ಕ್ರಿಕೆಟ್ ಜಗತ್ತಿನಲ್ಲಿ ಕಲಬುರಗಿ ಅಮರ: ಅಲಿ ಸೈಯದ್ ಹುಸೇನಿ

0
29

ಕಲಬುರಗಿ: ಹಿಂದುಳಿದ ಭಾಗವೆಂದೆ ಹೆಸರಾಗಿದ್ದ ಗುಲ್ಬರ್ಗ ಈಗ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡುವ ಮೂಲಕ ಅಮರವಾಗಿದೆ. ಖಾಜಾ ಬಂದೇ ನವಾಜ್ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣ ಹಾಗೂ ಕ್ರಿಕೆಟ್ ಅಷ್ಟೇ ಅಲ್ಲದೇ ಇನ್ನಿತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲು ಸದಾ ಉತ್ಸುಕವಾಗಿರುತ್ತದೆ ಎಂದು ಖಾಜಾ ಬಂದೇ ನವಾಜ್ ವಿವಿಯ ಕುಲಾಧಿಪತಿ ಅಲಿ ಸೈಯದ್ ಹುಸೇನಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿನ ಕೆಬಿಎನ್ ಕ್ರಿಕೆಟ್ ಮೈದಾನದಲ್ಲಿ ಇತ್ತೀಚಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ದಿ. ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಅವರ ಸ್ಮರಣಾರ್ಥ ಆಯೋಜಿಸಿದ ಮಹಾರಾಜ T20 ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಹೊರಹೋಮ್ಮಿದ ಗುಲಬರ್ಗಾ ಮೈಸ್ಟಿಕ್ಸ್ ತಂಡದ ಆಟಗಾರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಬಳಿಕ ಮಾತನಾಡಿದ ತಂಡದ ನಾಯಕ ಮನೀಶ್ ಪಾಂಡ್ಯ, ಗುಲಬರ್ಗಾ ಮೈಸ್ಟಿಕ್ಸ್ ತಂಡದಿಂದ ಭಾಗವಹಿಸಿದ್ದು ಸಂತಸವಾಗಿದೆ. ಪಂದ್ಯಾವಳಿಗೂ ಮುನ್ನ ಹೆಚ್ಚಿನ ಆಟಗಾರರ ಜತೆ ಆಟವಾಡಿರಲಿಲ್ಲ. ಆದರೆ 5, 6 ದಿನಗಳಲ್ಲಿಯೇ ಒಳ್ಳೆಯ ತಂಡ ಕಟ್ಟುವ ಮೂಲಕ ಟ್ರೋಫಿ ಗೆಲ್ಲಲು ಸಾಧ್ಯವಾಗಿದೆ. ಈ ಮಹಾರಾಜ್ ಟ್ರೋಫಿಯನ್ನು ಕಲಬುರಗಿ ಹಾಗೂ ರಾಯಚೂರು ವಲಯಕ್ಕೆ ಸಲ್ಲಿಸುತ್ತೇವೆ. ಇದೆಲ್ಲಾ ನಿಮ್ಮ ಆಶೀರ್ವಾದದಿಂದ ಸಾಧ್ಯವಾಗಿದೆ. ಕೇವಲ ಎರಡು ಆಟಗಾರರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಯಚೂರು ಹಾಗೂ ಕಲಬುರಗಿ ವಲಯದಿಂದ ಹೆಚ್ಚಿನ ಆಟಗಾರರು ಅನೇಕ ಪಂದ್ಯಾವಳಿಯಲ್ಲಿ ಭಾಗವಹಿಸಲಿ ಎಂದು ಅವರು ಹೇಳಿದರು.

ರಾಯಚೂರು ವಲಯದ ಸಮನ್ವಯಕಾರ ಸುಧೀಂದ್ರ ಶಿಂಧೆ ಮಾತನಾಡಿ, ಮಹಾರಾಜ್ ಟ್ರೋಫಿ ಮೂಲಕ ಈ ಭಾಗದ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಪ್ರತಿಭೆಗಳು ಗುರುತಿಸುವಂತಾಗಲಿ ಎಂದರು.

ಈ ವೇಳೆ ಖಾಜಾ ಬಂದೇ ನವಾಜ್ ದರ್ಗಾದ ಮುಖ್ಯಸ್ಥ ಸಜ್ಜಾದ ಸೈಯದ್ ಶಾ ಖುಸ್ರೋ ಹುಸೇನಿ, ಜೆಸ್ಕಾಂ ಎಂಡಿ ರಾಹುಲ್ ಪಾಂಡ್ವೆ, ಎಂ ಎಂ ಪಠಾಣ್ ಮಾತನಾಡಿದರು.

