ಕಲಬುರಗಿ: ಜಿಲ್ಲಾ ಕ್ರೆಡಾಯಿನಿಯೋಗವು ಬೆಂಗಳೂರಿನಲ್ಲಿ ನಾನಾ ಸಚಿವರನ್ನು ಭೇಟಿ ಮಾಡಿ ನಗರ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ, ನಗರದ ಅಭಿವೃದ್ಧಿಗೆ ಬೇಕಾದ ಅಗತ್ಯಗಳ ಕುರಿತು ಮನವಿ ಸಲ್ಲಿಸಿತು.
ಎಮ್ಎಲ್ಸಿ ಚಂದ್ರಶೇಖರ ಪಾಟೀಲ್ ಅವರು ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ, ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಎಮ್ಎಲ್ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ಶಶೀಲ್ ನಮೋಶಿ ಅವರಿಗೆ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರಿಗೆ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು.
ನಮ್ಮ ನಗರವು ಅಭಿವೃದ್ಧಿ ಹೊಂದಬೇಕಾಗಿದೆ. ಮುಖ್ಯವಾಗಿ ವಲಯ ನಿಯಮಗಳು ಬದಲಾವಣೆ ಮಾಡಬೇಕಾಗಿದೆ. ಇದರ ಜತೆಗೆ ನಗರದಲ್ಲಿ 11.5 ಮೀ. ಇರುವ ನಿಯಮಗಳನ್ನು 15 ಮೀ ವರೆಗೆ ವಿಸ್ತರಣೆ ಮಾಡಬೇಕಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಇರುವಂತೆ ನಿಯಮ ರೂಪಿಸಬೇಕು. ನಗರದಲ್ಲಿ ಅನಧಿಕೃತ ಲೇಔಟ್ಗಳು ತಲೆ ಎತ್ತಿವೆ, ಅವುಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕ್ರೆಡಾಯಿ ಅಧ್ಯಕ್ಷ ಉದಯ ಶೆಟ್ಟಿ, ಎಂಡಿ ರಫೀಯೊದ್ದೀನ್, ಅಬ್ದುಲ್ ನಜೀಮ್, ಸಂಜೋಗ್ ರಾಠಿ, ಶಫೀಕ್ ಅಹ್ಮದ್, ಚಂದ್ರಶೇಖರ ನಾಯ್ಡು ಇತರರಿದ್ದರು.