ್ನು ಸಂಪರ್ಕಿಸಿ “ನಾನು ಬಸವಾದಿ ಶರಣರ ವಿಚಾರಗಳನ್ನು ಓದಿರುವೆ. ಶರಣರ ವಿಚಾರಧಾರೆ ನನ್ನನ್ನು ಗಾಢವಾಗಿ ಪ್ರಭಾವಿಸಿವೆ. ಆದರೆ ನಾನು ಮಾಂಸ -ಹಾರಿಯಾಗಿದ್ದೇನೆ. ಶರಣರು ಮಾಂಸಹಾರದ ಬಗೆಗೆ ಏನಾದರೂ ಹೇಳಿದ್ದಾರೆಯೆ ? ಮಾಂಸ ಆಹಾರ ಸೇವಿಸಿಯೂ ನಾನು ಲಿಂಗಾಯತ ಧರ್ಮೀಯ ಆಗಲು ಬರುವುದಿಲ್ಲವೆ ? ” ಎಂದು ಕೇಳಿದ.

ನಾನು ಶರಣರ ವಿಚಾರಗಳಲ್ಲಿ ಮುಳುಗಿ ಹೋದೆ. ಮನುಷ್ಯ ನಾಗರಿಕ ಪ್ರಪಂಚವನ್ನು ಕಟ್ಟಿಕೊಳ್ಳುವ ಮೊದಲು ಬಯಲವಾಸಿಯಾಗಿದ್ದ. ಗುಡ್ಡ ಬೆಟ್ಟಗಳಲ್ಲಿ, ಮರದ ಪೊಟರೆಗಳಲ್ಲಿ ವಾಸಿಸುತ್ತಿದ್ದ. ತನ್ನ ಹೊಟ್ಟೆಯ ಹಸಿವನ್ನು ಇಂಗಿಸಿಕೊಳ್ಳಲು ಪ್ರಾಣಿಗಳ ತಿಂದು ಬದುಕಿದ. ಅವನ್ನು ಮೊದ ಮೊದಲು ಹಸಿ ಹಸಿಯಾಗಿಯೆ ತಿಂದ. ತದನಂತರ ಅದನ್ನು ಬೇಯಿಸಿ ತಿಂದ. ಕಾಲಾನಂತರ ಹಣ್ಣು ಹಂಪಲ ಬರುಬರುತ್ತ ತರಕಾರಿಯ ಕಡೆ ಆತ ವಾಲಿದ. ಕೆಲವರು ಮಾಂಸಹಾರಿಗಳು ಇನ್ನು ಹಲವರು ಸಸ್ಯಹಾರಿಗಳು. ಅವರವರ ಇಚ್ಛೆಗೆ ಅನುಗುಣವಾಗಿ ಆಹಾರ ಪದ್ಧತಿ ರೂಪಿತವಾಯಿತು.

Contact Your\'s Advertisement; 9902492681

ವೇದ ಕಾಲದಲ್ಲಿ ಬ್ರಾಹ್ಮಣರು ಮಾಂಸಹಾರಿಗಳು. ಅವರು ಯಜ್ಞಯಾಗ ಮಾಡುವಾಗ ಪ್ರಾಣಿಗಳನ್ನು ಬಲಿ ಕೊಡಿತ್ತಿದ್ದರೆಂದು ಋಗ್ವೇದಗಳಲ್ಲಿ ಉಲ್ಲೇಖವಿದೆ. ತಮ್ಮ ಮನೆಗೆ ಅತಿಥಿಯಾಗಿ ಬರುವವರಿಗೆ ಗೋವಿನ ಮಾಂಸವನ್ನು ಅಡುಗೆಯಾಗಿ ಮಾಡಬೇಕಾದ ಸಂದರ್ಭವಿತ್ತು. ಇದು ಇತಿಹಾಸ.

ಮಹಾತ್ಮ ಬುದ್ಧ ಕ್ಷತ್ರಿಯ. ಆತನಿಗೆ ಮಾಂಸ ಆಹಾರ ನಿಷೇಧವೆಂಬಂತೆ ಇರಲಿಲ್ಲ. ಹೀಗಾಗಿ ಆತ ಮಾಂಸ ಆಹಾರವನ್ನು ಸೇವಿಸುತ್ತಿದ್ದ. ತನ್ನ ಕೊನೆಯ ಸಂದರ್ಭದಲ್ಲೂ ಚುಂಗನಿಂದ ದನದ ಮಾಂಸವನ್ನು ಪಡೆದು ಸೇವಿಸಿ, ಕೊನೆ ಉಸಿರೆಳೆದ. ಡಾ. ಬಿ.ಆರ್.‌ಅಂಬೇಡ್ಕರ ಅವರ ಸಂದರ್ಭದಲ್ಲಿ ಆಹಾರದ ಪ್ರಶ್ನೆ ಸಮಸ್ಯೆಯಾಗಿರಲಿಲ್ಲ.

