ಸುರಪುರ: ತಾಲೂಕಿನ ಜನರು ಯಾರಿಗಾದರೂ ವಿಪರೀತ ಜ್ವರ,ತಲೆ ನೋವು ಕಾಣಿಸಿಕೊಂಡಲ್ಲಿ ತಕ್ಷಣ ಅಂತವರು ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಘೀ ಜ್ವರದ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ತಿಳಿಸಿದ್ದಾರೆ.
ನಗರದ ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿ,ಮಳೆಗಾಲದ ಸಂದರ್ಭದಲ್ಲಿ ಡೆಂಘೀ ಜ್ವರ ಕಾಣಿಸಿಕೊಳ್ಳುತ್ತವೆ,ಜನರು ಇದರ ಬಗ್ಗೆ ಭಯ ಪಟ್ಟುಕೊಳ್ಳದೆ ಮುಂಜಾಗ್ರತೆ ವಹಿಸುವುದು ಮುಖ್ಯವಾಗಿದೆ.ಮನೆಯ ಬಳಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು,ಹಳೆಯ ಟೈಯರ್,ಹೂವಿನ ಕುಂಡ ಮತ್ತಿತರೆ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು,ಸ್ವಚ್ಛ ನೀರು ಇದ್ದರು ಅದರ ಪಾಚಿಯಿಂದ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ.ಆದ್ದರಿಂದ ಯಾವುದೇ ನೀರಿನ ತೊಟ್ಟಿ ಮತ್ತಿತರೆ ವಸ್ತುಗಳಿದ್ದಲ್ಲಿ ವಾರದಲ್ಲಿ ಎರಡು ಬಾರಿ ಸ್ವಚ್ಛಗೊಳಿಸಿದರೆ ಉತ್ತಮ ಎಂದು ತಿಳಿಸಿದರು.
ನಮ್ಮ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಜನೆವರಿ ಯಿಂದ ಇಲ್ಲಿಯವರೆಗೆ ಎರಡು ಡೆಂಘೀ ಪ್ರಕರಣಗಳು ಕಂಡು ಬಂದಿದ್ದು ಗುಣಮುಖರಾಗಿದ್ದಾರೆ.ಅಲ್ಲದೆ ನಮ್ಮ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಶುಕ್ರವಾರ ಮನೆ ಮನೆಗೆ ಭೇಟಿ ನೀಡಿ ಮುಂಜಾಗ್ರತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.ಅಲ್ಲದೆ ಇಲಾಖೆಯಿಂದ ರಕ್ತ ಪರೀಕ್ಷೆಯನ್ನು ಮಾಡಲಾಗುತ್ತಿದೆ.ಇದುವರೆಗೆ 70 ಕ್ಕೂ ಹೆಚ್ಚು ಜನರ ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ.ಅಲ್ಲದೆ ಡೆಂಘೀ ಜ್ವರಕ್ಕೆ,ಚಿಕನ್ ಗೂನ್ಯ,ಮಲೇರಿಯಾಕ್ಕೆ ಚಿಕಿತ್ಸೆಯೂ ಲಭ್ಯವಿದ್ದು ಜನರು ಆತಂಕ ಪಡಬೇಕಿಲ್ಲ ಎಂದು ಅಭಯ ನೀಡಿದರು.
ಯಾರಾದರು ಖಾಸಗಿ ಲ್ಯಾಬ್ಗಳಲ್ಲಿ ಡೆಂಘೀ ಪರೀಕ್ಷೆ ಮಾಡಿಸಿಕೊಂಡಲ್ಲಿ ಅದರ ಶುಲ್ಕ ಸರಕಾರ ನಿಗದಿ ಪಡಿಸಿದಂತೆ 300 ರೂಪಾಯಿ ಇದ್ದು ಹೆಚ್ಚಿನ ಶುಲ್ಕ ನೀಡಬೇಕಿಲ್ಲ ಮತ್ತು ಲ್ಯಾಬ್ನವರು ಕೂಡ ಹೆಚ್ಚಿನ ಶುಲ್ಕವನ್ನು ಪಡೆಯಬಾರದು. – ಡಾ.ಆರ್.ವಿ ನಾಯಕ