ಆಳಂದ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮೂಲದ ಕುರಿತು ಅರಿವು ಹೊಂದಿರಬೇಕು. ಸವಿತಾ ಮಹರ್ಷಿಗಳು ಸಾಮವೇದ ರಚನೆ ಮಾಡಿದ್ದರು. ಇವರ ಪುತ್ರಿ ಗಾಯತ್ರಿ ಮಂತ್ರ ರಚಿಸಿದ್ದರು ಎನ್ನುವ ಐತಿಹ್ಯವಿದೆ ಎಂದು ಆಳಂದ ಶಾಸಕ ಸುಭಾಷ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಶನಿವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸವಿತಾ ಸಮಾಜದವರು ಇಂದು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದು, ಸಮಾಜ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿದೆ. ಆದರೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸರಕಾರ ಕಲ್ಪಿಸಿರುವ ಸವಲತ್ತುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ. ಒಂದು ಕಾಲದಲ್ಲಿ ತೀವ್ರ ಶೋಷಣೆಗೆ ಒಳಗಾಗಿದ್ದ ಸಮಾಜ ಪ್ರತಿ ಹಂತದಲ್ಲಿಯೂ ಪ್ರಗತಿ ಕಾಣಬೇಕಿದೆ. ಸಂಘಟನೆಯ ಮೂಲಕ ಹೋರಾಟಕ್ಕೆ ನಾಂದಿ ಹಾಡುವ ಅಗತ್ಯವಿದೆ ಎಂದರು.
ಕೇವಲ ಜಯಂತಿ ಆಚರಣೆಯಿಂದ ಸಮಾಜದ ಉದ್ದಾರ ಸಾಧ್ಯವಾಗದು. ಮಹರ್ಷಿಗಳ ವಿಚಾರಧಾರೆಗಳನ್ನು ಪುಸ್ತಕರೂಪದಲ್ಲಿ ಹೊರತರುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಸವಿತಾ ಸಮಾಜದ ಅಧ್ಯಕ್ಷ ಶರಣು, ಶಿವಾನಂದ ಭಕರೆ ಹಾಗೂ ಸಮಾಜದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.