ವಾಡಿ: ಔದ್ಯೋಗಿಕ ಕ್ಷೇತ್ರಗಳು ಇಂದು ಮಾನವ ಶ್ರಮದಿಂದ ವಿಮುಕ್ತಿ ಹೊಂದುತ್ತಿವೆ. ಪದವಿಗಳು ಪಟ್ಟಕ್ಕೇರಿದರೂ ನಿರುದ್ಯೋಗ ಭೂತ ಬೆನ್ನಟ್ಟುತ್ತಿದೆ. ಜೀವನ ಪ್ರಗತಿಗಾಗಿ ಶೈಕ್ಷಣಿಕ ಜ್ಞಾನ ಸಂಪಾದನೆಯ ಜತೆಗೆ ಕೌಶಲ್ಯ ಪ್ರತಿಭೆ ಹೊಂದುವುದು ಇಂದಿನ ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕದ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಹೇಳಿದರು.
ಕಸಾಪ ವಲಯ ಘಟಕದ ವತಿಯಿಂದ ಪಟ್ಟಣದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ “ಪರಿಸರ ನಾಶದಿಂದಾಗುವ ದುಷ್ಪರಿಣಾಮ ಹಾಗೂ ಪರಿಹಾರ” ವಿಷಯದ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಜೀವಿಗಳು ಉಸಿರಾಡಲು ಗಾಳಿ, ನೀರು, ಆಹಾರ ಬೇಕೇಬೇಕು. ಇದೆಲ್ಲವೂ ಸಿಗಬೇಕು ಎಂದರೆ ಪರಿಸರ ಉಳಿಯಬೇಕು. ಆಹಾರ ಉತ್ಪಾದನೆ ಹೆಚ್ಚಾಗಬೇಕು. ಕೃಷಿಗೆ ಪ್ರೋತ್ಸಾಹ ಸಿಗಬೇಕು. ಕಾರ್ಖಾನೆಗಳು ಕಟ್ಟಿದಷ್ಟು ಕೃಷಿ ಭೂಮಿಗಳು ಕಣ್ಮರೆಯಾಗುತ್ತಿವೆ. ಆಹಾರ ಬಿಕ್ಕಟ್ಟು ಸೃಷ್ಠಿಯಾಗುವ ಮುಂಚೆ ಪರಿಸರ ಸಂರಕ್ಷಣೆಯಾಗಬೇಕು. ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡದ ಹೊರತು ಭವಿಷ್ಯವಿಲ್ಲ. ಪರಿಣಾಮ ಕಸಾಪದಿಂದ ಪರಿಸರ ಜಾಗೃತಿ ಬರಹಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಹೊಸಮನಿ ಮಾತನಾಡಿ, ಪ್ರತಿಭೆ ಎಂಬುದು ಪ್ರತಿ ವಿದ್ಯಾರ್ಥಿಯಲ್ಲೂ ಕಾಣಬಹುದಾಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಮನಸ್ಸುಗಳ ಕೊರತೆಯಿದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವು ಫಲಿತಾಂಶ ಬರುವುದು ಸಹಜ. ಸೋಲಿಗೆ ಎದೆಗುಂದದೆ ಮರಳಿ ಪ್ರಯತ್ನ ಮಾಡಬೇಕು. ಆಗ ಗೆಲುವು ನಮ್ಮ ವಶವಾಗುತ್ತದೆ. ಈ ದಿಶೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ನಿರಂತರವಾಗಿರಲಿ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಚಂದ್ರು ಕರಣಿಕ, ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಯುವ ಬರಹಗಾರ ಮಡಿವಾಳಪ್ಪ ಹೇರೂರ, ಕಸಾಪ ಬಳಗದ ಸಂತೋಷ ಕೋಮಟೆ, ದಯಾನಂದ ಖಜೂರಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.
ವಾಡಿ, ಇಂಗಳಗಿ, ಲಾಡ್ಲಾಪುರ, ಕೊಂಚೂರ ಹಾಗೂ ವಿವಿಧ ವಸತಿ ಶಾಲೆಗಳು ಸೇರಿದಂತೆ ಒಟ್ಟು 23 ಪ್ರೌಢ ಶಾಲೆಗಳ 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಬಂಧ ಬರೆದರು. ಕಸಾಪ ಖಜಾಂಚಿ ರವಿಕುಮಾರ ಕೋಳಕೂರ ನಿರೂಪಿಸಿ, ವಂದಿಸಿದರು.