ಆದರೆ ಬುದ್ದನ ತರುವಾಯ ಬಂದ ಬಸವಣ್ಣ ನಾವು ನೀವೆಲ್ಲ ಬಲ್ಲಂತೆ ಸಕಲ ಜೀವ ಪ್ರೇಮಿ. ತನ್ನ ರಾಜ್ಯದಲ್ಲಿಯ ಆಕಳುಗಳನ್ನು ಕಳ್ಳರು ಕದ್ದುಕೊಂಡು ಹೋದಾಗ, ಆ ಆಕಳುಗಳು ಇರುವಲ್ಲಿಗೇ ಉಳಿದ ಕರುಗಳನ್ನು ಬಿಟ್ಟು ಬನ್ನಿ ಎಂದು ಆಜ್ಞೆ ಮಾಡಿದಾತ.‌ ಬಸವಣ್ಣನ ಜೀವಪ್ರೇಮ “ಸರ್ವೇಜನ ಸುಖಿನೋಭವಂತು” ಆಗಿರಲಿಲ್ಲ. ತನ್ನ ರಾಜ್ಯದಲ್ಲಿ ಯಾರಿಗೇ ನೋವಾದರೂ ಅದು ತನಗಾದ ನೋವೆಂಬಂತೆ ಚಡಪಡಿಸುತ್ತಿದ್ದ.

ತನ್ನಿಂದ ಯಾರಿಗಾದರು ಅವಮಾನವಾಯಿತು ಎಂದು ಗೊತ್ತಾದ ತಕ್ಷಣ ತ್ರಾಯಿ ತ್ರಾಯಿ ಎಂದು ಮಮ್ಮಲ‌ಮರುಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ. ಕಿನ್ನರಿ ಬೊಮ್ಮಯ್ಯ ಎಂಬ ಶರಣ ಮಹಾಮನೆಯಲ್ಲಿ ಪ್ರಸಾದಕ್ಕೆ ಕುಳಿತಾಗ ‘ಉಳ್ಳಾಗಡ್ಡೆ’ ತಿನ್ನಲು ಕೇಳುತ್ತಾರೆ. ಆಗ ಬಸವಣ್ಣ ಅವರನ್ನು ಆಶ್ಚರ್ಯ ಚಕಿತರಾಗಿ ನೋಡುತ್ತಾರೆ. ಇದರಿಂದ ಆತಂಕಕ್ಕೆ ಒಳಗಾದ ಕಿನ್ನರಿ ಬೊಮ್ಮಯ್ಯ ಪ್ರಸಾದದ ಮನೆಯಿಂದ ಮುನಿಸಿಕೊಂಡು ಎದ್ದು ಹೋಗುತ್ತಾರೆ. ಆಗ ಬಸವಣ್ಣ ತನ್ನ ತಪ್ಪಿನ ಅರಿವಾಗಿ ಆ ಕಿನ್ನರಿ ಬೊಮ್ಮಯ್ಯನ ಬರ ಮಾಡಿಕೊಳ್ಳಲು, ಹಾಗೂ ತಾನು ಆಶ್ಚರ್ಯ ಚಕಿತನಾಗಿ ನೋಡಿದ್ದನ್ನು  ತಪ್ಪೆಂದು ಹೇಳಲು ಹೊರಡುತ್ತಾನೆ.

