ಬೀದರ: ಕಾರಂಜಾ ನೀರಾವರಿ ಯೋಜನೆಗೆ ತಮ್ಮ ತಾಯಿ ಸಮಾನ ಭೂಮಿ ನೀಡಿ,ಮನೆ ಮಠ ಕಳೆದುಕೊಂಡ ರೈತ ಸಂತ್ರಸ್ತರು ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನ್ನಾಡಿದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿಯವರು ರೈತ ಸಂತ್ರಸ್ತರು ದುಡುಕಿ ತಕ್ಷಣ ಯಾವುದೇ ರೀತಿಯ ಉಗ್ರ ಹೋರಾಟಗಳು ಹಮ್ಮಿಕೊಳ್ಳದೆ ಸಧ್ಯ ಕಾದು ನೋಡುವ ತಂತ್ರ ಅನುಸರಿಸಲು ಕಾರಂಜಾ ಸಂತ್ರಸ್ತರಿಗೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರು ಶುಕ್ರವಾರ ಕಾರಂಜಾ ಸಂತ್ರಸ್ತರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೈತ ಸಂತ್ರಸ್ತರು ತಮ್ಮ ನ್ಯಾಯಯುತವಾದ ಬೇಡಿಕೆಗೆ ಆಗ್ರಹಿಸಿ ಉಗ್ರ ಹೋರಾಟಗಳು ಹಮ್ಮಿಕೊಳ್ಳುವ ಬಗ್ಗೆ ವಿಸ್ತೃತವಾಗಿ ತಮ್ಮ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.ಬಹುತೇಕ ಸಂತ್ರಸ್ತರ ಗ್ರಾಮಗಳ ಮುಖಂಡರು ಮಾತನ್ನಾಡಿ ನೂತನ ಸರ್ಕಾರ ರಚನೆಯಾದ ನಂತರ ಬೀದರ ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ಸಿಕ್ಕಮೇಲೆ ನಮಗೆ ಬಹಳ ಖುಷಿಯಾಗಿತ್ತು ಅದರಂತೆ ನೂತನ ಸಚಿವರಾದ ಈಶ್ವರ ಖಂಡ್ರೆ ಮತ್ತು ರಹೀಂ ಖಾನ್ ರವರು ಸಚಿವರಾದ ತಕ್ಷಣ ಬೀದರ ಜಿಲ್ಲೆಯ ಮೊದಲನೇ ಭೇಟಿ ಮಾಡಿದ ಸಂದರ್ಭದಲ್ಲಿ ನಮ್ಮ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ಮಾಡಿ ನಮ್ಮ ಬೇಡಿಕೆಗೆ ಸ್ಪಂದಿಸಿದರು.
ಈ ಆಗು ಹೋಗುಗಳು ನೋಡಿ ಈಗ ನಮ್ಮ ಬೇಡಿಕೆ ಈಡೇರುವವದೆಂಬ ಬಲವಾದ ನಿರೀಕ್ಷೆ ಇಟ್ಟುಕೊಂಡಿದ್ದೇವು ಆದರೆ ಪ್ರಸ್ತುತ ರಾಜ್ಯದ ಬಜಟ್ ನಲ್ಲಿ ನಮ್ಮ ಬೇಡಿಕೆ ಬಗ್ಗೆ ಮತ್ತು ಬೀದರ ಜಿಲ್ಲೆಯ ರಚನಾತ್ಮಕ ಪ್ರಗತಿಯ ಬಗ್ಗೆ ಯಾವ ಅಂಶಗಳು ಕಂಡುಬರದೆ ಇರುವುದು ನಮಗೆ ನೋವು ತಂದಿದೆ.