ಶಹಾಬಾದ: ಧೈರ್ಯ ಹಾಗೂ ಶೂರತನಕ್ಕೆ ಹೆಸರಾಗಿದ್ದ ರಾಷ್ಟ್ರವೀರ ಮಹಾರಾಣಾ ಪ್ರತಾಪ ಸಿಂಗ್ ಇಂದಿನ ಯುವಕರಿಗೆ ಮಾದರಿ ಎಂದು ನಗರದ ಉದ್ಯಮಿ ನರೇಂದ್ರ ವರ್ಮಾಹೇಳಿದರು.
ಅವರು ನಗರದ ಶ್ರೀರಾಮ ವೃತ್ತದಲ್ಲಿ ರಜಪೂತ ಸಮಾಜದ ವತಿಯಿಂದ ಆಯೋಜಿಸಲಾದ ಮಹಾರಾಣಾ ಪ್ರತಾಪ ಸಿಂಗ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತನ್ನ ರಾಜ್ಯವನ್ನು ಸುಭಿಕ್ಷೆಯಿಂದ ಮುನ್ನಡೆಸುವ ಕಾರಣಕ್ಕೆ ಬಲಿಷ್ಠ ರಾಜರನ್ನು ಹಿಮ್ಮೆಟ್ಟಿಸಿದ ಕೀರ್ತಿ ಇವರದ್ದು. ಇವರ ಶೂರತನ ಹಾಗೂ ಧೈರ್ಯ ಇಂದಿನ ಯುವ ಸಮೂಹಕ್ಕೆ ಮಾದರಿ ಎಂದರು.
ರಜಪೂತ ಸಮಾಜದ ಅಧ್ಯಕ್ಷ ತುಳಜಾರಾಮ ಮಿಶ್ರಾ ಮಾತನಾಡಿ, ಸಮಾಜ ಸುಧಾರಕರು, ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕೇವಲ ಒಂದು ಸಮಾಜ ಆಚರಿಸುವುದಕ್ಕಿಂತ ಎಲ್ಲಾ ಸಮುದಾಯಗಳು ಒಗ್ಗೂಡಿಕೊಂಡು ಆಚರಿಸಿದಾಗ ಮಾತ್ರ ನಿಜವಾದ ಅರ್ಥ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿದ್ದು, ಮಹಾನ್ ವ್ಯಕ್ತಿಗಳನ್ನು ಒಂದು ಸಮಾಜಕ್ಕೆ ಸೀಮಿತ ಮಾಡಲಾಗುತ್ತಿದೆ. ಒಂದೊಂದು ಸಮಾಜಕ್ಕೊಬ್ಬ ಮಹಾನ್ ನಾಯಕರನ್ನಾಗಿ ಮಾಡಿಕೊಳ್ಳುವ ಸಂಕುಚಿತ ಭಾವನೆ ತೊಲಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ರತನ್ಕುಮಾರ ತಿವಾರಿ, ರಘುವೀರಸಿಂಗ ಠಾಕೂರ,ಸಚಿನ್ ಠಾಕೂರ, ಅರವಿಂದ ಠಾಕೂರ,ರಾಜುಸಿಂಗ ಠಾಕೂರ,ಘನಶಾಮ ಠಾಕೂರ, ಅಮಿತ್ ಇತರರು ಇದ್ದರು.