ಕಿನ್ನರಿ ಬೊಮ್ಮಯ್ಯನಿದ್ದ ತ್ರಿಪುರಾಂತ ಕೆರೆಯ ಕಡೆ ಹೋಗುವಾಗ ಬಸವ ತನ್ನ ಕೊರಳಲ್ಲಿ ಉಳ್ಳಾಗಡ್ಡೆ ಸರಮಾಲೆ , ಎತ್ತಿಗೂ ಉಳ್ಳಾಗಡ್ಡೆಯ ಸರ, ಬಂಡಿ ತುಂಬ ಉಳ್ಳಾಗಡ್ಡೆಯೋ ಉಳ್ಳಾಗಡ್ಡಿಗಳನ್ನು ಹಾಕಿಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾನೆ. ಬಸವಣ್ಣ ತಾನು ನಂಬಿಕೊಂಡು ಬಂದ ಆಹಾರದ ಸಿದ್ಧಾಂತವೇ ಸರಿಯಲ್ಲ ಎಂದು ತೋರಿಸುತ್ತಾರೆ.

ಇಷ್ಟಕ್ಕೂ ಹನ್ನೆರಡನೆಯ ಶತಮಾನದಲ್ಲಿ ಯಾರು ಮಾಂಸಹಾರಿಗಳಾಗಿದ್ದರು ? ಎಂಬುದಕ್ಕೆ ಇತಿಹಾಸವನ್ನು‌ ಇಣುಕಿ ನೋಡಬೇಕಾಗುತ್ತದೆ. ಅಂದು ಬ್ರಾಹ್ಮಣ ಜನಗಳೆ ಸಮಾಜವನ್ನು ನಿಯಂತ್ರಿಸುತ್ತಿದ್ದ ಸಂದರ್ಭ. ಈಗಾಗಲೇ ಹೇಳಿದಂತೆ ಅವರು ವೇದ ಆಗಮ ಶಾಸ್ತ್ರಗಳನ್ನು ನಂಬಿದವರು. ಅದನ್ನೆ ಪ್ರಾಮಣ್ಯವೆಂದು ಬದುಕಿದವರು. ಸಹಜವಾಗಿಯೇ ಅಂದು ಬ್ರಾಹ್ಮಣರೂ ಮಾಂಸಹಾರಿಗಳಾಗಿದ್ದರು.

ಆದ್ದರಿಂದಲೇ ಬಸವಣ್ಣ

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು

ಎಲೆ ಹೋತೇ ಅಳು, ಕಂಡಾ !

ವೇದವನೋದಿದವರ ಮುಂದೆ ಅಳು, ಕಂಡಾ !

ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !

ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.

ಎಂಬ ವಚನದ ಮೂಲಕ ಪ್ರಾಣಿಗಳನ್ನು ವೇದದ ಹೆಸರಿನ‌ ಮೇಲೆ ಬಲಿಕೊಡುವ ಪದ್ಧತಿಯನ್ನು ಅವರು ಖಂಡಿಸುತ್ತಾರೆ. ಯಜ್ಞ ಯಾಗಕ್ಕೆ ತಂದ ಹೋತಿನ ಮೂಲಕ ಅಳಲು ಹಚ್ಷಿ, ಅದು ನಿನ್ನ ಪ್ರತಿಭಟನೆಯಾಗಿತ್ತದೆ ಎಂದವರು ಸೂಚಿಸುತ್ತಾರೆ. ಅಂದರೆ ಬಸವ ಇಲ್ಲಿ ಜೀವಪರವಾಗಿ ವರ್ತಿಸುತ್ತಾರೆ.‌

ಆದರೆ ಬಸವಣ್ಣನವರು ತಮ್ಮ ಮತ್ತೊಂದು‌ ವಚನದಲ್ಲಿ 

ಎಡದ ಕೈಯಲಿ ಕತ್ತಿ,

ಬಲದ ಕೈಯಲಿ ಮಾಂಸ,

ಬಾಯಲಿ ಸುರೆಯ ಗಡಿಗೆ,

ಕೊರಳಲಿ ದೇವರಿರಲು

ಅವರ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ,

ಅವರ ಮುಖಲಿಂಗಿಗಳೆಂಬೆನು.

ಎನ್ನುವ ಮೂಲಕ ಬಸವ ತಾನು ಕಟ್ಟ ಬಯಸಿದ್ದ ಚಳುವಳಿಗೆ ಯಾರೇ ಬಂದರೂ ಅವರನ್ನು ಸ್ವಾಗತಿಸುವ ತಹತಹ ಎದ್ದು ಕಾಣುತ್ತದೆ. ಹಾಗಂತ ಅವುಗಳ ಸಮರ್ಥನೆಗೆ ಅವರು ತೊಡಗಿದ್ದಿಲ್ಲ.

