ಕಲಬುರಗಿ: ತತ್ವಪದಗಳು ನಮ್ಮ ಅಂತರಂಗವನ್ನು ದರ್ಶಿಸುವ ಮೂಲಕ ಅಸ್ಮಿತೆಯ ಅರಿವನ್ನು ಮೂಡಿಸುತ್ತವೆ. ಸಂಗೀತವು ಜೀವನ ಸಾರ್ಥಕ ಮಾಡಿಕೊಳ್ಳುವ ಸಾಧನಾಮಾರ್ಗ ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಶ್ರೀ ಸದ್ಗುರು ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಶ್ರಯದಲ್ಲಿ ನಗರದ ಗಂಜ್ ಕಾಲೋನಿಯ ಅಂಬಾ ಭವಾನಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ಜರುಗಿದ ತತ್ವಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾತ್ವಿಕ ದೃಷ್ಟಿಯಿಂದಲೇ ಜೀವನದ ರಹಸ್ಯವನ್ನು ಭೇದಿಸಲುತತ್ವಪದ ಹಾಗೂ ಸಂಗೀತ ಪ್ರೇರೇಪಿಸುತ್ತವೆ ಎಂದು ತಿಳಿಸಿದರು.
ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ತತ್ವಪದಗಳ ಹಾಗೂ ತತ್ವಪದಕಾರರ ಬಹು ದೊಡ್ಡ ಪರಂಪರೆಯಿದ್ದು, ತತ್ವಪದಗಳನ್ನು ಅರಿತುಕೊಳ್ಳುವುದೆಂದರೆ ನಮ್ಮನ್ನು ನಾವು ಕಂಡುಕೊಳ್ಳುವ, ನಾವು ಯಾರು ಎಂದು ಹುಡುಕುವ ಹುಡುಕಾಟದ ಪ್ರಕ್ರಿಯೆಯಾಗಿದೆ. ಕೈವಾರ ನಾರಾಯಣಪ್ಪ, ಶಿಶುನಾಳ ಶರೀಫ, ಖೈನೂರು ಕೃಷ್ಣಪ್ಪ, ನಿಜಗುಣ ಶಿವಯೋಗಿ, ಕಡಕೋಳ ಮಡಿವಾಳಪ್ಪ ಇತರರ ತತ್ವಪದಗಳು ಬದುಕಿಗೆ ದಾರಿದೀಪವಾಗಿವೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಬುರಾವ ಕೋಬಾಳ ಮಾತನಾಡಿ, ಕಲೆಗಳಲ್ಲಿ ಶ್ರೇಷ್ಠ ಕಲೆ ಸಂಗೀತ. ಸಂಗೀತದ ಮೂಲಕ ಜೀವನದಲ್ಲಿ ಸ್ಫೂರ್ತಿ ಪಡೆಯಬಹುದು. ಸಂಗೀತಕ್ಕೆ ಜಾತಿ, ಧರ್ಮದ ಸೀಮಿತ ಹಂಗು ಇಲ್ಲ. ತತ್ವ ಹೀನ ಬದುಕಿಗಿಂತ ತತ್ವಬದ್ಧ ಬದುಕು ನಮ್ಮದಾಗಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಶಿವರಾಜ ಕನಕಟ್ಟಾ, ಛಾಯಾ ಚಕ್ಕಿ, ಅಂಬಿಕಾ ಜಗನ್ನಾಥ ಮಾಲಿ ಪಾಟೀಲ, ಮಲ್ಲಿಕಾರ್ಜುನ ಬಾಳಿ ವೇದಿಕೆಯಲ್ಲಿದ್ದರು. ಅಂಬಾಭವಾನಿ ದೇವಸ್ಥಾನದ ಅರ್ಚಕ ಮಲ್ಲಯ್ಯ ಸ್ವಾಮಿ ನೇತೃತ್ವ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಕೆಂಗನಾಳ ನಿರೂಪಿಸಿದರು. ವಿಜಯಲಕ್ಷ್ಮಿ ಕೆಂಗನಾಳ ಸ್ವಾಗತಿಸಿದರು.
ನಂತರ ಬಸವಕುಮಾರ ಎಸ್.ಕೆ., ಶರಣಕುಮಾರ ಕರಿಬಾವಿ, ಜ್ಯೋತಿ ಎಸ್, ಲಕ್ಷ್ಮೀ ಎಂ. ಚಿಂಚೋಳಿ, ಬಸವರಾಜ ಸ್ಥಾವರಮಠ, ಅಣ್ಣಾರಾಯ ಶೆಳ್ಳಗಿ ಇತರರಿಂದ ತತ್ವಪದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.