ಶಹಾಪುರ: ಚಿತ್ರದುರ್ಗ ರೇಣುಕಸ್ವಾಮಿ ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ನಟ ದರ್ಶನ ನಡೆ ಅತ್ಯಂತ ಖಂಡನೀಯ ಎಂದು ಕಡಕೋಳ ಹಾಗೂ ಮುಡಬೂಳ ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿ ಶ್ರೀ ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ.
ನಮ್ಮ ನಾಡಿನಲ್ಲಿ ಮೇರುನಟ ಡಾ.ರಾಜಕುಮಾರ, ವಿಷ್ಣುವರ್ದನ ಸೇರಿ ಹಲವು ನಾಯಕ ನಟರು, ಖಳನಟರು ಹಾಗೂ ಪೋಷಕ ನಟರು ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಸಾವಿರಾರು ಅಭಿಮಾನಿಗಳಿಗೆ ಆದರ್ಶವಾಗಿದ್ದರು. ತಮ್ಮ ಜೀವನದಲ್ಲಿ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಇಟ್ಟು, ಇಂದಿಗೂ ಶ್ರೇಷ್ಠ ವ್ಯಕ್ತಿಗಳಾಗಿ ಉಳಿದಿದ್ದಾರೆ. ಆದರೆ ಕೊಲೆ ಆರೋಪಿ ದರ್ಶನ ತನ್ನ ಕೆಟ್ಟ ಬುದ್ಧಿ, ದುಡ್ಡಿನ ಅಹಂಕಾರದಿಂದ ಒಂದು ಶ್ರೀಸಾಮಾನ್ಯನ ಜೀವ ತಗೆಯುವ ಕೀಳಮಟ್ಟಕ್ಕೆ ಹೋಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಕೊಲೆಗಳು ಹೆಚ್ಚುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ. ಚಿತ್ರ ನಟರಾಗಿ ಕೊಲೆ ಮಾಡುವ ಮಟ್ಟಕ್ಕಿಳಿಯುವುದು ಸರಿಯಲ್ಲ, ಪೊಲೀಸರು ಈ ಕೊಲೆಯನ್ನು ಸಂಪೂರ್ಣ ತನಿಖೆ ಮಾಡಿ ಎಲ್ಲ ತಪ್ಪಿತಸ್ಥರಿಗೆ ಸೂಕ್ತ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಂಬರುವ ಯುವ ನಟರು ದೇಶಕಂಡ ಶ್ರೇಷ್ಠ ಚಿತ್ರನಟರ ಜೀವನ ಆದರ್ಶ ಓದಿಕೊಂಡು ಅವರಂತೆ ತಾವು ಸಹ ಬಾಳಿ ಬದುಕುವ ಗುರಿ, ಆದರ್ಶವನ್ನಿಟ್ಟುಕೊಂಡು ಸಿನಿಮಾ ಕ್ಷೇತ್ರಕ್ಕೆ ಬರಬೇಕು. ಅಂದಾಗ ಮಾತ್ರ ಸಮಾಜ ಮತ್ತು ಅಭಿಮಾನಿಗಳು ಅವರನ್ನು ಸದಾ ಸ್ಮರಿಸುತ್ತಾರೆ ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ದುರಂಹಕಾರಿ, ಆರೋಪಿ ದರ್ಶನಗೆ ಚಿತ್ರ ರಂಗದಿಂದ ಬಹಿಷ್ಕಾರ ಹಾಕಬೇಕು.ಸರಕಾರ ದರ್ಶನ್ ಅವರ ನಟಿಸುವ ಚಿತ್ರಗಳನ್ನು ನಿಷೇಧಿಸಬೇಕು, ಕೊಲೆಯಾದ ಕುಟುಂಬಕ್ಕೆ ಸರಕಾರ ನೌಕರಿ ಅಥವಾ ಆರ್ಥಿಕ ಸಹಾಯ ನೀಡಬೇಕು ಎಂದು ತಿಳಿಸಿದ್ದಾರೆ.