ಕಲಬುರಗಿ: ಬಿಜೆಪಿ ಸರಕಾರದಲ್ಲಿ ರಾಷ್ಟ್ರ ಧ್ವಜ ಮತ್ತು ದೇಶ ಭಕ್ತಿಯನ್ನೂ ಮಾರಾಟಕ್ಕಿಟ್ಟಿದ್ದಾರೆ ಇವರಿಗೆ ದೇಶ ಭಕ್ತಿ ಮುಖ್ಯವಲ್ಲ. ಧ್ವಜ ಕೋಡ್ ನಿಯಮದಲ್ಲಿ ಬದಲಾವಣೆ ತಂದು ಪಾಲಿಯಸ್ಟರ್ ಧ್ವಜ ತಯಾರಿಕೆಗೆ ಅನುಮತಿ ನೀಡಿ ರಿಲಾಯನ್ಸ ಕಂಪೆನಿಗೆ ನೂರಾರು ಕೋಟಿ ಲಾಭ ಮಾಡಿ ಕೊಡುವ ಹುನ್ನಾರ ಹೊಂದಿದೆ ಎಂದು ಯೂಥ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವಾನಂದ ಹೊನಗುಂಟಿ ಆರೋಪಿಸಿದ್ದಾರೆ.
ರಾಷ್ಟ್ರಧ್ವಜ ಮಾರಲು ಅಧಿಕಾರಿಗಳನ್ನು ಸೇಲ್ಸ್ ಎಜೆಂಟರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ ಗ್ರಾಮ ಪಂಚಾಯತನಿಂದ ಹಿಡಿದು ಎಲ್ಲಾ ಕಡೆ ಟಾರ್ಗೆಟ್ ನೀಡಲಾಗಿದೆ. ಬಿಜೆಪಿಯವರು ನಕಲಿ ದೇಶ ಭಕ್ತರು , ಇವರಿಗೆ ಉಚಿತ ಧ್ವಜ ಕೊಡಲು ಆಗಲ್ವಾ ? ಎಂದು ಟೀಕಿಸಿದ್ದಾರೆ.
ರಾಷ್ಟ್ರಧ್ವಜದ ನಿಯಮಾವಳಿ ತಿದ್ದುಪಡಿ ಮಾಡಿದ್ದರಿಂದ ಪಾಲಿಯಸ್ಟರ್ ಬಟ್ಟೆಯಲ್ಲಿ ಧ್ಚಜ ಮುದ್ರಿಸಲಾಗಿದೆ. ಅದರಲ್ಲಿಯೂ ಕೂಡಾ ಲೋಪದೋಷಗಳಾಗಿವೆ. ಚಕ್ರವೂ ಮಧ್ಯೆ ಭಾಗದಲ್ಲಿರದೇ ಧ್ವಜ ಕೊನೆ ಇಲ್ಲವೇ ಪ್ರಾರಂಭದಲ್ಲಿಯೇ ಮುದ್ರಣಗೊಂಡಿದೆ ಎಂದು ದೂರಿದರು.
ಆದ್ದರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ರೂ ೨ ಲಕ್ಷ ಮೌಲ್ಯದ ಖಾದಿ ಬಟ್ಟೆಯಲ್ಲಿ ತಯಾರಿಸಲಾದ ಧ್ಚಜಗಳನ್ನೇ ಖರೀದಿ ಮಾಡಲಾಗುತ್ತಿದೆ ಎಂದರು.
ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ ಖರ್ಗೆ ಅವರ ಆದೇಶದ ಮೇರೆಗೆ ಜಿಲ್ಲಾ ಕಾಂಗ್ರೆಸ್ ಯೂಥ್ ಘಟಕದಿಂದ ೧೦ _ಸಾವಿರ ತಿರಂಗಾ ಧ್ವಜ ವಿತರಿಸಲಾಗುತ್ತಿದೆ. ವಿಶೇಷವಾಗಿ ಅಂಚೆ ಇಲಾಖೆ ೫೦೦ ಹಾಗೂ ಆಟದ ಚಾಲಕರಿಗೆ ಧ್ವಜ ನೀಡಲಾಗುತ್ತಿದೆ.
ಅಲ್ಲದೆ ನಗರದಲ್ಲಿ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳಿಗೆ ಯೂಥ್ ಕಾಂಗ್ರೆಸ್ ನಿಂದ ತಿರಂಗಾ ಧ್ವಜ ಉಚಿತವಾಗಿ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ್ಣ ಝಳಕಿ, ಮುಖಂಡರಾದ ಕಾರ್ತಿಕ ನಾಟೇಕಾರ, ಎಜಾಜ್ ನಿಂಬಳಕರ್, ಗಣೇಶ ನಾಗನಹಳ್ಳಿ, ಸಂಗಪಾಲ್ ಕಾಂಬಳೆ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.