ವಾಡಿ: ‘ಇಂದಿನ ಸಾಮಾಜಿಕ ಸಮಸ್ಯೆಗಳಾದ ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣ, ಹೆಣ್ಣು ಮಕ್ಕಳ ಮೇಲೆ ಹೆಚ್ಚಾಗುತ್ತಿರುವ ಅಪರಾಧಗಳು, ಭ್ರಷ್ಟಾಚಾರ, ಬೆಲೆ ಏರಿಕೆ ಮೊದಲಾದವುಗಳನ್ನು ಬುಡಸಮೇತ ಕಿತ್ತುಹಾಕಲು ಮತ್ತು ಸಮಾಜವಾದಿ ಸಮಾಜಕ್ಕಾಗಿ ಘೋಷ್ ಚಿಂತನೆಗಳು ಅವಶ್ಯಕವಾಗಿವೆ’ ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯಸಮಿತಿ ಸದಸ್ಯ ವಿ ಎನ್ ರಾಜಶೇಖರ್ ಹೇಳಿದರು.
ವಾಡಿ ಪಟ್ಟಣದಲ್ಲಿ ಬುಧವಾರ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಆಯೋಜಿಸಿದ ಕಾಮ್ರೇಡ್ ಶಿವದಾಸ್ ಘೋಷ್ ಅವರ 48ನೇ ಸ್ಮಾರಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಎಲ್ಲಾ ರೀತಿಯ ಸಮಸ್ಯೆ ಹಾಗೂ ಸಂಕಷ್ಟಗಳಿಗೆ ಬಂಡವಾಳಶಾಹಿ ವ್ಯವಸ್ಥೆ ಕಾರಣವಾಗಿದ್ದು ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನಡೆಸಲು 1948ರಲ್ಲಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷ ಸ್ಥಾಪಿಸಿದರು ಎಂದರು.
ದೇಶದಲ್ಲಿ ಸಮಾಜವಾದಿ ಕ್ರಾಂತಿ ಸಂಘಟಿಸುವ ಧ್ಯೇಯದೊಂದಿಗೆ ಹುಟ್ಟಿಕೊಂಡ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಹಾಗೂ ಸಿಪಿಐ(ಎಂ) ನಾಮಾಂಕಿತ ಕಮ್ಯುನಿಸ್ಟ್ ಪಕ್ಷಗಳಿಂದ ಕ್ರಾಂತಿ ಸಂಘಟಿಸಲು ಸಾಧ್ಯವಿಲ್ಲ ಎಂದು ಅರಿತು 1948ರಲ್ಲಿ ಕೆಲವೇ ಕೆಲವು ಸಂಗತಿಗಳೊಂದಿಗೆ ಹುಟ್ಟುಹಾಕಿದ ಪಕ್ಷ ಇಂದು ದೇಶಾದ್ಯಂತ ಬೆಳೆಯುತ್ತಿದೆ ಎಂದರು.
ದೇಶ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ, ಸಾಮಾಜಿಕ ರೋಗಗಳಿಗೆ ಲಾಭಾಧಾರಿತ ಶೋಷಕ ಬಂಡವಾಳಶಾಹಿ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದ್ದು ಇದನ್ನು ಕಿತ್ತೊಗೆಯಲು ಸಮಾಜವಾದಿ ಕ್ರಾಂತಿ ಅವಶ್ಯಕತೆ ಇದೆ. ಇದಕ್ಕಾಗಿ ಶಿವದಾಸ್ ಚಿಂತನೆಗಳು ಬೇಕಾಗಿದೆ. ದೇಶದ ತುಂಬಾ ರೈತ, ಕಾರ್ಮಿಕ, ವಿದ್ಯಾರ್ಥಿಗಳ, ಯುವಜನರ ಮತ್ತು ಮಹಿಳೆಯರ ಸಮಸ್ಯೆಗಳ ವಿರುದ್ಧ ನಮ್ಮ ಪಕ್ಷ ನಿರಂತರ ಹೋರಾಟ ನಡೆಸುತ್ತಿದ್ದು ಈ ಹೋರಾಟಗಳ ಮೂಲಕ ಅಂತಿಮವಾಗಿ ಸಮಾಜವಾದಿ ವ್ಯವಸ್ಥೆ ಸ್ಥಾಪನೆಯಾಗಲಿದೆ ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ವೀರಭದ್ರಪ್ಪ ಆರ್ ಕೆ ಮಾತನಾಡಿ, ದೇಶವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಪೋಷಿಸಿಕೊಂಡು ಬರುತ್ತಿವೆ. ಬಡತನ ಮುಕ್ತ ದೇಶದ ಕನಸು ಕಟ್ಟುತ್ತಲೇ ಟಾಟಾ, ಬಿರ್ಲಾ, ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳ ಹೊಟ್ಟೆ ತುಂಬಿಸುತ್ತಿವೆ. ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂಥಹ ಭ್ರಷ್ಟ ಶೋಷಕ ರಾಜಕೀಯ ಪಕ್ಷಗಳಿಂದ ದೇಶಕ್ಕೆ ಯಾವುದೇ ಭವಿಷ್ಯವಿಲ್ಲ ಎಂದು ದೂರಿದ ಅವರು, ದೇಶದ ಬಡ ಜನಗಳಿಗೆ ಎಸ್ ಯು ಸಿ ಐ ಪಕ್ಷ ಮಾತ್ರ ಆಶಾಕಿರಣವಾಗಿದೆ ಎಂದರು.
ದೇಶದ ಪ್ರತಿಯೊಂದು ರಾಜ್ಯದಲ್ಲೂ ಎಸ್ಯುಸಿಐ ಪಕ್ಷ ಕಾರ್ಯನಿರ್ವಹಿಸುತ್ತಿದೆ. ಪಕ್ಷ ಕಟ್ಟಲು ನಮ್ಮ ಕಾರ್ಯಕರ್ತರು ಹಾಗೂ ನಾಯಕರು ಬೀದಿ ಬೀದಿಗಳಲ್ಲಿ ನಿಂತು ಜನರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಕೆಂಪು ಬಾವುಟದಡಿ ಚಳುವಳಿಗಳನ್ನು ಸಹ ಸಂಘಟಿಸುತ್ತಿದ್ದಾರೆ ಎಂದರು.
ಸದಸ್ಯ ಶರಣು ಹೇರೂರ ಕಾರ್ಯಕ್ರಮ ನಿರೂಪಿಸಿದರು. ಗೌತಮ ಪರ್ತೂರಕರ, ಮಲ್ಲಿನಾಥ ಹುಂಡೇಕಲ್, ರಾಜು ಒಡೆಯರಾಜ್, ಶರಣುಕುಮಾರ ದೋಶೆಟ್ಟಿ, ಪದ್ಮರೇಖಾ ಆರ್ ಕೆ, ಮಲ್ಲಣ್ಣ ದಂಡಬಾ, ಶರಣು ಚಿತ್ತಾಪುರ, ಶಿವಲೀಲಾ ಮಾಶಾಳ, ದತ್ತಾತ್ರೇಯ ಹುಡೇಕರ, ಶ್ರೀಶೈಲ ಕೆಂಚಗುಂಡಿ, ಅವಿನಾಶ ಒಡೆಯರ್, ಹೇಮಾ ಜಮಾದಾರ, ಸಾಯಿನಾಥ ಚಿತ್ತೆಲ್ಕರ, ಚಂದ್ರು ಪಬ್ಲಿಸಿಟಿ, ಧನರಾಜ್, ಸೇರಿದಂತೆ ಇತರರು ಪಾಲ್ಗೊಂಡಿದ್ದರು.