ಶಹಾಬಾದ: ಮಾನವನ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಅಣ್ಣ-ತಂಗಿಯರ ಬಾಂಧವ್ಯ ತುಂಬಾ ಪವಿತ್ರ.ಇಂತಹ ಸಹೋದರ-ಸಹೋದರಿಯರ ನಡುವಿನ ಬಾಂದವ್ಯದ ಬೆಸುಗೆಯನ್ನು ಬಲಪಡಿಸಲು ಇರುವ ದಿನವೇ ರಕ್ಷಾಬಂಧನ ಎಂದು ಎಸ್ಜಿವರ್ಮಾ ಹಿಂದಿ ಪ್ರೌಢಶಾಲೆಯ ಶಿಕ್ಷಕ ಬಾಬಾಸಾಹೇಬ ಸಾಳುಂಕೆ ಹೇಳಿದರು.
ಅವರು ಬುಧವಾರದಂದು ನಗರದ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಬ್ಬ ಕೇವಲ ರಕ್ತ ಸಂಬಂಧವಾಗಬೇಕಿಲ್ಲ.ಬದಲಾಗಿ ಎಂದು ಅಳಿಸಲಾಗದ ಅನುಬಂಧವಾಗಿರಬಹುದು. ಇದು ಜಾತಿ ಧರ್ಮಗಳನ್ನು ಮೀರಿ ನಿಲ್ಲುವ ಭಾತೃತ್ವದ ಹಬ್ಬವಾಗಿದೆ ಎಂದರು.ಧಾರ್ಮಿಕ,ಸಾಂಸ್ಕøತಿಕವಾಗಿ ಆಚರಿಸುವ ರಕ್ಷಾಬಂಧನ ಹಬ್ಬ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸಿ, ಪವಿತ್ರ ಸಬಂಧವನ್ನು ಬೆಸೆಯುವ ಪರಂಪರೆಯಾಗಿದೆ. ಇದನ್ನು ನಾವೆಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿ,ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಧಾರ್ಮಿಕ ಬಾಂಧವ್ಯಕ್ಕೆ ಹೆಸರಾಗಿದೆ. ರಕ್ಷಾ ಎಂದರೆ ಸುರಕ್ಷತೆ ಮತ್ತು ಬಂಧನ ಎಂದರೆ ಬಂಧ ಅಥವಾ ಬಾಂಧವ್ಯ. ಸಹೋದರಿಯರು ತಮ್ಮ ಸಹೋದರರ ಕೈಗೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಪ್ರತಿಯಾಗಿ ಅವನ ರಕ್ಷಣೆಯನ್ನು ಬಯಸುತ್ತಾರೆ ಎಂದರು.
ಶಿಕ್ಷಕಿ ಲತಾ ಸಾಳುಂಕೆ ಪ್ರಾಸ್ತಾವಿಕ ಮಾತನಾಡಿ, ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಆಕಸ್ಮಿಕವಾಗಿ ತನ್ನ ಸುದರ್ಶನ ಚಕ್ರದಿಂದ ತನ್ನ ಬೆರಳನ್ನು ಕತ್ತರಿಸಿಕೊಂಡಾಗ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಶ್ರೀಕೃಷ್ಣನ ಗಾಯದ ಸುತ್ತಲೂ ರಕ್ತ ಹರಿಯುವುದನ್ನು ತಡೆಯಲು ಕಟ್ಟಿತ್ತಾಳೆ. ಮತ್ತು ಆ ಬಟ್ಟೆಯನ್ನು ಪವಿತ್ರ ದಾರವೆಂದು ಪರಿಗಣಿಸಲಾಗುತ್ತದೆ. ಆ ದಿನದಿಂದ, ಶ್ರೀಕೃಷ್ಣನು ದ್ರೌಪದಿಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅಂದಿನಿಂದ ಇಂದಿನವರೆಗೂ ಪವಿತ್ರ ರಕ್ಷಬಂಧನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಎಸ್.ಎಸ್.ನಂದಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಧೀರ ಕುಲಕರ್ಣಿ ವೇದಿಕೆಯ ಮೇಲಿದ್ದರು. ಶಿಕ್ಷಕಿಯರಾದ ವಿಜಯಲಕ್ಷ್ಮಿ ವೆಂಕಟೇಶ, ಗೀತಾ.ಪಿ. ಸಿಪ್ಪಿ, ರಂಜಿತಾ ಹಿರೇಮಠ,ಭಾರತಿ ಸಾಲೋಮನ್,ನಾಗವೇಣಿ ಕಂಬಾನೂರ ಸೇರಿದಂತೆ ಶಾಲಾ ಮಕ್ಕಳು ಇದ್ದರು. ಮಹೇಶ್ವರಿ ಗುಳಿಗಿ ನಿರೂಪಿಸಿದರು, ಭಾರತಿ ಶ್ರೀರಾಮ ಚವ್ಹಾಣ ವಂದಿಸಿದರು.