ಶರಣರ ಲೀಲೆಗಳಲ್ಲಿ ಅತೀಂದ್ರಿಯ ಶಕ್ತಿ ಇದೆ

0
64

ಶರಣಬಸವೇಶ್ವರರ ಲೀಲೆಗಳು ವೈಜ್ಞಾನಿಕವಾಗಿ ವಾಚ್ಯವೆನಿಸದಿದ್ದರೂ ಶರಣರ ಅತೀಂದ್ರಿಯ ಶಕ್ತಿಯಿಂದ ಲೀಲೆಗಳು ಸಹಜವಾಗಿ ಜರುಗುತ್ತಿವೆ ಎಂಬುದನ್ನು ಜನಪದರು ತಾವು ಸೂಚ್ಯವಾಗಿ ನಂಬಿದ್ದನ್ನು, ಕಂಡುಕೊಂಡಿದ್ದನ್ನು ಅವರು ಹಾಡುಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಸಹ ಪ್ರಾಧ್ಯಾಪಕರಾದ ಪ್ರೊ. ವೆಂಕಣ್ಣ ಡೊಣ್ಣೆಗೌಡರು ಅವರು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಅರಳಗುಂಡಗಿಯಿಂದ ಹಿಪ್ಪರಗಿಯ ಪತ್ರಿವನಕ್ಕೆ ಬಂದ ಶರಣರು ಅಲ್ಲಿಯೇ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದಾಗ ಪತ್ತರಿ ವನವೇ ಸಂತೋಷಗೊಂಡಿತು. ಶರಣರ ಪೂಜೆ ನಡೆದಾಗ ಆ ಗಿಡಗಳು ತಮ್ಮ ಪತ್ತರಿ ದಳಗಳನ್ನು ಉದುರಿಸುತ್ತವೆ. ಶರಣರ ಶಿರದ ಮೇಲೆ, ಭುಜದ ಮೇಲೆ ಕೊರಳಿನ ತನಕ ಪತ್ತರಿ ಬಿಳುತ್ತವೆ.

ಶರಣರು ಹಿಪ್ಪರಗಿಯಿಂದ ಜಗಲಗುಡ್ಡಕ್ಕೆ ಬಂದು ಅಲ್ಲಿ ಇಷ್ಟ ಲಿಂಗಪೂಜೆ ನಡೆಸುತ್ತಾರೆ. ಆ ಇಷ್ಟಲಿಂಗ ಶರಣರೊಂದಿಗೆ ಮಾತಾಡುತ್ತದೆ. ನಾಳೆ ನಸುಕಿನಲ್ಲಿ ಬಿಳಿ ಕುದುರೆಯೊಂದು ಬರುತ್ತದೆ. ಅದರ ಮೇಲೆ ಕುಳಿತು ನೀನು ಹೊರಡು. ಮೂರನೇ ಬಾರಿಗೆ ಎಲ್ಲಿ ನೀರು ಪುಟಿಯುತ್ತದೆಯೋ ಆ ಸ್ಥಳ ನಿನ್ನ ಖಾಯಂ ಸ್ಥಳ ಎಂದು ಲಿಂಗವಾಣಿಯಂತೆ ಶರಣರು ಕಲಬುರಗಿಯಲ್ಲಿಯೇ ಉಳಿಯುತ್ತಾರೆ.

