ಕಲಬುರಗಿ: ವಿದ್ಯಾರ್ಥಿಗಳು ಜೀವನದಲ್ಲಿ ಕೇವಲ ನೌಕರಿಯ ಹಿಂದೆ ಓಡುವುದಕ್ಕಿಂತ ಸುಖಮಯ ಮತ್ತು ನೆಮ್ಮದಿಯ ಜೀವನಕ್ಕಾಗಿಯೂ ಪ್ರಯತ್ನ ಪಡಬೇಕು ಎಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೊತ್ತಲಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ರಾಮಮಂದಿರ ಹಿಂಬದಿಯಲ್ಲಿರುವ ಹರಳಯ್ಯ ಸಮಜದ ಸಭಾಭವನದಲ್ಲಿ ನಡೆದ ಎಂ.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಹಾಗೂ ನಾನಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಬಹುತೇಕ ಯುವಕರು ನೌಕರಿಯಿಂದ ಓಡುತ್ತಾರೆ. ಅದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿ ಓದುತ್ತಾರೆ. ಅದಕ್ಕಾಗಿ ಅವರ ತಂದೆ ತಾಯಿ ಕೂಡ ಕಷ್ಟ ಪಡುತ್ತಾರೆ. ಆದರೂ ಇವತ್ತಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೌಕರಿ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ದೇಶದಲ್ಲಿ 12 ಲಕ್ಷ ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆ ಬರೆದರೆ ಕೇವಲ 700 ವಿದ್ಯಾರ್ಥಿಗಳು ಪಾಸ್ ಆಗುತ್ತಿದ್ದಾರೆ. ಅಂದರೆ ಸಾವಿರಕ್ಕೆ ಒಬ್ಬ ವಿದ್ಯಾರ್ಥಿ ಐಎಎಸ್ ಪಾಸ್ ಆಗುತ್ತಿದ್ದಾರೆ. ಪಾಸಾಗದೇ ಇದ್ದ ಲಕ್ಷಾಂತರ ಜನ ವಿದ್ಯಾರ್ಥಿಗಳು ಮನೆ ಮತ್ತು ಜಮೀನು, ತಂದೆ ತಾಯಿಗಳನ್ನು ಹಾಗೂ ಸಂಬಂಧಗಳನ್ನು ಕಳೆದುಕೊಂಡು ದೂರವಾಗುತ್ತಿದ್ದಾರೆ ಎಂದು ಹಳಹಳಿಸಿದರು.
ಆದ್ದರಿಂದ ಉನ್ನತ ಶಿಕ್ಷಣವನ್ನು ಪಡೆದುಕೊಂಡು ನೌಕರಿಗಾಗಿ ಅಲೆದಾಡುವುದಕ್ಕಿಂತ ಸ್ವಂತ ಉದ್ಯೋಗ ಹಾಗೂ ಕೃಷಿಯನ್ನು ಹೆಚ್ಚಿಸುವುದು ನೆಮ್ಮದಿಯ ಜೀವನವನ್ನು ಮಾಡಿ ಎಂದು ಕಿರು ಮಾತ್ರ ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ್ ಹೂಗಾರ್ ಮಾತನಾಡಿ ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯಲ್ಲಿ ಸ್ಥಾಪಿತವಾದರೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಓದಲು ಆಸಕ್ತಿ ತೋರುವುದಿಲ್ಲ ಎಂದು ವಿಷಾಧಿಸಿದರು.
ಬಹುತೇಕ ಇಂಗ್ಲೀಷ್ ಭಾಷೆಯ ಸಮಸ್ಯೆಯಿಂದಾಗಿ ನಮ್ಮ ಭಾಗದ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಅಭ್ಯಾಸಸಲು ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ದೇಶದಲ್ಲಿ ನಡೆಯುತ್ತಿರುವ ವರ್ತಮಾನದ ಸಮಸ್ಯೆಗಳನ್ನು ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸುವುದು ಕಲಿಯಬೇಕು ಎಂದು ಹೇಳಿದರು.
ಪತ್ರಕರ್ತ ಸೂರ್ಯಕಾಂತ್ ಜಮಾದಾರ್ ಮಾತನಾಡಿ, ದೇಶದಲ್ಲಿ ಇಂದು ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿದೆ. ಆದ್ದರಿಂದ ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾದ ಅಗತ್ಯವಿದೆ. ಕಾಯಾರ್ಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿವೆ ಎನ್ನುವುದು ಇತ್ತೀಚಿನ ಬೆಳವಣಿಗೆಯಿಂದ ಜಗಜ್ಜಾಹೀರಾಗಿದೆ ಎಂದು ಹೇಳಿದರು.
ಇಂದಿನ ದಿನಗಳು ತುಂಬಾ ಸ್ಪರ್ಧಾತ್ಮಕವಾಗಿವೆ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧೆಯನ್ನು ಎದುರಿಸಲು ಉನ್ನತವಾದ ತಯಾರಿ ಮಾಡಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣವನ್ನು ತುಂಬಾ ಪ್ರಾಮಾಣಿಕತೆಯಿಂದ ಮತ್ತು ಪ್ರಯೋಗಾತ್ಮಕ ನೆಲೆಯಲ್ಲಿ ಪಡೆದುಕೊಳ್ಳಲು ಎಂದರು.
ಕಾಲೇಜಿನ ಹಿರಿಯ ಪ್ರಾಧ್ಯಾಪಕ ವಿ ಎಂದು ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆಯಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಚಿಂತಕ ಚಂದ್ರಕಾಂತ ಸಿರಗಾಪುರ, ಜಿಲ್ಲಾ ಪಂಚಾಯತಿಯ ಮಾಜಿ ಸ್ಥಾಯಿ ಸಮಿತಿ ಸದಸ್ಯ ದಿಲೀಪ ಆರ್ ಪಾಟೀಲ್, ಎಂ.ಎನ್. ದೇಸಾಯಿ ಪದವಿ ಕಾಲೇಜಿನ ಗೌರವಾಧ್ಯಕ್ಷ ಚಂದ್ರಕಾಂತ್ ಎನ್. ದೇಸಾಯಿ, ಶಿಕ್ಷಣ ಇಲಾಖೆಯ ಭೀಮಶಂಕರ್ ಇಂಗಳೆ, ಕಾಲೇಜಿನ ಅಧ್ಯಕ್ಷ ಸಂದೀಪ ಎಸ್ ದೇಸಾಯಿ, ಕಾರ್ಯದರ್ಶಿ ಜಗನ್ನಾಥ ನಾಗೂರ್ ಸೇರಿದಂತೆ ಇತರರು ಹಾಜರಿದ್ದರು.
ಕಾಲೇಜಿನ ಉಪನ್ಯಾಸಕ ನಿಂಗಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಜೋಶಿ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಸಮಾರಂಭ ನಡೆಯಿತು.