ಸಂಜೀವಿನಿ ನೌಕರರ, ಫಲಾನುಭವಿಗಳ ಜಿಲ್ಲಾ ಸಮಾವೇಶ

0
195

ಕಲಬುರಗಿ: ಬಿಟ್ಟಿ ಚಾಕರಿ ತೊಲಗಿಸಿ ಸಮಾನ ವೇತನ ಒದಗಿಸಿ ಘೋಷಣೆಯೊಂದಿಗೆ ಇಂದು ಸಂಜೀವಿನಿ ನೌಕರರ ಮತ್ತು ಫಲಾನುಭವಿಗಳ ಸಂಘಟನೆಯ ಜಿಲ್ಲಾ ಸಮಾವೇಶವನ್ನು ನಗರದ ಕನ್ನಡ ಭವನದಲ್ಲಿ ನಡೆಯಿತು.

ಸಮಾವೇಶವನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕಾ.ಶಾಂತಾ ಘಂಟಿ ಇವರು ಉದ್ಘಾಟಿಸಿ ಮಾತನಾಡುತ್ತ “ಸರಕಾರವು ಅತ್ಯಂತ ಕಡಿಮೆ ಗೌರವ ಧನದಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳುತ್ತಿದೆ. ಎಲ್ಲ ಸ್ಕೀಮ್ ನೌಕರರು ಬಹಳ ಕಷ್ಟದಲ್ಲಿದ್ದಾರೆ. ಬೆಲೆಗಳು ಮುಗಿಲಿಗೇರುತ್ತಿವೆ. ಮುಖ್ಯ ಪುಸ್ತಕ ಬರಹಗಾರರು, ಎಲ್ಸಿಆರ್ಪಿ, ಮತ್ತು ಸಖಿಯರು ಗ್ರಾಮಗಳನ್ನು ಸುತ್ತಿ ಕೆಲಸ ಮಾಡುತ್ತಿದ್ದಾರೆ. ಕೊಡಬೇಕಾದ ಗೌರವ ಧನವನ್ನೇ ಆರು ಎಂಟು ತಿಂಗಳಿಂದ ಬಾಕಿ ಇದೆ. ಆದ್ದರಿಂದ ಸಂಜೀವಿನಿ ನೌಕರರು ಸಂಘಟಿತರಾಗಿ ಹೋರಾಟ ಮಾಡಬೇಕು” ಎಂದು ಕರೆ ಕೊಟ್ಟರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾದ್ಯಕ್ಷರಾದ ಕೆ ನೀಲಾ ಇವರು ಮಾತನಾಡುತ್ತ, ‘ಮಹಿಳೆಗೆ ಇನ್ನೊಂದು ಹೆಸರು ದುಡಿಮೆ. ಮನೆಯಲ್ಲಿ ಪೂರ್ತಿ ಬಿಟ್ಟಿ ದುಡಿಮೆ. ಸರಕಾರದಲ್ಲಿ ಮತ್ತು ಸಮಾಜದಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಮೆ. ಇದರ ಹೆಸರು ಗೌರವ ಧನ ಇರಬಹುದು. ಆದರೆ ಕನಿಷ್ಠ ಕೂಲಿಗಿಂತಲೂ ಕಡೆ ಅಂತಲೇ ಅರ್ಥ. ಸರಕಾರದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಯ ಕಾರಣದಿಂದ ದೇಶದಲ್ಲಿ ನಿರುದ್ಯೋಗ ಮತ್ತು ಅಭದ್ರ ಕೆಲಸ, ಗುತ್ತೆದಾರಿಕೆ ಹೆಚ್ಚುತ್ತಿವೆ. ಆದ್ದರಿಂದ ದುಡಿಯುವ ವರ್ಗದ ಜನತೆಯು ಐಕ್ಯತೆಯಿಂದ ಬಲಿಷ್ಠವಾದ ಸಂಘಟನೆ ಕಟ್ಟಿಕೊಳ್ಳಬೇಕಿದೆ. ದೇಶದ ಸೌಹಾರ್ದತೆ ಮತ್ತು ಆರ್ಥಿಕ ಸುಭದ್ರತೆಗಾಗಿ ಶ್ರಮಿಕ ಜನತೆಯು ಹೋರಾಡಬೇಕಿದೆ.

