ಶಹಾಬಾದ: ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕ ಒತ್ತಡಗಳಿಂದ ಮನುಷ್ಯ ದುಶ್ಚಟಗಳ ದಾಸನಾಗುತ್ತಿದ್ದು, ಅದರಿಂದ ಹೊರಬಂದು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಪುರಾಣ ಪ್ರವನಗಳು ಕೇಳುವುದು ಅವಶ್ಯ ಎಂದು ತೊನಸಿನಹಳ್ಳಿ(ಎಸ್) ಗ್ರಾಮದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಹೇಳಿದರು.
ಅವರು ಸಮೀಪದ ತೊನಸಿನಹಳ್ಳಿ(ಎಸ್) ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಲಾದ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ದುಶ್ಚಟಗಳು ಮನುಷ್ಯನ ಚಿಂತನೆ ಮಾಡುವ ಶಕ್ತಿಯನ್ನು ಕುಂದಿಸುತ್ತದೆ. ತಾನು ಹಾಳಾಗುವುದಲ್ಲದೇ ಸಮಾಜಕ್ಕೂ ಕಂಟಕನಾಗಿ ಹೊರಹೊಮ್ಮುತ್ತಾನೆ. ಧಾರ್ಮಿಕ ಆಚರಣೆಗಳು ಮನುಷ್ಯರಲ್ಲಿ ಮಹತ್ತರವಾದ ಬದಲಾವಣೆ ತರುವುದರ ಜೊತೆಗೆ ಸದ್ಗುಣ,ಸನ್ನಡತೆಯನ್ನು ಬೆಳೆಸುತ್ತವೆ. ಅಲ್ಲದೇ ಮಾನಸಿಕ ನೆಮ್ಮದಿ ನೀಡುತ್ತವೆ.ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.
ಕೊಟ್ಟುರೇಶ್ವರ ಶರಣರು ಮಾತನಾಡಿ,ಈ ವರ್ಷದ ಜಾತ್ರೆ ಸಮಾಜಮುಖಿ ಜಾತ್ರೆಯಾಗಿದ್ದು, ಗುರು ಸಂಗಮೇಶ್ವರರ ಸ್ಮರಣೆ ಮಾಡುವುದರ ಮೂಲಕ ಪಾವನರಾಗಬೇಕೆಂದು ಹೇಳಿದರು.
ಶಿವಲಿಂಗಯ್ಯ ಶಾಸ್ತ್ರಿ ಗರೂರ ಮಾತನಾಡಿ, ಶರಣರ ಪುರಾಣಗಳನ್ನು ಕೇಳುವದರಿಂದ ಮನಸ್ಸಿನ ಮಲೀನತೆ ಕಳೆಯುತ್ತದೆ, ಒಳ್ಳೆಯ ಸಂಸ್ಕಾರ ಸಿಗುತ್ತದೆ. ಇಲ್ಲಿ ವಿರಕ್ತರ ಬದಲಾಗಿ, ಗೃಹಸ್ಥರ ಪುರಾಣ ಹಚ್ಚಿದ್ದಾರೆ. ಕಾರಣ ಸಂಸಾರದಲ್ಲಿದ್ದು, ಪಾರಮಾರ್ಥವನ್ನು ಗೆಲ್ಲುವ ವಿಚಾರ ತಿಳಿದುಕೊಳ್ಳಬೇಕೆಂಬ ಉದ್ದೇಶವಾಗಿದೆ. ಅದಕ್ಕಾಗಿ ಶಾಂತಿ,ಸಮಾಧಾನ, ಸಹನೆಯಿಂದ ಪುರಾಣ ಕೇಳಬೇಕೆಂದು ಸಲಹೆ ನೀಡಿದರು.
ಗಣ್ಯರಾದ ಶಿವಲಿಂಗಪ್ಪ ಗೊಳೇದ್,ಬಸವರಾಜ ಬಮ್ಮಶೆಟ್ಟಿ,ನಿಂಗಣ್ಣಗೌಡ.ಎಸ್.ಮಾಲಿ ಪಾಟೀಲ,ಶರಣಪ್ಪ ಇಂಗಿನ್,ವಿಶ್ವರಾಜ ರಾಮಶೆಟ್ಟಿ,ರೇವಣಸಿದ್ದಪ್ಪ ಗೊಳೇದ್,ಅಯ್ಯಣ್ಣ ಬಂದಳ್ಳಿ ಇತರರು ಇದ್ದರು.
ಶಿವಲಿಂಗಯ್ಯ ಶಾಸ್ತ್ರಿ ಗರೂರ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಪ್ರಾರಂಭಿಸಿದರು, ಮೌನೇಶ ಪಂಚಾಳ ತಬಲಾ ಸಾಥ ನೀಡಿದರು. ಅಣ್ಣಾರಾವ ಮತ್ತಿಮೂಡ ಸಂಗೀತ ಸೇವೆ ಸಲ್ಲಿಸಿದರು. ಗ್ರಾಮಸ್ಥರು ಪಾಲ್ಗೊಂಡಿದ್ದರು.