ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ್ ಶೆಣೈ ಅಥವಾ ‘ಬಸ್ತಿ ಮಾಮ್’

0
12
  • ಕೆ.ಶಿವು.ಲಕ್ಕಣ್ಣವರ

‘ಬಸ್ತಿ ಮಾಮ್’ ಈಗ ಅಸ್ತಂಗತರಾಗಿದ್ದಾರೆ. ಅವರ ನೆನಪಿನ ಬುತ್ತಿ ಈ ಕಿರು ಲೇಖನ. ಬಸ್ತಿ ವಾಮನ್ ಶೆಣೈ, ಇವರು ಎಲ್ಲರ ಪ್ರೀತಿಯ ‘ಬಸ್ತಿ ಮಾಮ್’ರೇ ಆಗಿದ್ದರು. ಇವರ ನಿಧನದ ಸುದ್ದಿ ತಿಳಿಯುತ್ತಲೇ ಇವರ ಸ್ನೇಹ ಬಳಗ ಮತ್ತು ಶಿಷ್ಯ ಬಳಗಕ್ಕೆ ಮನಸ್ಸಿನಲ್ಲಿ ಮೂಡಿದ್ದು ಹಿಂದೆಯೇ ಅವರೊಂದಿಗಿನ ನನ್ನ ಪುಟ್ಟ ಪುಟ್ಟ ಮರೆಯಲಾರದ ಭೇಟಿಯ ನೆನಪುಗಳು.

ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಘಟನೆಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ ವಿಶ್ವ ಕೊಂಕಣಿ ಕೇಂದ್ರದ ರೂವಾರಿಯಾಗಿದ್ದ ‘ಬಸ್ತಿ ವಾಮನ ಶೆಣೈ’ ಅವರ ನೆನಪು ಅಗಾಧವಾದದ್ದು.

Contact Your\'s Advertisement; 9902492681

ಕೇವಲ ಕೊಂಕಣಿ ಭಾಷಿಕರಿಗಷ್ಟೇ ಅಲ್ಲ, ಉಳಿದ ಭಾಷೆಗಳ ಜನರಿಗೂ ಇವರು ಆತ್ಮೀಯರಾಗಿದ್ದವರು. ಕೊಂಕಣಿ ಭಾಷೆಯ ಕುರಿತಾದ ಯಾವುದೇ ಕಾರ್ಯಕ್ರಮವಿರಲಿ (ಅದು ಎಷ್ಟೇ ಚಿಕ್ಕ ದೊಡ್ಡ ಕಾರ್ಯಕ್ರಮವಾಗಿದ್ದರೂ) ತಮ್ಮ ವಯಸ್ಸನ್ನು ಮರೆಸುವ ರೀತಿಯ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದವರು ಇವರು. ಅವರ ಬಗ್ಗೆ ಪತ್ರಿಕೆಗಳನ್ನು ಓದುವ ನಮಗೆ — ನಿಮಗೆಲ್ಲಾ ತಿಳಿದೇ ಇರುವುದರಿಂದ ನಾನು ಅವರ ಜೊತೆಗಿನ ನನ್ನ ಒಡನಾಟದ ನೆನಪುಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳುತ್ತಿರುವೆ.

ಸುಮಾರು ಹತ್ತು ವರ್ಷದ ಹಿಂದೆ ಇರಬಹುದು. ನಾನಷ್ಟೇ ಅಲ್ಲ ನನ್ನ ಮನೆಯವರೆಲ್ಲರ ಜೊತೆಗೆ ನಮ್ಮ ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆವು. ಆ ಸಮಯ ಅಲ್ಲಿಗೆ ‘ಬಸ್ತಿ ವಾಮನ ಶೆಣೈ’ ಅವರೂ ಅಲ್ಲಿಗೆ ಆಗಮಿಸಿದ್ದರು.

