ಮನುಷ್ಯ ಬದುಕಿದ್ದಾಗ ರಕ್ತದಾನ iತ್ತು ಮರಣದ ನಂತರ ಜೀವಂತವಿರಲು ನೇತ್ರದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು.ಇಂದು ನಾನು ಕೂಡ ನೇತ್ರದಾನ ಮಾಡಿರುವುದಕ್ಕೆ ಹೆಮ್ಮೆಯಾಗುತ್ತಿದೆ-ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ
ಸುರಪುರ : ತಾಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀಗಿರಿ ಮಠದ ಪೀಠಾಧೀಪತಿ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಜನ್ಮದಿನದ ೩೭ನೇ ವರ್ಧಂತಿ ಮಹೋತ್ಸವ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀಮಠದಲ್ಲಿ ರಕ್ತದಾನ ಶಿಬಿರ,ಉಚಿತ ನೇತ್ರ ಚಿಕಿತ್ಸೆ, ಪರಿಸರ ಜಾಗೃತಿಗಾಗಿ ಸಸಿಗಳ ವಿತರಣೆ,ಸಾಧಕ ರೈತರ ಸನ್ಮಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಉಚಿತ್ರ ನೇತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಸಾಮಾಜಿಕ ಕಾಳಜಿಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ಮತ್ತೊಂದು ಜೀವದ ಉಳಿವಿಗೆ ಕೈ ಜೋಡಿಸಬೇಕು.ರಕ್ತದಾನ ಮಾಡುವುದು ಎಂದರೆ ಜೀವದಾನ ಮಾಡಿದಂತೆ ಎಂದರು.
ಅಪಘಾತ ಮತ್ತು ಅವಘಡಗಳು ಸಂಭವಿಸಿದಾಗ ವ್ಯಕ್ತಿಯೊಬ್ಬರ ಜೀವವನ್ನು ಉಳಿಸಲು ಮಾಡಿದ ರಕ್ತದಾನ ಶ್ರೇಷ್ಠವಾದ ಕಾರ್ಯವಾಗುತ್ತದೆ. ಆಕಸ್ಮಿಕವಾಗಿ ಘಟಿಸುವ ಅಪಘಾತಗಳ ಸಂದರ್ಭದಲ್ಲಿ ಉಪಯುಕ್ತವಾಗುವಂತಹ ರಕ್ತದಾನದಂತಹ ಮಹತ್ಕಾರ್ಯಗಳು ನಿರಂತರವಾಗಿ ನಡೆಯಬೇಕು. ಪ್ರತಿಯೊಬ್ಬರೂ ಕೂಡ ರಕ್ತದಾನದಲ್ಲಿ ಭಾಗವಹಿಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಚಟ್ನಳ್ಳಿಯ ವಿಶ್ವರಾಧ್ಯ ದೇವರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಲಚಮರೆಡ್ಡಿ, ಶರಣುನಾಯಕ ಬೈರಿಮಡ್ಡಿ, ಸೂಗುರೇಶ ಮಡ್ಡಿ, ಶಿವರಾಜ ಕಲಕೇರಿ, ಪ್ರಕಾಶ ಅಂಗಡಿ, ಶರಣುನಾಯಕ ಡೊಣ್ಣಿಗೇರಾ, ಮಲ್ಲುನಾಯಕ ಕಬಾಡಗೇರಾ, ಹಂಪಯ್ಯ ಹಿರೇಮಠ ಬೋನ್ಹಾಳ, ಮಲ್ಲು ಬಾದ್ಯಾಪುರ, ಭೀಮಾಶಂಕರ ಭಂಡಾರಿ, ಯಲ್ಲಪ್ಪನಾಯಕ ಕಬಾಡಗೇರಾ, ಶರಣು ಡಿಬಾಸ್ ಸೇರಿದಂತೆ ಲಕ್ಷ್ಮೀಪುರ, ಬಿಜಾಸ್ಪೂರ ಗ್ರಾಮಗಳ ಸದ್ಭಕ್ತರು ಇದ್ದರು.
ನಂತರ ಉಚಿತ ನೇತ್ರ ಚಿಕಿತ್ಸೆ, ರೈತರಿಗೆ ಸನ್ಮಾನ, ಸಸಿ ವಿತರಣಾ ಕಾರ್ಯಕ್ರಮ, ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ, ಸಂಗೀತ ಕಾರ್ಯಕ್ರಮಗಳು ಜರುಗಿದವು. ಶಿಬಿರದಲ್ಲಿ ೩೦ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಯಾದಗಿರಿ ಸುರಗಿ ಮಠ ಬ್ಲಡ್ ಮತ್ತು ರೆಡ್ಕ್ರಾಸ್ ಸಂಸ್ಥೆ ಯವರು ರಕ್ತ ಸಂಗ್ರಹಣೆ ಮಾಡಿದರು. ಶ್ರೀಗಿರಿ ಮಠದ ಡಾ.ಚನ್ನಮಲಿಕಾರ್ಜುನ ಶಿವಾಚಾರ್ಯರು ಸೇರಿ ೧೦ ಜನರು ನೇತ್ರದಾನ ಪತ್ರ ನೀಡಿದರು.