ಸುರಪುರ: ಬಾಲ್ಯ ವಿವಾಹ ಎನ್ನುವುದು ಸಾಮಾಜಿಕ ಪಿಡುಗಾಗಿದ್ದು ಇದನ್ನು ತಡೆಯಲು ಸಾರ್ವಜನಿಕರು ಕೂಡ ಕೈ ಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ತಿಳಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಹಾಗೂ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ನಡೆದ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿ,18 ವರ್ಷದ ಒಳಗಿನ ಹೆಣ್ಣು ಹಾಗೂ 21 ವರ್ಷದ ಒಳಗಿರುವ ಗಂಡು ಮದುವೆಯಾಗುವುದು ಬಾಲ್ಯ ವಿವಾಹವಾಗಿದೆ,ಇದರಿಂದ ಬಾಲ್ಯ ವಿವಾಹ ಮಾಡಿಸುವ ಪೋಷಕರಿಗೆ ಎರಡು ವರ್ಷಗಳ ಜೈಲು ಅದಕ್ಕಿಂತ ಹೆಚ್ಚಿನ ಶಿಕ್ಷೆ ಇದೆ,ಅಲ್ಲದೆ ಬಾಲ್ಯ ವಿವಾಹ ತಡೆಯಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಮತ್ತೋರ್ವ ದಿವಾಣಿ ನ್ಯಾಯಾಧೀಶರಾದ ಮಾರುತಿ ಕೆ ಅವರು ಮಾತನಾಡಿ,ಇಂದು ನಡೆದ ಬಾಲ್ಯ ವಿವಾಹ ನಿಷೇಧ ಜಾಗೃತಿ ಜಾಥಾದಲ್ಲಿ ಭಾಗವಹಿಸಿರುವ ಎಲ್ಲ ಮಕ್ಕಳು ಹಾಗೂ ಸಾರ್ವಜನಿಕರು ಬಾಲ್ಯ ವಿವಾಹ ಎಲ್ಲಿಯಾದರು ಕಂಡಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಅಥವಾ 1098 ನಂಬರಿಗೆ ಕರೆ ಮಾಡಿ ತಿಳಿಸಿದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆಯಲಿದ್ದಾರೆ,ಕೇವಲ ಬಾಲ್ಯ ವಿವಾಹ ತಡೆಗಟ್ಟುವ ಕುರಿತು ನಿಮ್ಮ ಮನೆಗಳಲ್ಲಿ ಮಾತ್ರವಲ್ಲದೆ ನಿಮ್ಮ ಅಕ್ಕ ಪಕ್ಕದ ಮನೆಯವರಿಗೂ ತಿಳಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಸುರೇಶ ಪಾಟೀಲ,ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ,ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ಶಾಬಾದಕರ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಪಂಡೀತ ನಿಂಬೂರ ಮಾತನಾಡಿದರು.ಇದಕ್ಕೂ ಮುನ್ನ ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನ ದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಜಾಗೃತಿ ಜಾಥಾ ನಡೆಸಿ ಮಕ್ಕಳು ಬಾಲ್ಯ ವಿವಾಹ ನಿಷೇಧದ ಕುರಿತ ಭಿತ್ತಿಗಳನ್ನು ಹಿಡಿದ ಘೋಷಣೆಗಳನ್ನು ಕೂಗಿದರು.ಜಾಥಾದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ,ವಕೀಲ ಮಂಜುನಾಥ ಹುದ್ದಾರ,ಶಿಕ್ಷಕರಾದ ಅಪ್ಪಣ್ಣ ಕುಲಕರ್ಣಿ,ಶಿವಕುಮಾರ ಕಮತಗಿ,ಶ್ರೀಶೈಲ ಯಂಕಂಚಿ ಸೇರಿದಂತೆ ನ್ಯಾಯಾಲಯದ ಭೀಮು ಬನಸೋಡೆ,ಮಲ್ಲಿಕಾರ್ಜುನ ಸಗರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.