ಇದಕ್ಕೂ ಮುನ್ನ ಟ್ರೋಫಿ ಜಯಿಸಿ ನಗರಕ್ಕೆ ಆಗಮಿಸಿದ ಗುಲಬರ್ಗಾ ಮೈಸ್ಟಿಕ್ಸ್ ತಂಡ ಮೊದಲು ಹಜರತ್ ಖಾಜಾ ಬಂದೇ ನವಾಜ್ ದರ್ಗಕ್ಕೆ ಭೇಟಿ ನೀಡಿದರು. ನಂತರ ಕಲಬುರಗಿ ಸುಪ್ರಸಿದ್ದ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಶರಣನ ಆಶೀರ್ವಾದ ಪಡೆದು, ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶರಣಬಸವಪ್ಪ ಅಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಅಪಘಾತದಲ್ಲಿ ಇತ್ತೀಚಿಗೆ ನಿಧನ ಹೊಂದಿದ ರಾಯಚೂರು ವಲಯದ ಆಟಗಾರ ವಿಜಯ ರೆಡ್ಡಿ ಅವರ ಕುಟುಂಬಕ್ಕೆ ಖಾಜಾ ಬಂದೇ ನವಾಜ್ ಸಂಸ್ಥೆಯಿಂದ ಗುಲಬರ್ಗಾ ಮೈಸ್ಟಿಕ್ಸ್ ತಂಡಡ ಜರ್ಸಿ ಹಾಗೂ ಆರ್ಥಿಕ ನೆರವಿನ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಕುಲಪತಿ ಅಲಿ ರಾಜಾ ಮೌಸ್ಲಿ, ತರಬೇತುದಾರ ಮನ್ಸೂರ್ ಅಲಿ ಖಾನ್, ಸಯ್ಯದ್‌ ಮೊಹಮ್ಮದ್‌ ಆಲಿ ಹುಸೈನಿ, ಗುಲಬರ್ಗಾ ಮೈಸ್ಟಿಕ್ ತಂಡದ ಪ್ರಯೋಜಕ ಮೈಕಾನ್‌ ಪ್ರವೇಟ್ ಲಿಮಿಟೆಡ್ ಎಂಡಿ ಅನಿಸ್ ಎಂ. ನಾಯ್ಕವಾಡಿ ಇದ್ದರು.

ಮಹಾರಾಜ್ ಟ್ರೋಫಿ ಗೆಲ್ಲುವ ಮೂಲಕ ಗುಲಬರ್ಗಾದ ಹೆಸರು ರಾಜ್ಯ ಸೇರಿದಂತೆ ಎಲ್ಲೆಡೇ ರಾರಾಜಿಸುತ್ತಿದೆ. ಮುಂದಿನ ದಿನಗಳಲ್ಲಿ ಕೆ.ಎಸ್.ಸಿ.ಎ ಹೆಚ್ಚಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಬೇಕು. ಸರಕಾರದ ವತಿಯಿಂದ ಈ ಭಾಗದಲ್ಲಿ ಕ್ರೀಡಾ ಗ್ರಾಮ ಸ್ಥಾಪಿಸಿ ಈ ಭಾಗದ ಯುವಕರನ್ನು ಪ್ರೋತ್ಸಾಹ ನೀಡಲಾಗುವುದು ಎಂದು ದತ್ತಾತ್ರೇಯ ಪಾಟೀಲ್ ರೇವೂರ್ ಕೆಕೆಆರ್ಡಿಬಿ ಅಧ್ಯಕ್ಷ ಭರವಸೆ ನೀಡಿದರು.

ಕಲಬುರಗಿ ನಗರಕ್ಕೆ ಆಗಮಿಸಿದ ಗುಲಬರ್ಗಾ ಮೈಸ್ಟಿಕ್ಸ್ ತಂಡದ ಆಟಗಾರರಾದ ನಾಯಕ ಮನೀಶ್ ಪಾಂಡ್ಯ, ಸಿ.ಅ. ಕಾರ್ತಿಕ್, ಮನೋಜ್ ಭಾಂಡಗೆ, ಶ್ರೀಜಿತ್ ಕೆ.ಎಲ್, ವಿ. ಕವೇರಪ್ಪ, ಅಭಿಲಾಷ್ ಶೆಟ್ಟಿ, ಕುಶಾಲ್ ವ್ಹಾಧ್ವನಿ, ಪ್ರಣವ್ ಭಾಟಿಯಾ, ಮೋಹಿತ್ ಬಿ. ಎ., ರೋಹನ್ ಪಾಟೀಲ್, ಧನಿಶ್ ಗೌಡ, ಮೊಹಮ್ಮದ ಅಕೀಬ್ ಜಾವೆದ್, ಶ್ರೀಶ ಆಚಾರ್, ಜೇಸ್ವಂತ ಆಚಾರ್ಯ, ಅರೋನ್ ಕ್ರಿಷ್ಟಿ ಅವರನ್ನು ಬಂದೇ ನವಾಜ್ ದರ್ಗಾದಿಂದ ಕೆಬಿಎನ್ ಕ್ರಿಕೆಟ್ ಮೈದಾನದವರೆಗೂ ತೆರೆದ ಜೀಪಿನಲ್ಲಿ ಬೃಹತ್ ಮೆರವಣಿಗೆ ಮೂಲಕ ಕರೆ ತರಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here