ಚಿತ್ತಾಪುರ: ತಾಲ್ಲೂಕಿನ ಕದ್ದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಶಾಲಾ ವಿದ್ಯಾರ್ಥಿನಿಯರು ಪೂಜೆ ಸಲ್ಲಿಸಿದರು ಹಾಗೂ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಪುಷ್ಪನಮನ ಸಲ್ಲಿಸಿದರು.
ಶಾಲೆಯ ಅತಿಥಿ ಶಿಕ್ಷಕ ಜಗದೇವ ಎಸ್ ಕುಂಬಾರ ಮಾತನಾಡಿ ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ಧ್ಯೇಯ, ತತ್ವವೇ ಅಂಬೇಡ್ಕರ್ ಆಗಿದ್ದಾರೆ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ. ಅಂಬೇಡ್ಕರ್ ಅವರ ಹೆಸರು ಹೇಳುವುದೇ ರೋಮಾಂಚನ ಉಂಟು ಮಾಡುತ್ತದೆ.
ಸಮಾನತೆ ದೃಷ್ಟಿಯಲ್ಲಿ ಸಂವಿಧಾನ ರಚಿಸಿದ ಮಹಾನ್ ಚೇತನ. ನಾವೆಲ್ಲರೂ ಜೀವನದಲ್ಲಿ ಅವರ ಚಿಂತನೆ ಅಳವಡಿಸಿಕೊಳ್ಳಬೇಕಿದೆ ಅಂಬೇಡ್ಕರ್ ಅವರು ಸಂಘರ್ಷದ ಹಾದಿ ತುಳಿಯದೆ ಸಾಮರಸ್ಯದ ಮೂಲಕ ಸಮಾಜವು ಒಗ್ಗೂಡುವಂತೆ ಮಾಡಿದ್ದಾರೆ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಕಾಂತ ಐನಾಪೂರ, ಶಿಕ್ಷಕಿ ನಾಗಮ್ಮ ಕುಂಬಾರ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಬೀಮಬಾಯಿ, ನಾಗಮ್ಮ, ತಿಪ್ಪಮ್ಮ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.