ಕಲಬುರಗಿ: ವ್ಯಸನಮುಕ್ತ ಸಮಾಜ ನಿರ್ಮಾಣದ ಹರಿಕಾರರು ಎಂದೇ ಕರೆಸಿಕೊಳ್ಳುತ್ತಿದ್ದ ಇಳಕಲ್ ನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಶಿವಯೋಗಿಗಳು , ನಾಡಿನಾದ್ಯಂತ ಪಾದಯಾತ್ರೆ ನಡೆಸಿ, ಜನರಲ್ಲಿರುವ ವ್ಯಸನಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು ದುಶ್ಚಟಗಳನ್ನು ಬಿಡುವಂತೆ ಬೋಧನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಆದರ್ಶದ ವಿಚಾರಗಳು-ಮಾರ್ಗದರ್ಶನ ಇಂದಿನ ಸಮಾಜಕ್ಕೆ ಅವಶ್ಯವಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಮಹಾಂತ ಜೋಳಿಗೆ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದ ಇಲಕಲ್-ಚಿತ್ತರಗಿಯ ವಿಜಯಮಹಾಂತ ಸಂಸ್ಥಾನಮಠದ ಲಿಂ. ಶ್ರೀ ಡಾ. ಮಹಾಂತ ಶಿವಯೋಗಿಗಳವರ ಜನ್ಮದಿನದ ಪ್ರಯುಕ್ತ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಿಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಶ್ರೀಗಳ ಜನ್ಮದಿನದಂಗವಾಗಿ ಆಚರಿಸಲ್ಪಡುತ್ತಿರುವ ವ್ಯಸನಮುಕ್ತ ದಿನಾಚರಣೆ ಕೇವಲ ಭಾಷಣಕ್ಕೆ ಸೀಮಿತಗೊಳಿಸದೇ ಅದನ್ನು ಎಲ್ಲರೂ ಕಾರ್ಯರೂಪಕ್ಕೆ ತರಬೇಕಾಗಿದೆ. ಆ ಮೂಲಕ ಪೂಜ್ಯರಿಗೆ ನಿಜವಾದ ಗೌರವ ಸಲ್ಲಿಸೋಣ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರತಿನಿಧಿ ವಿನೋದಕುಮಾರ ಜೇನವೇರಿ, ಪಿಡಿಎ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ, ಶರಣ ಚಿಂತಕ ಹಣಮಂತ ಗುಡ್ಡಾ, ಸಂಗೀತ ಕಲಾವಿದ ಸೂರ್ಯಕಾಂತ ಡುಮ್ಮಾ, ಗಜಲ್ ಕವಿ ಡಾ. ಮಲ್ಲಿನಾಥ ತಳವಾರ, ಹಟಗಾರ ಸಮಾಜದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ, ಪ್ರಮುಖರಾದ ಪದ್ಮಾವತಿ ನಾಯಕ್, ಸುರೇಶ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಜಗದೀಶ ದೇಶಪಾಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.