ನನಗೆ ಆಗ ಅವರು ಕೊಂಕಣಿ ಕೇಂದ್ರದ ಸ್ಥಾಪಕರು ಎನ್ನುವ ವಿಷಯ ಮಾತ್ರ ತಿಳಿದಿತ್ತು. ಅವರನ್ನು ನೋಡಿ ನನ್ನ ಗೆಳೆಯರನೇಕರು ‘ಅವರು ನಮ್ಮ ಸಂಬಂಧಿ’ ಎಂದರು. ನನಗೆ ಅಷ್ಟರವರೆಗೆ ಈ ವಿಷಯ ತಿಳಿದೇ ಇರಲಿಲ್ಲ. ನನ್ನ ಗೆಳೆಯನೊಬ್ಬನ ಅಜ್ಜನ ಕಡೆಯಿಂದ ಅವರಿಗೆ ಸಂಬಂಧವಿದೆ ಎನ್ನುವ ವಿಚಾರ ನನಗೆ ತಿಳಿದದ್ದು ಆಗಲೇ. ಅವರನ್ನು ಅಂದು ಮಾತನಾಡಿಸಿದಾಗ ಬಹಳ ಆನಂದದಿಂದ ಮಾತನಾಡಿದರು.

ನನ್ನ ಗೆಳೆಯನ ಅಜ್ಜನ ಬಗ್ಗೆ ತಿಳಿಸಿದಾಗ, ‘ಹೌದಾ, ಅವರ ಮೊಮ್ಮಗನೇ, ಈಗ ಎಲ್ಲಿದ್ದೀರಿ, ಎಂದು ಏನು ಕತೆ, ಹೀಗೆಲ್ಲಾ ವಿಚಾರ ಮಾಡುತ್ತಾ ಅನೇಕಾನೇಕ ವಿವರ ಮತ್ತು ವಿಚಾರಗಳನ್ನು ಕೇಳಿದರು. ನಾನು ನನ್ನ ಗೆಳೆಯನನ್ನು ಕರೆದು ಅವರನ್ನು ಭೇಟಿ ಮಾಡಿ ಮಾಡಿಸಿದಾಗ ನನಗೆ ತಿಳಿಯದ ಹಲವಾರು ಜನರ ಬಗ್ಗೆ ಕೇಳಿ, ಅವರೆಲ್ಲಿ, ಇವರೆಲ್ಲಿ ಎಂದು ಆಸಕ್ತಿಯಿಂದ ಕೇಳಿದರು ಅವರು.

ನಾನು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದಾಗ, ಕೊಂಕಣಿಯಲ್ಲೂ ಬರೆ ಎಂದು ಹುರಿದುಂಬಿಸಿದವರು ಅವರು. ನನಗೆ ಕೊಂಕಣಿಯಲ್ಲಿ ಹಿಡಿತವಿಲ್ಲದ ಕಾರಣ ಬರೆಯಲು ಪ್ರಯತ್ನಿಸಲೇ ಇಲ್ಲ. ‘ಕೊಂಕಣಿ ಕೇಂದ್ರಕ್ಕೆ ಆಗಾಗ ಬರುತ್ತಿರು’ ಎಂದು ಕೂಡ ಹೇಳಿದರು. ನಾನು ಅವರಿಗಿಂತ ತುಂಬಾ ಸಣ್ಣವ ಆದರೆ ಅವರು ಅದನ್ನು ಎಲ್ಲೂ ತೋರ್ಪಡಿಸಲಿಲ್ಲ. ಆತ್ಮೀಯತೆಯಿಂದ ಮಾತನಾಡಿ ಮತ್ತೆ ಸಿಗುವ ಎಂದು ಹೇಳಿ ಹೋದರು. ಇದು ನನ್ನ ಅವರ ಮೊದಲ ಭೇಟಿ. ಮತ್ತೇ ಮುಂದೆ ಅದೇ ಕೊನೆಯ ಭೇಟಿಯೂ ಆಯಿತು.

