ಕಲಬುರಗಿ: ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ನಿಯಂತ್ರಿಸುವಂತೆ ಹಾಗೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಬುರಗಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ವಾಹನಗಳ ಓಡಾಟವು ಹೆಚ್ಚಾಗಿದೆ.ನಗರದಲ್ಲಿ ಕಾರುಗಳು ಸೇರಿದಂತೆ ಲಕ್ಷಕ್ಕೂ ಹೆಚ್ಚು ವಾಹನಗಳು ಪ್ರತಿದಿನ ರಸ್ತೆಗಳಲ್ಲಿ ಚಲಿಸುತ್ತವೆ.
ಕೆಲವು ಕಡೆ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆಗಳು ಎದುರಾಗುತ್ತವೆ.ಹಲವು ಬಾರಿ ರಸ್ತೆ ಅಪಘಾತಗಳು ಸಂಭವಿಸಿವೆ ಕಾರಣ ಟ್ರಾಫಿಕ್ ಪೊಲೀಸರು ಸರಿಯಾದ ರೀತಿಯಲ್ಲಿ ಸಂಚಾರ ನಿರ್ವಹಣೆ ಮಾಡುತ್ತಿಲ್ಲ.ವಾಹನಗಳ ತಪಾಸಣೆ ನೆಪದಲ್ಲಿ ಗುಂಪು ಗುಂಪಾಗಿ ನಿಂತುಕೊಂಡು ವಾಹನಗಳ ಸವಾರರಿಂದ ಹಣ ವಸೂಲು ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ.
ಜನಬೀಡ ಪ್ರದೇಶವಾದ ಸುಪರ್ ಮಾರ್ಕೇಟ್ ರಸ್ತೆಯಲ್ಲಿ ಆಟೋಗಳು ರಸ್ತೆ ಮಧ್ಯೆ ನಿಂತು ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿವೆ.ಸುಪರ್ ಮಾರ್ಕೇಟ್ ನಿಂದ ಗಂಜ ಕಡೆ ತೆರಳುವ ರಸ್ತೆಯಲ್ಲಿ ಕಾರುಗಳ ಮತ್ತು ಇನ್ನಿತರ ಲಘು ವಾಹನಗಳ ಓಡಾಟ ನಿಷೇಧಿಸಬೇಕು.ಕೇವಲ ದ್ವಿಚಕ್ರ ಮತ್ತು ಆಟೋರಿಕ್ಷಾಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದಿದ್ದಾರೆ.
ಕೇಂದ್ರ ಬಸ್ ನಿಲ್ದಾಣ ಎದುರು ಜನದಟ್ಟಣೆ ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗಿ ಮತ್ತು ಆಟೋರಿಕ್ಷಾಗಳು ಯದ್ವಾತದ್ವಾ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಈ ಪ್ರದೇಶದಲ್ಲಿ ಟ್ರಾಫೀಕ್ ಪೊಲೀಸರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.ಇನ್ನು ಪ್ರಮುಖ ವೃತ್ತಗಳಲ್ಲಿ ಕೆಂಪು ದೀಪಗಳು ಕೆಟ್ಟು ಹೋಗಿವೆ.
ಹೊರವಲಯದ ರಿಂಗ್ ರಸ್ತೆಯ ಖರ್ಗೆ ಪೆಟ್ರೋಲ್ ಬಂಕ್ ವೃತ್ತದಲ್ಲಿ ಭಾರಿ ವಾಹನಗಳ ಓಡಾಟದಿಂದ ನಿರಂತರ ಟ್ರಾಫಿಕ್ ಜಾಮ್ ಆಗುತ್ತದೆ.ಆದರೆ ಇಲ್ಲಿಯೂ ಸಂಚಾರ ಪೊಲೀಸರ ಗೈರು ಹಾಜರಿ ಎದ್ದು ಕಾಣುತ್ತದೆ.ಕೂಡಲೇ ನಗರ ಪೊಲೀಸ್ ಆಯುಕ್ತರು ಗಮನ ಹರಿಸಬೇಕು.ಅಲ್ಲದೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.