ಕೊಲ್ಲೆನಯ್ಯಾ ಪ್ರಾಣಿಗಳ,

ಮೆಲ್ಲೆನಯ್ಯಾ ಬಾಯಿಚ್ಛೆಗೆ,

ಒಲ್ಲೆನಯ್ಯಾ ಪರಸತಿಯರ ಸಂಗವ,

ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ.

ಬಳ್ಳದ ಬಾಯಂತೆ ಒಂದೆ ಮನ ಮಾಡಿ ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ. ಎನ್ನುವ ಮೂಲಕ ಯಾವುದೇ ರೀತಿಯ ಹಿಂಸೆಯನ್ನು ಅವರು ಇಷ್ಟ ಪಡದಿರುವುದು ಗೋಚರವಾಗುತ್ತದೆ. ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ, ಎಲ್ಲಕ್ಕೆ ಶಿವನೊಬ್ಬನೆ, ಶಿವಜ್ಞಾನವೆಂದರಿಯದ ವಿಪ್ರರು, ಆನೆ ಅಶ್ವ ಹೋತ ಕೋಣ ಬಿಂಜಣದಿಂದ ಕಡಿದು, ಬೆಂಕಿಯ ಮೇಲೆ ಹಾಕಿ, ತಾನು ಪರಬ್ರಹ್ಮನಾದೆನೆಂದು ನರಕಕ್ಕೆ  ಹೋದರೊಂದು ಕೋಟ್ಯಾನುಕೋಟಿ ಬ್ರಹ್ಮರು.

ವೇದದ ಅರ್ಥವನರಿಯದೆ

ಜೀವನ ಬಾಧೆಯಂ ಮಾಡುವ

ವಧಾಸ್ವಕರ್ಮಕ್ಕೆ ಒಳಗಾದರು, ದ್ವಿಜರಂದು.

ಆದಿಯ ಪ್ರಮಥರು ಕಂಡುದೆಂತೆಂದಡೆ: 

ಆನೆಯೆಂಬುದು ಮದ, ಮತ್ಸರವೆಂಬುದು ಅಶ್ವ,

ಕೋಣನೆಂಬುದು ಕ್ರೋಧ,

ಅಂಗವಿಕಾರವೆಂಬುದು ಹೋತ.

ಇಂತು ನಾಲ್ಕು ವರ್ಗಂಗಳು. ಶಿವಜ್ಞಾನವೆಂಬ ಅಗ್ನಿಯಲ್ಲಿ ದಹನ ಮಾಡುವರು ನಮ್ಮವರು. ಇಂತೀ ವಿವರವಿಲ್ಲದೆ ತಾವು ಪರಬ್ರಹ್ಮರೆನಿಸಿಕೊಂಬ, ಜೀವಹಿಂಸೆಯ ಮಾಡುವ ವಿಪ್ರರ ಮುಖವ ನೋಡಲಾಗದೆಂದ ಕಲಿದೇವರದೇವ.

ಎಂಬ ಮಡಿವಾಳ ಮಾಚಿದೇವರ ವಚನ ಸಹ ಜೀವಹಿಂಸೆಯನ್ನು ಒಪ್ಪುವುದಿಲ್ಲ. ಶರಣರು ಯಾರ ಮನಸ್ಸಿಗೆ ನೋವಾದರೂ ಅದನ್ನು ಸಹಿಸದವರು. ತನ್ನ ಮನೆಗೆ ಕಳ್ಳನೊಬ್ಬ ಬಂದಾಗ ಬಸವಣ್ಣನವರು ತನ್ನ ಮಡದಿ ನೀಲಾಂಬೆಯನ್ನು “ತೆಗೆದು ಕೊಡಾ ಎಲಾ ಬೆಂಡೋಲೆ ಕಿತ್ತಿ. ಎನೈಯನ ಕೈ ನೊಂದೀತು !’ ಎಂದು ಸಿಟ್ಟಾಗುತ್ತಾರೆ.

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ ಅದಕ್ಕೆ ಮರುಗುವಂತೆ ಅವಕೇಕೆ ಮರುಗ ? ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ.

ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?ಎನ್ನುವ ಅಕ್ಕಮಹಾದೇವಿಯ ವಚನ ಸಹ ಜೀವ ಹಿಂಸೆಯನ್ನು ಬೋಧಿಸುವುದಿಲ್ಲ.‌ ಜಾಲಗಾರ ತಾನು ನಿತ್ಯ ಬಲೆಯಲ್ಲಿ ಹಿಡಿಯುವ  ಪ್ರಾಣಿಗಳನ್ನು ಕೊಂದು ನಲಿ ನಲಿದಾಡುತ್ತಾನೆ. ಆದರೆ ತನ್ನ ಮನೆಯಲ್ಲಿ ತನ್ನದೆ ಶಿಶು ಸತ್ತರೆ ? ಎಂಬ ಪ್ರಶ್ನೆ ಕೇಳುವ ಮೂಲಕ ಇಂಥವರನ್ನು ಅಕ್ಕಮಹಾದೇವಿ ಜರಿಯುತ್ತಾಳೆ.

ಹೊಲೆಯೊಳಗೆ ಹುಟ್ಟಿ ಕುಲವನರಸುವೆ, ಎಲವೊ, ಮಾತಂಗಿಯ ಮಗ ನೀನು. ಸತ್ತುದನೆಳೆವನೆತ್ತಣ ಹೊಲೆಯ ? ಹೊತ್ತು ತಂದು ನೀವು ಕೊಲುವಿರಿ. ! ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು. ನಮ್ಮ ಕೂಡಲಸಂಗನ ಶರಣರು. ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರರು. ಅವರಿಗೆ ತೋರಲು ಪ್ರತಿಯಿಲ್ಲವೋ.

ಸತ್ತುದನ್ನು ಎಳೆಕೊಂಡು ಹೋಗುವವರು ಹೊಲೆಯರಲ್ಲ. ಯಜ್ಞಯಾಗಗಳಿಗೆಂದು ಹೊತ್ತು ತಂದು ಕೊಲ್ಲುವವರು ಹೊಲೆಯರು ಎಂಬ ಆಕ್ರೋಶ ಬಸವಣ್ಣನವರಿಗೆ ಇದ್ದದ್ದು ನಾವಿಲ್ಲಿ ಕಾಣಬಹುದಾಗಿದೆ.‌ ಒಟ್ಟಿನಲ್ಲಿ ಬಸವಾದಿ ಶರಣರು ಪ್ರಾಣಿ ಹಿಂಸೆಯನ್ನು ಒಪ್ಪಲಿಲ್ಲ. ಹಾಗಂತ ಆಹಾರ ಸೇವನೆಯಲ್ಲಿ ಶ್ರೇಷ್ಠ ಕನಿಷ್ಠ ಎಂಬ ಭಾವವೂ ಅವರದಾಗಿರಲಿಲ್ಲ.

1 ಕಾಮೆಂಟ್

  1. ಸರಿಯಾಗಿ ವಿಶ್ಲೇಷಣೆ ಮಾಡಿದಿರಿ, ಅದರಂತೆ ದಲಿತ ಶರಣ ಶರಣೆಯರ ವಚನಗಳನ್ನು ಇಲ್ಲಿ ಚರ್ಚಿಸಬೇಕಾದ ಅವಶ್ಯಕತೆ ಇದೆ. ಕಿರಿಮೀನು ಕುರಿ ಕೋಳಿ ತಿನ್ನುವವರು ಕನಿಷ್ಠ ಅನ್ನುವಿರಿ ಎಂದು ಕಾಳವ್ವೆ ಹೇಳುತ್ತಾಳೆ. ಆದರಿಂದ ನಾವು ಅವರ ವಚನಗಳ ಅಧ್ಯಯನ ಮಾಡಿ ಆಹಾರ ಪದ್ಧತಿ ಬಗ್ಗೆ ಹೇಳಬೇಕಾಗುತ್ತದೆ. ಕಲ್ಯಾಣ ಕ್ರಾಂತಿ ಕೇವಲ ಒಬ್ಬರ ಇಬ್ಬರ,ಅಥವಾ ಒಂದೇ ವರ್ಗಕ್ಕೆ ಸೇರಿದವರ ಆಂದೋಲನ ಅಲ್ಲ, ಇಲ್ಲಿ ಎಲ್ಲರ ವಿಚಾರಗಳು ಪ್ರಸ್ತುತ. ದಲಿತ ಶರಣ ಶರಣೆಯರು ಎಂದು ಶ್ರೀ ತಿಪ್ಪೇರುದ್ರಸ್ವಾಮಿ ಬರೆದ ಪುಸ್ತಕ ಅದು ಅಧ್ಯಯನ ಮಾಡಬೇಕು. ಶರಣು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here