ನಂತರ ಹಿರಿಯ ಕೊಂಕಣಿ ಲೇಖಕರಾದ ದಿ.ಪೌಲ್ ಮೋರಸ್ ಅವರ ಪುಸ್ತಕ ಬಿಡುಗಡೆ ಸಮಯದಲ್ಲಿ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಸಭಾಂಗಣದಲ್ಲಿ ಅವರನ್ನು ಭೇಟಿಯಾಗಿದ್ದನು ನನ್ನ ಗೆಳೆಯ. ಈಗ ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಶ್ರೀಗುರುದತ್ ಬಾಳಿಗಾ ಅವರು ಅಂದು ನನ್ನ ಗೆಳೆಯನನ್ನು ಬಸ್ತಿಯವರಿಗೆ ಪರಿಚಯಿಸಿದಾಗ, ‘ನಿನ್ನನ್ನು ಎಲ್ಲೋ ನೋಡಿದ ನೆನಪಿದೆ’ ಅಲ್ಲದೇ ನಿನ್ನ ಗೆಳೆಯ ಎಲ್ಲಿ ಅಂತ ಕೇಳಿದ್ದರಂತೆ, ನನ್ನನ್ನು ಕುರಿತು. ಆಗ ನನ್ನ ಗೆಳೆಯ ಅವರಿಗೆ ನಮ್ಮ ಹಿಂದಿನ ಭೇಟಿಯನ್ನು ನೆನಪಿಸಿದ್ದನಂತೆ. ಅಂದಿನ ಕಾರ್ಯಕ್ರಮದ ಬಗ್ಗೆ ನನ್ನ ಗೆಳೆಯರು ಒಂದಿಷ್ಟು ನೆನಪಿನ ಮಾತುಕತೆ ನಡೆಸಿದ್ದರಂತೆ.

ನಂತರ ಒಮ್ಮೆ ಒಂದು ಶುಭ ಸಮಾರಂಭದಲ್ಲಿ ಸಿಕ್ಕಿದರೂ ಅವರೊಂದಿಗೆ ಮಾತನಾಡಲು ಆಗಿರಲಿಲ್ಲ. ಅವರು ಕೊನೆಯ ಬಾರಿಗೆ ಸಿಕ್ಕಿದ್ದು ಇದೇ ದಿ. ಪೌಲ್ ಮೋರಸ್ ಅವರ ಇನ್ನೊಂದು ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ. ಕಾರ್ಯಕ್ರಮ ನಡೆದದ್ದು ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ.

ಅಂದು ‘ಬಸ್ತಿ ಮಾಮ್’ ಅವರನ್ನು ಹೂವು ನೀಡಿ ಸ್ವಾಗತಿಸುವ ಅವಕಾಶ ನನಗೆ ದೊರೆತದ್ದು ನನ್ನ ಸುದೈವವೇ ಸರಿ. ಅಂದು ಕಾರ್ಯಕ್ರಮ ಮುಗಿಸಿ ಹೊರಟಾಗ ಅವರನ್ನು ಕಾರಿನ ತನಕ ತಲುಪಿಸಲು ಹೋದಾಗ ‘ನನ್ನ ಗೆಳೆಯರನೇಕನ್ನು ಕರೆದುಕೊಂಡು ಮನೆಗೆ ಬಾ’ ಎಂದು ಆಹ್ವಾನಿಸಿದ ನೆನಪು ನನಗೆ ಈಗಲೂ ಇದೆ ಎನ್ನುತ್ತಾನೆ ನನ್ನ ಗೆಳೆಯ. ಕಾರಣಾಂತರಗಳಿಂದ ನಮಗೆ ಅವರ ಮನೆಗೆ ಹೋಗಲು ಆಗಲೇ ಇಲ್ಲ. ಈಗ ಅವರೂ ಆ ಮನೆಯಿಂದ ಹಿಂದಿರುಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ನಾನು ಅವರನ್ನು ಕೊನೆಯ ಬಾರಿ ಅವರನ್ನು ಕಂಡಾಗ ಅವರಿಗೆ 84-85 ವರ್ಷ ಪ್ರಾಯವಾಗಿದ್ದಿರಬಹುದು. ಆದರೂ ಅವರು ಕಾರ್ಯಕ್ರಮದಲ್ಲಿ ಬಹಳ ಲವಲವಿಕೆಯಿಂದ ಪಾಲ್ಗೊಂಡಿದ್ದರು. ಅವರ ಜೀವನೋತ್ಸಾಹ ನಮಗೆ ನಿಜಕ್ಕೂ ಅಚ್ಚರಿಯಾಗಿ ಕಂಡಿತ್ತು. ಅವರ ಜೊತೆಗೆ ಮಾತನಾಡಿದ ಆ ಕೆಲವೇ ಕೆಲವು ನಿಮಿಷಗಳು ನಮ್ಮ ಬಾಳಿನ ಉತ್ತಮ ಸಮಯವೆಂದೇ ಹೇಳಬಹುದು. ಜನವರಿ 2, 2022 ರಂದು ‘ಬಸ್ತಿ ಮಾಮ್’ ನಿಧನ ಹೊಂದಿದ ಸುದ್ದಿ ಕೇಳಿದ ನಮಗೆ ಇದೆಲ್ಲಾ ನೆನಪಾಯಿತು.