ಇಂತಹ ಸ್ಥಿತಿಯಲ್ಲಿ ನಾವು ಇದೆ ಮಾದರಿಯ ಹೋರಾಟ ಮುಂದುವರಿಸದೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಉಗ್ರ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಬಹಳಷ್ಟು ಮುಖಂಡರು ಹೇಳಿದರೆ ,ಕೆಲವು ಮುಖಂಡರು ಜಿಲ್ಲೆಯಿಂದ ಪ್ರಭಾವಿ ಸಚಿವರು ಸರ್ಕಾರದಲ್ಲಿ ಇರುವುದರಿಂದ ತಮ್ಮ ಬೇಡಿಕೆಗೆ ಬರುವ ದಿನಗಳಲ್ಲಿ ಸ್ಪಂದನೆ ಸಿಗುವ ಬಗ್ಗೆ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಮಾತನ್ನಾಡಿ ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರ ಮಾರ್ಗ ದರ್ಶನದಂತೆ ಮುಂದಿನ ರೂಪುರೇಷೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಂತ್ರಸ್ತರಲ್ಲಿ ಮನವರಿಕೆ ಮಾಡಿದರು. ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿಯವರು ರೈತ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿ ಒಂದು ವರ್ಷಕ್ಕೂ ಮೇಲ್ಪಟ್ಟ ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಇದೆ, ಗಾಂಧಿ ಅಂಬೇಡ್ಕರ್ ಮಾರ್ಗದ ಈ ಹೋರಾಟಕ್ಕೆ ಗಂಭೀರವಾಗಿ ಪರಿಗಣಿಸುವದು ಸರ್ಕಾರದ ಬದ್ಧತೆಯಾಗಿದೆ.
ನೂತನ ಸರ್ಕಾರ ಕಾರಂಜಾ ಸಂತ್ರಸ್ತರ ಬೇಡಿಕೆಯ ಬಗ್ಗೆ ಯಾವ ನಿರ್ಣಯ ತೆಗೆದುಕೊಳ್ಳುತದೆ ಎಂಬುವುದರ ಬಗ್ಗೆ ಕಾದು ನೋಡವದು ಅವಶ್ಯವಾಗಿದೆ ಎಂದ ಅವರು ಕಾಂಗ್ರೆಸ್ ಪಕ್ಷ ಸೇರಿದಂತೆ ಬಿಜೆಪಿ ಪಕ್ಷ ಕಳೆದ ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸುವ ಬಗ್ಗೆ ಅಧಿಕೃತ ತಮ್ಮ ಪ್ರಣಾಳಿಕೆಯಲ್ಲಿ ಘೋಷಣಿ ಮಾಡಿರುವುದರಿಂದ ಈ ಬಗ್ಗೆ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಬದ್ದತೆ ಪ್ರದರ್ಶನ ಮಾಡಬೇಕೆಂದು ಸರ್ಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಬೀದರ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಗ್ರಹಿಸಿದರು.
ಮುಖಂಡರಾದ ರಾಜಕುಮಾರ ಕೊಸಮ್, ನಾಗಶೆಟ್ಟಿ ಹಚ್ಚಿ, ರಾಜಕುಮಾರ ರಂಜೋಳ, ಭೀಮರೆಡ್ಡಿ ಜೌರಾದ ಎಸ್,ಮಾದಪ್ಪ ಸಂಗೋಳಗಿ, ಬಸವರಾಜ ಹಿಂದೆ, ಮಹೇಶ್ ಕಮಲಾಪುರ,ಗಂಗಾರೆಡ್ಡಿ ಔರಾದ ಎಸ್, ಕಲ್ಯಾಣರಾವ ಚನ್ನಶೆಟ್ಟಿ ಸಂತ್ರಸ್ತರರನ್ನು ಉದ್ದೇಶಿಸಿ ಮಾತನಾಡಿ ದಸ್ತಿಯವರೊಂದಿಗೆ ತಮ್ಮವಿಚಾರಗಳು ಹಂಚಿಕೊಂಡರು.ಈ ಸಂದರ್ಭದಲ್ಲಿ ಅಯಾ ಗ್ರಾಮದ ಸಂತ್ರಸ್ತರ ಪ್ರಮುಖರನೇಕರು ಉಪಸ್ಥಿತರಿದ್ದರು.