ಕಲಬುರಗಿ: ಭಾರತದ ಪ್ರಗತಿ ಕೇವಲ ಸರ್ಕಾರದ ಹೊಣೆಯಲ್ಲ. ಪ್ರತಿ ಪ್ರಜೆಯೂ ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕೆಬಿಎನ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.
ನಗರದ ಕೆಬಿಎನ್ ವಿವಿಯಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆದ ನಂತರ ಸಾಕಷ್ಟು ಪ್ರಗತಿ ಹೊಂದಿದೆ. ಆದರೂ ಸಾಧಿಸುವುದು ಇನ್ನೂ ಬಹಳಷ್ಟಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಪ್ರಸಿದ್ಧಿ ಮಾಡಲು ನಾವೆಲ್ಲ ಜೊತೆಯಾಗಿ ಶ್ರಮಿಸೋಣ ಎಂದರು.
ವಿವಿಯ ಉಪ ಕುಲಪತಿ ಡಾ. ಅಲಿ ರಜಾ ಮೂಸ್ವಿ ಮಾತನಾಡುತ್ತˌ ದೇಶ ಸ್ವಾತಂತ್ರ್ಯ ಪಡೆದ ನಂತರ ಪ್ರಜೆಗಳ ಜವಾಬ್ದಾರಿ ಹೆಚ್ಚಿದೆ. ರಾಷ್ಟ್ರ ಕಟ್ಟುವಲ್ಲಿ ಎಲ್ಲ ಪ್ರಜೆಗಳು ಭಾಗವಹಿಸಬೇಕು. ಅಮರ್ಥ್ಯಸೆನ್ ಪ್ರಕಾರ ಸ್ವತಂತ್ರ ಎಂದರೆ ಕೇವಲ ಮನಸೋ ಇಚ್ಛೆ ನಡೆದುಕೊಳ್ಳುವುದಲ್ಲ. ಆಯ್ಕೆ ಮಾಡುವ ಸಾಮರ್ಥ್ಯ ಮತ್ತು ಅವಕಾಶ ದೊರೆಯುವುದೇ ಸ್ವಾತಂತ್ರ್ಯ. ಶಿಕ್ಷಣ ಮಾಹಿತಿ ಮತ್ತು ಸರಿಯಾದ ನಡುವಳಿಕೆಯಿಂದ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬಹುದು. ನಮ್ಮ ಖಾಜಾ ಬಂದನಾವಾಜ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಭಾರತದ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ನಿರತವಾಗಿದೆ ಎಂದರು.
ಸಯ್ಯದ್ ಅಕ್ಬರ ಹುಸೇನಿ ಶಾಲೆಯ ಎನ್ ಸಿಸಿ ಘಟಕದ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು. ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇಂಜಿನಿಯರಿಂಗ ವಿದ್ಯಾರ್ಥಿನಿ ಸಾನಿಯಾ ಇರಮಖಾನ್ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಕುಲಸಚಿವೆ ಡಾ.ರುಕ್ಸಾರ ಫಾತಿಮಾ, ವೈದ್ಯಕೀಯ ನಿಕಾಯದ ಡೀನ ಡಾ ಸಿದ್ದೇಶ್ ಸಿರವಾರ್ , ಕಲಾ ನಿಕಾಯದ ಡೀನ್ ಡಾ. ನಿಶಾತ್ ಆರೀಫ್ ಹುಸೇನಿ, ಹಣಕಾಸು ಅಧಿಕಾರಿ ಜನಾಬ್ ಲತೀಫ್ ಶರೀಫ್, ಕೆಬಿಎನ್ ಅಡಿ ಬರುವ ಎಲ್ಲ ವಿದ್ಯಾ ಸಂಸ್ಥೆಗಳ ಸಮಸ್ತ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆಬಿಎನ್ ಡಿಗ್ರಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.