ಕಲಬುರಗಿ: ಮಹಿಳೆಯರು ಎಲ್ಲರಂತೆ ಸಮಾನ ಮತ್ತು ಸರ್ವಾಂಗೀಣ ಶಿಕ್ಷಣ ಪಡೆದು ಸಮಾಜದಲ್ಲಿ ಘನತೆಯಿಂದ ಬದುಕಬೇಕು. ಸಮಾಜವನ್ನು ಪರಿವರ್ತಿಸುವ ಶಕ್ತಿ ಮಹಿಳೆಯರಿಗಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮುಳೇಗಾoವ್ ಅವರು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ 2022- 23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಬಿ.ಎಂ.ಬಾಯಿನ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಸರಳ ಜೀವನ ಮತ್ತು ಆದರ್ಶ ಬದುಕು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ವಿದ್ಯಾರ್ಥಿಗಳು ಅಂಕಗಳು ಮತ್ತು ಪ್ರಮಾಣ ಪತ್ರ ಪಡೆಯುವುದಕ್ಕಾಗಿ ಓದಬಾರದು. ವಿಶ್ವ ಜ್ಞಾನವನ್ನು ಪಡೆಯುವುದಕ್ಕಾಗಿ ಶಿಕ್ಷಣ ಪಡೆಯಬೇಕು. ಬಲಿಷ್ಠ ಭಾರತ ಕಟ್ಟಲು ವಿದ್ಯಾರ್ಥಿಗಳು ರಾಷ್ಟ್ರದ ಶಕ್ತಿ ಆಗಬೇಕೆಂದು ಹೇಳಿದರು.
ಎನ್ಎಸ್ಎಸ್ ವಿಭಾಗೀಯ ಅಧಿಕಾರಿಗಳಾದ ಡಾ.ಚಂದ್ರಶೇಖರ್ ದೊಡ್ಡಮನಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಆಧುನಿಕ ಸಮಾಜದಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳು ಕಳೆದುಹೋಗಿವೆ. ಅವುಗಳನ್ನು ಪುನರ್ ಸ್ಥಾಪಿಸಿ ಆದರ್ಶ ಸಮಾಜ ನಿರ್ಮಿಸಬೇಕು. ವಿದ್ಯಾರ್ಥಿಗಳು ಜ್ಞಾನದ ಸಾಗರವಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವನಗೌಡ ಪಾಟೀಲ್ ವಹಿಸಿದ್ದರು. ಅತಿಥಿಗಳಾಗಿ ಬಸವರಾಜ್ ಬಿರಾಜದಾರ್, ಶರಣಗೌಡ ಪಾಟೀಲ್, ಶ್ರೀದೇವಿ ಬಾವಿದೊಡ್ಡಿ ಮುಂತಾದವುರು ಉಪಸ್ಥಿತರಿದ್ದರು. ಉಪನ್ಯಾಸಕರುಗಳಾದ ಪ್ರಮೋದ್ ನಾಗೂರ್, ಗುರುರಾಜ ಕುಲಕರ್ಣಿ, ಇರ್ಫಾನ್, ಭೀಮಯ್ಯ ಉಮೇಶ್, ಹೆಗ್ಗುಂಡಪ್ಪ ಬಿರಾದಾರ್, ರಘುನಂದನ್, ಅಂಬಾದಾಸ್ ಜಾಧವ್, ಆಂಜನೇಯ ಕಂದಿ, ಬಸವರಾಜ್ ಮಠ, ಪ್ರಭಾವತಿ, ಸುವರ್ಣ, ಶಾಂತಾ ಪಾಟೀಲ್, ಸುಜಾತಾ, ಜಯಲಕ್ಷ್ಮೀ, ಜಯಶ್ರೀ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.