ಅವರ ಸಂಕ್ಷಿಪ್ತ ಪರಿಚಯ ಹೀಗಿದೆ: 1934 ರ ನವೆಂಬರ್ 6 ರಂದು ಬಂಟ್ವಾಳದಲ್ಲಿ ಮಾಧವ ಶೆಣೈ ಹಾಗೂ ಗೌರಿಬಾಯಿಯವರ ಸುಪುತ್ರರಾಗಿ ಜನನವಾಯಿತು ‘ಬಸ್ತಿ ಮಾಮ್’ ನದು. ಸಿಂಡಿಕೇಟ್ ಬ್ಯಾಂಕ್ ನಲ್ಲಿ ವೃತ್ತಿ ಜೀವನ ಆರಂಭಿಸಿ ವ್ಯವಸ್ಥಾಪಕರಾಗಿ ನಿವೃತ್ತಿಯಾದವರು. ನಿವೃತ್ತಿಯ ಬಳಿಕ ಕೊಂಕಣಿ ಭಾಷೆಯನ್ನು ಉಳಿಸಿ–ಬೆಳೆಸಲು ನಿರಂತರ ಹೋರಾಟ ನಡೆಸಿದರು. 1991-92 ರಲ್ಲಿ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಮತ್ತು ಕೊಂಕಣಿ ಅಕಾಡೆಮಿ ಸ್ಥಾಪನೆಯಾಗಬೇಕೆಂಬ ಬೇಡಿಕೆಗಳ ಕುರಿತಾಗಿ ಹೋರಾಟ ಕೈಗೊಳ್ಳುವ ಸಂದರ್ಭದಲ್ಲಿ ಇವರನ್ನೇ ಸಂಚಾಲಕರಾಗಿ ನೇಮಿಸಲಾಯಿತ್ತು. ರಾಜ್ಯಾದ್ಯಂತ ಕೊಂಕಣಿ ಜಾಥಾ ನಡೆದ ಪರಿಣಾಮ 1992 ರಲ್ಲಿ ಕೊಂಕಣಿ ಭಾಷೆ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಯಿತು. 1994 ರಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆಗೊಂಡಿತು.

1996 ರಲ್ಲಿ ಸ್ಥಾಪಿತವಾದ ಕೊಂಕಣಿ ಬಾಸ್ ಆನಿ ಸಂಸ್ಕೃತಿ ಪ್ರತಿಷ್ಟಾನ್ ಇದರ ಅಧ್ಯಕ್ಷರಾಗಿದ್ದು, 2021 ರ ತನಕ ಅಧ್ಯಕ್ಷರಾಗಿದ್ದವರು. ನಂತರ ಸಹ ಅಧ್ಯಕ್ಷರಾಗಿಯೇ ಮುಂದುವರೆದಿದ್ದರು ‘ಬಸ್ತಿ ಮಾಮ್.’ ಇವರು ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ರೂವಾರಿ ಹೌದು. 2009 ರಲ್ಲಿ ಸ್ಥಾಪನೆಗೊಂಡ ಈ ಕೇಂದ್ರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದವರು. ಇವರಿಗೆ ವಿಶ್ವ ಕೊಂಕಣಿ ಸರದಾರ, ವಿಶ್ವ ಸಾರಸ್ವತ ಸರದಾರ ಬಿರುದುಗಳು ದೊರೆತಿವೆ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೋವಾ ಕೊಂಕಣಿ ಅಕಾಡೆಮಿಯ ಜೀವಮಾನದ ಸಾಧನಾ ಪ್ರಶಸ್ತಿಗಳೂ ದೊರೆತಿವೆ..!

ಇದಿಷ್ಟು ‘ಬಸ್ತಿ ಮಾಮ್’ನ ಸಂಕ್ಷಿಪ್ತ ಪಚರಿಚಯವೂ…

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here