ಮಹಿಳೆಯಂತೂ ಎಲ್ಲ ತೆರನ ಘನತೆಯ ಬದುಕಿಗಾಗಿ ಆರ್ಥಿಕ ಸಮಾನತೆಗಾಗಿ ಹೋರಾಡಲೇಬೇಕಿದೆ. ಸಂಜೀವುನ ನೌಕರರಿಗೆ ಆದೇಶ ಪತ್ರ ಕೊಡಬೇಕು. ಗೌರವ ಧನ ಹೆಚ್ಚಳ ಮಾಡಬೇಕು. ಕೆಲಸದ ಭದ್ರತೆ ಒದಗಿಸಬೇಕು. ಗಣತಿ ಕಾರ್ಯದ ವೇತನ ಬಿಡುಗಡೆ ಮಾಡಬೇಕು. ಮುಖ್ಯ ಪುಸ್ತಕ ಬರಹಗಾರರಿಗೆ ರೂ.15000, ಸಂಪನ್ಮೂಲ ಸಹಾಯಕರಿಗೆ ರೂ.1300, ವಿವಿಧ ಸಖಿಯರಿಗೆ ರೂ.8000 ಗೌರವ ಧನ ಹೆಚ್ಚಳ ಮಾಡಬೇಕು. ಪ್ರತಿ ಗ್ರಾಮ ಪಂಚಾಯತನಲ್ಲಿ ಗಣಕಯಂತ್ರ, ಪೀಠೋಪಕರಣಸಹಿತ ಕಚೇರಿ ವ್ಯವಸ್ಥೆ ಮಾಡಬೇಕು. ಮತ್ತು ಇನ್ನಿತರ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಹೇಳಿದರು.

ಸಮಾವೇಶದಲ್ಲಿ ನಂದಾದೇವಿ ಮಂಗೊಂಡಿ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದಲ್ಲಿ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಅಧ್ಯಕ್ಷರಾಗಿ ನಂದಾದೇವಿ ಮಂಗೊಂಡಿ, ಗೌರವಾದ್ಯಕ್ಷರಾಗಿ ಶಾಂತಾ ಘಂಟಿ, ಕಾರ್ಯದರ್ಶಿಯಾಗಿ ಸರಸ್ವತಿ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಕಲಾ, ಖಜಾಂಚಿಯಾಗಿ ಇರ್ಫಾನಾ, ಸಹ ಕಾರ್ಯದರ್ಶಿಯಾಗಿ ಯಶೋಧಾ, ಅನ್ನಪೂರ್ಣಾ ಮಾಶಾಳ, ಉಪಾದ್ಯಕ್ಷರಾಗಿ ಕವಿತಾ ನಾಲವಾರ, ಕಲ್ಪನಾ ಕಾಳಗಿ ಇವರೊಂದಿಗೆ 19 ಜನ ಜಿಲ್ಲಾ ಸಮಿತಿ ಸದಸ್ಯರನ್ನು ಸಮ್ಮೇಳನವು ಆಯ್ಕೆ ಮಾಡಿತು.

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ: ನಾಳೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಹೋರಾಟಕ್ಕೆ ಜಿಲ್ಲೆಯಿಂದ ಇಂದು ಮಹಿಳೆಯರು ಹೊರಡುವುದು. ಈ ಕೆಳಕಂಡ ಹಕ್ಕೊತ್ತಾಯಗಳಿಗಾಗಿ ಐಕ್ಯತೆಯಿಂದ ಹೋರಾಡುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here