ಶಹಬಾದ : ವೀರ ಸನ್ಯಾಸಿ ವಿವೇಕಾನಂದರಲ್ಲಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂಥ ಹಾಗೂ ಅವರ ಜೀವನ ಚರಿತ್ರೆಯಲ್ಲಿ ಇಣುಕಿ ನೋಡುವಂಥ ಅಗತ್ಯತೆ ಯುವಕರಿಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಹೇಳಿದರು.
ಅವರು ಗುರುವಾರ ನಗರದ ಮಹಾದೇವಮ್ಮ ಆಸ್ಪಲ್ಲಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಸ್ವಾಮಿ ವಿವೇಕಾನಂದರ ಜಯಂತಿಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶದ ಸಂಸ್ಕøತಿ ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ ವಿವೇಕಾನಂದರು ನಮಗೆಲ್ಲರಿಗೂ ಆದರ್ಶ. ಸಮಾಜಕ್ಕಾಗಿ ಬದುಕುವ, ದೇಶಕ್ಕಾಗಿ ದುಡಿಯುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ದೇಶದ ಚಿತ್ರಣ ಬದಲಿಸಬಹುದು. ಆದರೆ ಇಂದು ನಾವು ಮತ್ತು ನಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕು ಎನ್ನುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಹೇಳಿದರು.
ತರನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಸರಸ್ವತಿ ಮಾತನಾಡಿ, ಇಂದಿನ ಯುವ ಜನಾಂಗ ದೇಶದ ಆಸ್ತಿ. ನಮ್ಮ ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಆಕಾಂಕ್ಷೆಯನ್ನು ಮೂಡಿಸಿಕೊಂಡು ಯುವಜನತೆ ಸಮಾಜಕ್ಕೆ ಶಕ್ತಿಯಾಗಿ ನಿಲ್ಲಬೇಕು. ಅದಕ್ಕಾಗಿ ಶಿಕ್ಷಣದ ಮೂಲಕ ಉತ್ತಮ ವಿಚಾರ, ಚಿಂತನೆ ನಡೆಸುವ ಮೂಲಕ ಭವ್ಯ ಭಾರತವನ್ನು ಕಟ್ಟಲು ಮುಂದಾಗಬೇಕು ಎಂದು ಹೇಳಿದರು.
ಆಸ್ಪಲ್ಲಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶೋಭಾ ಅರಳಿ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವ ಜನಾಂಗದ ಆಶಾಕಿರಣ.ಅವರು ದೇಶವನ್ನು ಕಟ್ಟುವ, ದೇಶದ ಉಜ್ವಲ ಭವಿಷ್ಯವನ್ನು ರೂಪಿಸುವ ಶಕ್ತಿ ಸಾಮಥ್ರ್ಯಗಳು ಯುವ ಜನಾಂಗದಲ್ಲಿ ಅಡಕವಾಗಿವೆ ಎಂದು ಯುವಕರಲ್ಲಿ ಬಲವಾದ ನಂಬಿಕೆಯನ್ನು ಸ್ವಾಮಿ ವಿವೇಕಾನಂದರು ಹೊಂದಿದ್ದರು ಎಂದು ಹೇಳಿದರು.
ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿದರು.ಶಿಕ್ಷಕರಾದ ಚಂದುಲಾಲ ಬಸೂದೆ, ಶಿಲ್ಪಾ ಕೊಲ್ಲೂರ್,ಜ್ಯೋತಿ, ರಮೇಶ ಜೋಗದನಕರ್ ಸೇರಿದಂತೆ ಶಾಲಾಮಕ್ಕಳು ಇದ್ದರು.