ಚಂಪಾ ಕನ್ನಡ ಸಾಹಿತ್ಯದ ಬಂಡಾಯ ಸಂಪತ್ತು: ಯುವ ಸಾಹಿತಿ ಮರಲಿಂಗ ಯಾದಗಿರಿ

0
39

ವಾಡಿ: ಬಂಡಾಯ ಸಾಹಿತ್ಯದ ಕೊಂಡಿಯಾಗಿದ್ದ ಕವಿ ಚಂದ್ರಶೇಖರ ಪಾಟೀಲರು ಕನ್ನಡ ಬರಹ ಲೋಕದ ಸಂಪತ್ತಾಗಿದ್ದರು. ಚಂಪಾ ನಿಧನದಿಂದ ಕನ್ನಡ ನಾಡು-ನುಡಿ ಹೋರಾಟದ ದನಿಯೊಂದು ಇಂಗಿದಂತಾಗಿದೆ ಎಂದು ಶಿಕ್ಷಕ, ಯುವ ಸಾಹಿತಿ ಮರಲಿಂಗ ಯಾದಗಿರಿ ಕಳವಳ ವ್ಯಕ್ತಪಡಿಸಿದರು.

ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಅಗಲಿದ ನಾಡಿನ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಚಂದ್ರಶೇಖರ ಪಾಟೀಲ (ಚಂಪಾ) ಅವರ ನುಡಿ ನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಅಕ್ಷರಗಳನ್ನೂ ಹೋರಾಟದ ಮೆರವಣಿಗೆಯಲ್ಲಿ ನಿಲ್ಲಿಸುವ ಸಾಮಾರ್ಥ್ಯ ಪ್ರಗತಿಶೀಲ ಲೇಖಕನಿಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟ ಜನಪರ ಕವಿ ಚಂಪಾ, ಇಂದಿನ ಯುವ ಬರಹಗಾರರಿಗೆ ಸ್ಪೂರ್ತಿಯಾಗಿದ್ದಾರೆ.

Contact Your\'s Advertisement; 9902492681

ಬದುಕಿದಂತೆ ನೇರವಾಗಿ ಬರೆದು ಜನರಿಗೆ ಸತ್ಯ ಹೇಳುವ ಎದೆಗಾರಿಕೆ ಎಲ್ಲರಲ್ಲೂ ಇರುವುದಿಲ್ಲ. ಹೋರಾಟದ ಜತೆಗೆ ಚಳುವಳಿಗೆ ಶಕ್ತಿಯಾಗಬಲ್ಲ ಸಾಹಿತ್ಯದ ಕೊಡುಗೆ ನೀಡಿರುವುದು ಅವರಿಗಿರುವ ಸಮಾಜದ ಮೇಲಿನ ಕಾಳಜಿ ಎತ್ತಿ ತೋರಿಸುತ್ತದೆ. ಸಾಹಿತ್ಯ ಸಮ್ಮೇಳನಗಳು ನೃತ್ಯ ಸಮ್ಮೇಳನಗಳಾಗದೆ ಜನರ ನೋವಿಗೆ ಸ್ಪಂದಿಸುವ ದನಿಯಾಗಬೇಕು ಎನ್ನುತ್ತಿದ್ದರು. ಅಂತಹ ಮೇರು ಸಾಹಿತಿಯ ಅಗಲಿಕೆಯಿಂದ ವೈಚಾರಿಕ ಸಾಹಿತ್ಯದ ಕೊಂಡಿಯೊಂದು ಕಳಚಿದಂತಾಗಿದೆ ಎಂದರು.

ಸಾಂಸ್ಕೃತಿಕ ಸಂಘಟಕ, ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿ, ಕನ್ನಡ ಅಸ್ಮಿತೆಗೆ ಧಕ್ಕೆ ಬಂದಾಗಲೊಮ್ಮೆ ಚಂಪಾ ಹೋರಾಟದ ಹಾದಿ ತುಳಿಯುತ್ತಿದ್ದರು. ಗೋಕಾಕ್ ಚಳುವಳಿಯ ಮುಂಚೂಣಿಯಲ್ಲಿದ್ದರು. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂದು ಗುಡುಗಿದ್ದರು. ಸಾಹಿತ್ಯ ಪರಿಷತ್ತು ಚಿಂತಕರ ಚಾವಡಿಯಾಗಬೇಕು ಎಂದು ಬಯಸಿದ್ದರು. ಅವರು ಕಸಾಪ ರಾಜ್ಯಾಧ್ಯಕ್ಷರಾಗಿದ್ದಾಗ ಅದೇ ರೀತಿ ನಡೆದುಕೊಂಡರು. ಅವರು ಹೊರ ತಂದ ಸಂಕ್ರಮಣ ಪತ್ರಿಕೆಯ ಮೂಲಕ ನಾಡಿನ ಅನೇಕ ಯುವ ಬರಹಗಾರರನ್ನು ಬೆಳೆಸಿದರು. ನೇರ ನಡೆಯ ದಿಟ್ಟ ನುಡಿಯ ವ್ಯಕ್ತಿತ್ವದ ಚಂಪಾ ನಮಗೆಲ್ಲರೀಗೂ ಆದರ್ಶ ಎಂದು ಹೇಳಿದರು.

ಸಂಚಲನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ದಯಾನಂದ ಖಜೂರಿ, ನಿಕಟಪೂರ್ವ ಅಧ್ಯಕ್ಷ ವಿಕ್ರಮ ನಿಂಬರ್ಗಾ ಮಾತನಾಡಿದರು. ಮಡಿವಾಳಪ್ಪ ಹೇರೂರ, ರವಿ ಕೋಳಕೂರ, ವೀರಣ್ಣ ಯಾರಿ, ಬಸವರಾಜ ಗುಳೆ, ಯಶ್ವಂತ ಧನ್ನೇಕರ, ರಾಜು ಒಡೆಯರಾಜ, ಸಂಗಮೇಶ ರೆಡ್ಡಿ ಸೇರಿದಂತೆ ಮತ್ತಿತರgರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here