ರಾಮಜೀದಾದನೊಂದಿಗೆ ಹೊರಟ ಶರಣರು ಸವಳಹಳ್ಳ ಎನ್ನುವ ಊರಿಗೆ ಬರುತ್ತಾರೆ. ಅಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ಒಂದೆರಡು ಕಡೆ ನೀರು ಇದ್ದರೂ ಸವಳು ನೀರು. ಅದನ್ನು ಕುಡಿದ ಜನರು ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದರು. ಶರಣರು ಬಂದ ತಕ್ಷಣ ಜನರು ಅವರ ದರ್ಶನಗೈದು ’ ನೀರು ಕೊಟ್ಟು ಶಿವನಾಗು’ ಎಂದು ಬೇಡಿಕೊಂಡರಂತೆ ಆಗ ತಕ್ಷಣವೇ ಶರಣರು ತಾವು ನಿಂತ ಸ್ಥಳದ ಎದುರಗಡೆ ಕೈ ಮಾಡಿ ಅಲ್ಲಿ ಕೆದರಲು ತಿಳಿಸಿದಾಗ ಟೆಂಗಿನ ನೀರಿನಂತಿರುವ ನೀರು ಹರಿಯಲು ಪ್ರಾರಂಭಿಸುತ್ತದೆ. ನಂತರ ಅಲ್ಲಿಯ ಜನ ಮುಂದೆ ಶಿವರಾತ್ರಿ ನೀವು ಇಲ್ಲಿಯೇ ಉಳಿಯಬೇಕೆಂದು ವಿನಂತಿಸಿಕೊಂಡಾಗ ಶರಣರು ಅಲ್ಲಿಯೇ ಉಳಿಯುತ್ತಾರೆ. ಪೂಜೆಗೆ ಕುಳಿತ ಶರಣರ ಎದುರು ಜಂಗಮನೋರ್ವ ಕೈಯಲ್ಲೊಂದು ಬಟ್ಟಲು ಹಿಡಿದುಕೊಂಡು ನಿಂತಿರುತ್ತಾನೆ. ಆ ಜಂಗಮ ರೂಪದಲ್ಲಿ ಶಿವನು ಶರಣರಿಗೆ ಬಟ್ಟಲು ಕೊಟ್ಟು ಇದು ಭಕ್ತರಿಗೆ, ಧರ್ಮಕ್ಕಾಗಿ ಈ ಬಟ್ಟಲು ಕೊಟ್ಟಿದ್ದೇನೆ ಎಂದು ಹೇಳುತ್ತಾನೆ. ಇಂದಿಗೂ ಆ ಪರುಷಬಟ್ಟಲು ಶರಣಬಸವೇಶ್ವರ ಮಹಾಮನೆಯಲ್ಲಿ ಕಾಣಬಹುದು. ರಥೋತ್ಸವದ ವೇಳೆ ಪೂಜ್ಯ ಡಾ.ಅಪ್ಪಾಜೀಯವರಿಗೆ ಅದರ ದರ್ಶನ ಮಾಡಿಸುತ್ತಾರೆ.

ಪಶು ಪಕ್ಷಿ ಪ್ರಾಣಿಗಳನ್ನು ಪ್ರೀತಿಸುತ್ತಿದ್ದ ಶರಣರು ಒಂದು ಸಲ ಸೊನ್ನ ಗ್ರಾಮದಲ್ಲಿ ಗಿಡದ ಕೆಳಗೆ ಶಿವನಾಮ ಸ್ಮರಣೆ ಮಾಡುತ್ತಾ ಮಲಗಿರುತ್ತಾರೆ. ಬಿಸಿಲು ಅವರ ಮುಖದ ಮೇಲೆ ಬೀಳುತ್ತಿರುತ್ತದೆ. ಅಲ್ಲಿಯೇ ಹುತ್ತದಲ್ಲಿರುವ ಹಾವೊಂದು ಇದನ್ನು ನೋಡಿ ಭರಭರನೆ ಹುತ್ತ ಬಿಟ್ಟು ಶರಣರ ನೆತ್ತಿಯ ಸಮೀಪಕ್ಕೆ ಬಂದು ತನ್ನ ಹೆಡೆ ಬಿಚ್ಚಿ ಶರಣರಿಗೆ ನೆರಳು ಮಾಡುತ್ತದೆ ಹೀಗೆ ಬೇಡರ ಕಣ್ಣಪ್ಪ ಮತ್ತು ಏಕಲವ್ಯ ಅವರಲ್ಲಿದ್ದ ಅಂತಃಶಕ್ತಿ-ಗುರುಭಕ್ತಿಯನ್ನು ಶರಣರ ಶಿವಲೀಲೆಯೊಂದಿಗೆ ತೌಲನಿಕವಾಗಿ ತಿಳಿಸಿದರು.

  ಪ್ರೊ. ವೆಂಕಣ್ಣ ಡೊಣ್ಣೆಗೌಡರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here