ಸುರಪುರ: ಕಳೆದ ಒಂದು ವಾರದಿಂದ ವಿದ್ಯುತ್ ಸರಬರಾಜು ಇಲ್ಲದ ಕಾರಣ ಭತ್ತ ನಾಟಿ ಮಾಡಲಾಗದೆ ರೈತರು ಬೇಸತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಬೇಸರ ವ್ಯಕ್ತಪಡಿಸಿದರು.
ನಗರದ ರಂಗಂಪೇಟೆಯ ಜೆಸ್ಕಾಂ ಉಪ ವಿಭಾಗಿಯ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಬೆಳಿಗ್ಗೆ 4 ಗಂಟೆ ವೇಳೆಗೆ ವಿದ್ಯುತ್ ಕೊಡುತ್ತಾರೆ,ಆ ಸಂದರ್ಭದಲ್ಲಿ ಯಾವುದಾದರು ವಾಯರ್ ಅರ್ತಿಂಗ್ ಆಗಿದ್ದು ಗೊತ್ತಾಗದೆ ರೈತರು ಅಪಾಯಕ್ಕೀಡಾಗುತ್ತಾರೆ,ಅಲ್ಲದೆ ಹಾವು ಚೇಳುಗಳ ಭಯ ಅಂತಹ ಸಂದರ್ಭದಲ್ಲಿ ನೀರು ಪಡೆಯುವುದು ಕಷ್ಟವಾಗಲಿದೆ.
ಆದ್ದರಿಂದ ಬೆಳಿಗ್ಗೆ 6 ಗಂಟೆಯಿಂದ ಸುಮಾರು 7 ತಾಸು ನಿರಂತರ ವಿದ್ಯುತ್ ನೀಡಬೇಕು,ಈಗ ಮೊದಲು ಒಂದು ವಾರ 10 ತಾಸು ವಿದ್ಯುತ್ ನೀಡುವಂತೆ ಆಗ್ರಹಿಸಿದರು.ಅಲ್ಲದೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಳೆ ಗಾಳಿಗೆ ಕಂಬಗಳು ಬಿದ್ದಿದ್ದು ಅವುಗಳನ್ನು ಹಾಕಬೇಕು,ಅಗತ್ಯವಿರುವ ಕಡೆ ಹೊಸ ಟಿ.ಸಿ ಅಳವಡಿಸಬೇಕು ಇಲ್ಲವಾದಲ್ಲಿ ತಾಲೂಕಿನ ಎಲ್ಲಾ ರೈತರು ಸೇರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ನಂತರ ಸ್ಥಳಕ್ಕೆ ಜೆಸ್ಕಾಂ ಎಇಇ ರಫೀಕ್ ಅವರು ಆಗಮಿಸಿ ಸೆಕ್ಸೆನ್ ಆಫಿಸರ್ಗಳಿಗೆ ಕೂಡಲೇ ಎಲ್ಲಾ ಗ್ರಾಮಗಳ ವಿದ್ಯುತ್ ಸರಬರಾಜು ಆರಂಭಿಸುವಂತೆ ಕರೆ ಮಾಡಿ ಆದೇಶ ಮಾಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಕೆಂಭಾವಿ,ವಿರೇಶ ಬೋನ್ಹಾಳ,ಲಾಲಸಾಬ್,ಶ್ರೀಧರ ಹೊಸಮನಿ,ವಿಜಯಕುಮಾರ ಗುಳಗಿ,ಶಿವರುದ್ರ ಉಳ್ಳಿ,ಹಣಮಂತ್ರಾಯ ಬಡಿಗೇರ ಸೇರಿದಂತೆ ರತ್ತಾಳ,ದೇವಿಕೇರ,ಸತ್ಯಂಪೇಟೆ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.