ಸುರಪುರ: ಬಡ ರೈತನ ಜಮೀನಿನಲ್ಲಿ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ಭೀಮ್ ಆರ್ಮಿ ಸಂಘಟನೆ ಹೆಸರಲ್ಲಿ ಹಾಕಿರುವ ನಾಮಫಲಕ ತೆರವುಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.
ನಗರದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ಬಡ ರೈತ ಪಂಚಪ್ಪ ಎನ್ನುವರಿಗೆ ಸೇರಿದ ಸರ್ವೇ ನಂಬರ್ 41/6ರಲ್ಲಿ 3 ಎಕರೆ 38 ಗುಂಟೆ ಜಮೀನು ಇದ್ದು,ಈ ಜಮೀನಿನಲ್ಲಿ ಯಾರೋ ಭೀಮ್ ಆರ್ಮಿ ಹೆಸರಿನ ನಾಮಫಲಕ ಹಾಕಿ ರೈತನಿಗೆ ವಿನಾಕಾರಣ ತೊಂದರೆ ಮಾಡುತ್ತಿದ್ದಾರೆ.ಇದರಿಂದ ಬಡ ರೈತ ತುಂಬಾ ವ್ಯಥೆ ಪಡುವಂತಾಗಿದೆ.ಆದ್ದರಿಂದ ಕೂಡಲೇ ಜಮೀನಿನಲ್ಲಿ ಹಾಕಿರುವ ನಾಮಫಲಕ ತೆರವುಗೊಳಿಸಬೇಕು ಮತ್ತು ನಾಮಫಲಕ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ಸಪ್ಟೆಂಬರ್ 1ನೇ ತಾರಿಖು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು,ಇದಕ್ಕೂ ವಿಳಂಬವಾದಲ್ಲಿ ಸಪ್ಟೆಂಬರ್ 6 ರಂದು ಕೆಂಭಾವಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿಯನ್ನು ಸುರಪುರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಘಮೊಡೆ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರವಿಚಂದ್ರ ಬೊಮ್ಮನಹಳ್ಳಿ,ಮಾನು ಗುರಿಕಾರ,ಬುದ್ಧಿವಂತ ನಾಗರಾಳ,ಮಾನಪ್ಪ ಬಿಜಾಸಪುರ,ಜೆಟ್ಟೆಪ್ಪ ನಾಗರಾಳ,ರಾಮಣ್ಣ ಶೆಳ್ಳಗಿ,ತಾಲೂಕು ಸಂಚಾಲಕ ಬಸವರಾಜ ದೊಡ್ಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.