ಸುರಪುರ: ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕರ್ನಾಟಕ ನಾಮಕರಣಗೊಂಡ ಸುವರ್ಣ ಮಹೋತ್ಸವದ ಅಂಗವಾಗಿ ಈಬಾರಿ 10 ಸಂಘ ಸಂಸ್ಥೆಗಳಿಗೆ ವಿಶೇಷವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿಯ ಅತ್ಯಂತ ಹಳೆಯ ಸಂಘಗಳಲ್ಲಿ ಒಂದಾಗಿರುವ,81 ವರ್ಷಗಳಷ್ಟು ಹಳೆಯದಾದ ಈ ಸಂಘದ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಈಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸುದ್ದಿ ಹೊರಬೀಳುತ್ತಿದ್ದಂತೆ ಸಂಘದ ಭವನದ ಬಳಿ ಸಂಭ್ರಮಾಚರಣೆ ಆಚರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಶಾಂತಪ್ಪ ಬೂದಿಹಾಳ, ಅಧ್ಯಕ್ಷ ಸೂಗುರೇಶ ವಾರದ ನೇತೃತ್ವದಲ್ಲಿ ಸಂಘದ ಸಂಸ್ಥಾಪಕರಾದ ಎಮ್.ಆರ್ ಬುದ್ದಿವಂತ ಶೆಟ್ಟರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೂಗೂರೇಶ ವಾರದ ಮಾತನಾಡಿ,ನಮ್ಮ ಕನ್ನಡ ಸಾಹಿತ್ಯ ಸಂಘ ಕಳೆದ 81 ವರ್ಷಗಳಿಂದ ಮಾಡಿಕೊಂಡು ಬಂದಿರುವ ನಾಡು ನುಡಿಯ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಳಿಸಿದ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಸರ್ಕಾರಕ್ಕೆ ಮತ್ತು ವಿಶೇಷವಾಗಿ ನಮ್ಮ ಶಾಸಕರಾದ ರಾಜಾ ವೆಂಕಟಪ್ಪ ನಾಯಕರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಂಘದ ವತಿಯಿಂದ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಸಂಭ್ರಮಾಚರಣೆಯಲ್ಲಿ ಮುಖಂಡರಾದ ಸೋಮಶೇಖರ್ ಶಾಬಾದಿ,ಸುಭಾಷ್ ಬೋಡಾ ,ಸೋಮರಾಯ ಶಖಾಪುರ,ಶ್ರೀರಂಗು ಮಿರಿಯಾಲ್,ಮಲ್ಲು ಗುಳಗಿ,ಮುದ್ದಪ್ಪ ಅಪ್ಪಗೋಳ ,ಪ್ರಕಾಶ್ ಅಂಗಡಿ,ಪ್ರಕಾಶ್ ಆಲಬನೂರ,ಮಲ್ಕಯ್ಯ ತಿಲಕನೂರು,ಅರುಣ್ ಗೋಲಗೇರಿ ,ಚನ್ನಪ್ಪ ಗುಳಗಿ ,ರವಿ ತ್ರಿವೇದಿ,ಮಹೇಶ್ ಉಲ್ಪನರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು