ಕೇಂದ್ರ ರೈತ ವಿರೋಧಿ ನೀತಿ ವಿರುದ್ಧ ಕೃಷಿ, ಕೂಲಿಕಾರರಿಂದ ಪ್ರತಿಭಟನೆ

0
40

ಕಲಬುರಗಿ:  ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕೃಷಿ, ಕೂಲಿ ಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಶೋಕ್ ಮ್ಯಾಗೇರಿ, ಪಾಂಡುರಂಗ್ ಮಾವಿನ್, ಮಲ್ಲಣಗೌಡ ಬನ್ನೂರ್, ಶಾಂತಪ್ಪ ಪಾಟೀಲ್, ಸುಭಾಷ್ ಹೊಸಮನಿ, ಸಿದ್ದಲಿಂಗಯ್ಯಸ್ವಾಮಿ ಯಂಪಳ್ಳಿ, ಸಿದ್ದು ಪಾಳಾ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಪತ್ರ ಸಲ್ಲಿಸಿ, ಸುಪ್ರಿಂಕೋರ್ಟ್ ಈಗಾಗಲೇ ದೇಶಾದ್ಯಂತ ತಿರಸ್ಕೃತಗೊಂಡ ಅರಣ್ಯ ಭೂಮಿ ಹಕ್ಕುಗಳ ಅರ್ಜಿದಾರರನ್ನು ತಕ್ಷಣವೇ ಒಕ್ಕಲೆಬ್ಬಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಜನತೆಯ ಒತ್ತಾಯದ ಮೇರೆಗೆ ಆದೇಶಕ್ಕೆ ಜುಲೈ ೧೦ರವರೆಗೆ ತಡೆಯಾಜ್ಞೆ ಕೊಡಲಾಗಿತ್ತು. ಮುಂದಿನ ವಿಚಾರಣೆ ಜುಲೈ ೨೪ಕ್ಕೆ ಬರಲಿದೆ. ಈ ನಡುವೆ ಸರ್ಕಾರ ಸುಪ್ರಿಂಕೋರ್ಟ್ ನಿರ್ದೇಶನದಂತೆ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಕ್ರಮವಹಿಸಿದೆ. ಆದಾಗ್ಯೂ, ಲಕ್ಷಾಂತರ ಆದಿವಾಸಿಗಳು ಹಾಗೂ ಅರಣ್ಯವಾಸಿ ಅರ್ಜಿದಾರರು ಒಕ್ಕಲೆಬ್ಬಿಸಲ್ಪಡುವ ಭೀತಿಗೆ ಒಳಗಾಗಿದ್ದಾರೆ. ರಾಜ್ಯದಲ್ಲಿಯೂ ಇಂತಹ ಭೀತಿಗೆ ಒಳಗಾದವರು ಇದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ೧೯೨೭ರ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಿ ಅರಣ್ಯ ಹಾಗೂ ಖನಿಜ ಸಂಪನ್ಮೂಲಗಳನ್ನು ಕಾರ್ಪೋರೇಟ್ ಕಂಪೆನಿಗಳ ಲೂಟಿಗೆ ತೆರೆಯಲು ಮುಂದಾಗುತ್ತಿದೆ ಎಂದು ಆರೋಪಿಸಿದ ಅವರು, ಕೂಡಲೇ ಆದಿವಾಸಿಗಳು ಹಾಗೂ ಅರಣ್ಯವಾಸಿಗಳು ಭೂಮಿ ಹಕ್ಕು ಪಡೆಯುವ ಕುರಿತಂತೆ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಕ್ಷಣವೇ ಜಿಲ್ಲಾ ಸಮಿತಿಗಳು ಮಧ್ಯಪ್ರವೇಶಿಸಿ ಆಯಾ ಪ್ರದೇಶದಲ್ಲಿನ ಕರ್ನಾಟಕ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಇತರೆ ಭೂಮಿ ಅಧಿಕಾರ ಆಂದೋಲನದ ಪರವಾದ ಸಂಘಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಡಾ. ಎಂ.ಎಸ್. ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಸುವ ಕಾಯ್ದೆ ಮತ್ತು ಎಲ್ಲ ಕೃಷಿಕರಿಗೆ ಅಗತ್ಯ ಸಾಲ ಒದಗಿಸುವ ಮತ್ತು ನಷ್ಟದ ಸಂದರ್ಭದಲ್ಲಿ ಮನ್ನಾ ಮಾಡುವ ಕಾಯ್ದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸುವಂತೆ ಅವರು ಒತ್ತಾಯಿಸಿದರು.

ಮಳೆ, ಬೆಳೆ ಇಲ್ಲದೇ ರೈತರು ಹಾಗೂ ಕೃಷಿ ಕೂಲಿಕಾರರು ಮುಂಬಯಿ, ಪುಣೆ, ಹೈದ್ರಾಬಾದ್, ಬೆಂಗಳೂರು ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಕೂಡಲೇ ಅದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಬೇಸಿಗೆಯಲ್ಲಿ ಕೆಲಸ ಮಾಡಿದ ಉದ್ಯೋಗ ಖಾತ್ರಿ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here