ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಪ್ರಸ್ತಾಪಿಸುವ ನೈತಿಕ ಹಕ್ಕು ಕತ್ತಿಗೆ ಇಲ್ಲ: ಲಕ್ಷ್ಮಣ ದಸ್ತಿ

0
55

ಕಲಬುರಗಿ : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯಾಗಬೇಕೆಂಬ ವಿಷಯದ ಬಗ್ಗೆ ಆಗಾಗ ಪ್ರಸ್ತಪಿಸುವ ಸಚಿವ ಉಮೇಶ ಕತ್ತಿಯವರು ಈಗ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಪ್ರಸ್ತಾಪಿಸಿರುವುದು ಹಾಸ್ಯಾಸ್ಪದ ವಿಷಯವಾಗಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಪ್ರಸ್ತಾಪಿಸುವ ಹಕ್ಕು ರಾಜ್ಯದ ಅರಣ್ಯ ಸಚಿವರಾದ ಉಮೇಶ ಕತ್ತಿಗೆ ಯಾವ ನೈತಿಕ ಹಕ್ಕು ಇಲ್ಲ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಹೆಸರಿನ ಮೇಲೆ ಕಳೆದ ಅನೇಕ ವರ್ಷಗಳಿಂದ ಕಲ್ಯಾಣ ಕರ್ನಾಟಕಕ್ಕೆ ಮಂಜೂರಾದ ಅನೇಕ ಯೋಜನೆಗಳನ್ನು ಮುಂಬೈ ಕರ್ನಾಟಕಕ್ಕೆ ಸ್ಥಳಾಂತರ ಮಾಡಿಕೊಂಡು ಕಲ್ಯಾಣ ಕರ್ನಾಟಕಕ್ಕೆ ಭರಿಸಲಾರದಷ್ಟು ಅನ್ಯಾಯ ಮಾಡಿರುತ್ತಾರೆ. ಐ.ಐ.ಐ.ಟಿ., ಐ.ಐ.ಟಿ., ಏಮ್ಸ್, ಸೇರಿದಂತೆ ಬಹಳಷ್ಟು ಯೋಜನೆಗಳು ಮುಂಬೈ ಕರ್ನಾಟಕದ ನಾಯಕರು ಕಬಳಿಸಿಕೊಂಡಿರುವದಲ್ಲದೇ ಪ್ರಸ್ತುತ ಮಂತ್ರಿ ಮಂಡಳದಲ್ಲಿಯೂ ಸಹ ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಪ್ರಭಾವಿ ಮಂತ್ರಿಗಳು ಮುಂಬೈ ಕರ್ನಾಟಕದವರೇ ಇದ್ದಾರೆ.

Contact Your\'s Advertisement; 9902492681

ಅಷ್ಟೆ ಅಲ್ಲದೇ ಕಲ್ಯಾಣ ಕರ್ನಾಟಕ ಕೋಟಾದ ಮಂತ್ರಿ ಸ್ಥಾನಗಳೂ ಸಹ ಅವರೇ ಕಬಳಿಸಿಕೊಂಡಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಈಗ ಉತ್ತರ ಕರ್ನಾಟಕದ ಶಬ್ದ ಗೌಣವಾಗಿದ್ದು, ಏನಿದ್ದರೂ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಎಂಬ ಬೇರೆ ಬೇರೆ ಹೆಸರುಗಳು ಸರಕಾರದಿಂದ ಅಧಿಕೃತವಾಗಿ ಘೋಷಣೆಯಾಗಿವೆ. ಪ್ರತ್ಯೇಕ ರಾಜ್ಯ ಕೇಳುವ ಹಕ್ಕು ಕರ್ನಾಟಕ ರಾಜ್ಯದಲ್ಲಿ ಯಾರಿಗಾದರೂ ಇದ್ದರೆ, ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾತಕಪ್ರದೇಶಕ್ಕೆ ಮಾತ್ರ ಎಂಬುವುದು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರಕಾರ ಹೊಸ ರಾಜ್ಯಗಳ ರಚನೆ ಮಾಡಿದ್ದಲ್ಲಿ ಯವುದೇ ಕಾರಣಕ್ಕೂ ಮುಂಬೈ ಕರ್ನಾಟಕದ ಜೊತೆ ಕಲ್ಯಾಣ ಕರ್ನಾಟಕ ಸೇರಿಸಿದರೆ ಇದಕ್ಕೆ ಕಲ್ಯಾಣ ಕರ್ನಾಟಕ ಒಪ್ಪಲು ಸಾಧ್ಯವೇ ಇಲ್ಲ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ.

ಪ್ರಸ್ತುತ ಅಖಂಡ ಕರ್ನಾಟಕದಲ್ಲಿ ಭಾರತ ಸರಕಾರ ಕಲ್ಯಾಣ ಕರ್ನಾಟಕಕ್ಕೆ ೩೭೧ನೇ(ಜೆ) ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಿರುವದಕ್ಕೆ ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾದ ಬೊಮ್ಮಾಯಿಯವರು ರಾಜಕೀಯ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿ ಇದರ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯವನ್ನು ಅಸ್ತಿತ್ವಕ್ಕೆ ತಂದು ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನೆಗೆ ಕಾಲಮಿತಿ ಯಂತೆ ಸಮಾರೋಪಾದಿಯಾಗಿ ಕ್ರಮ ಕೈಗೊಳ್ಳಬೇಕು.

ಕಲ್ಯಾಣ ಕರ್ನಾಟಕದ ರಚನಾತ್ಮಕ ಅಭಿವೃದ್ಧಿಪರ ವಿಷಯಗಳ ಬಗ್ಗೆ ಕಿಂಚಿತ್ತವೂ ಪ್ರಸ್ತಾಪ ಮಾಡದ ಉಮೇಶ ಕತ್ತಿಯವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಇನ್ನು ಮುಂದೆ ಪ್ರಸ್ತಾಪಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಜನರು ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಿತಿ ಎಚ್ಚರಿಸಿದೆ. ಕತ್ತಿ ಅವರಿಗೆ ಪ್ರತ್ಯೇಕ ರಾಜ್ಯ ಕೇಳುವುದಾದರೆ ಕಿತ್ತೂರು ಕರ್ನಾಟಕದ ಹೆಸರಿನ ಮೇಲೆ ಕೇಳಲಿ ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅದರೆ ಉತ್ತರ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕವನ್ನೂ ಸೇರಿಸಿ ಪ್ರತ್ಯೇಕ ರಾಜ್ಯ ಕೇಳುವುದಕ್ಕೆ ನಮ್ಮ ತೀವ್ರ ಪ್ರತಿರೋಧವಾಗಿದೆ ಎಂದು ಲಕ್ಷ್ಮಣ ದಸ್ತಿಯವರು ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here