ಶಹಾಪುರ: ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಯುವಜನತೆ ಆಗಿರುವುದರಿಂದ ಮೊದಲು ಅನ್ಯಾಯ ಅಕ್ರಮ ಭ್ರಷ್ಟಾಚಾರಗಳ ವಿರುದ್ಧ ಧ್ವನಿ ಎತ್ತುವುದರ ಮೂಲಕ ಜಾಗೃತರಾದಾಗ ಮತ್ತಷ್ಟು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಸಾಧ್ಯ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀ ಶಂಕರ ಬಿದರಿಯವರು ಹೇಳಿದರು.
ನಗರದ ಶ್ರೀ ಎಸ್.ಬಿ. ದೇಶಮುಖ್ ಪದವಿ ಮಹಾವಿದ್ಯಾಲಯದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಪ್ರಜಾಪ್ರಭುತ್ವ ಮತ್ತು ಯುವಜನತೆ ಒಂದು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಸತತ ಅಭ್ಯಾಸ ಮಾಡಿ ಜೀವನದಲ್ಲಿ ಸ್ವಾವಲಂಬಿಗಳಾಗಿ, ಸಮಾಜದಲ್ಲಿ ಯಾವುದೇ ಕಾರಣಕ್ಕೂ ವಾಮ ಮಾರ್ಗ ಹಿಡಿಯದೇ ಸನ್ಮಾರ್ಗದಲ್ಲಿ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಈ ಸಮಾರಂಭದ ವೇದಿಕೆಯ ಮೇಲೆ ಖ್ಯಾತ ವೈದ್ಯರು ಹಾಗೂ ಹಿರಿಯ ಮುಖಂಡರಾದ ಡಾ॥ ಚಂದ್ರಶೇಖರ ಸುಬೇದಾರ, ಸಂಗಣ್ಣ ಮೋಟಗಿ, ಮಲ್ಲಣ್ಣ ಗುತ್ತೇದಾರ್, ಕಲ್ಯಾಣ ಕರ್ನಾಟಕ ಯುವ ಸೇನೆಯ ರಾಜ್ಯಾಧ್ಯಕ್ಷ ರಾದ ಅಂಬರೀಶ್ ಬಿಲ್ಲವ ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವರಾಜ್ ದೇಶಮುಖ ವಹಿಸಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಶಹಾಪುರದ ಸಾಮಾಜಿಕ ಕಾರ್ಯಕರ್ತರಾದ ಮಾನಪ್ಪ ಹಡಪದ ಹಾಗೂ ರಾಮು ಇವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ಈ ಕಾರ್ಯಕ್ರಮದ ಪೂರ್ವದಲ್ಲಿ ಕುಮಾರಿ ಸೌಜನ್ಯ ಪ್ರಾರ್ಥಿಸಿದರು, ಮಲ್ಲಿಕಾರ್ಜುನ ಅಂಗಡಿ ಸ್ವಾಗತಿಸಿದರೆ, ಪ್ರಭು ಅಂಗಡಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು ಟ್ರಸ್ಟ್ ಅಧ್ಯಕ್ಷರಾದ ಬಸವರಾಜ ಸಿನ್ನೂರ ನಿರೂಪಿಸಿದರು ಲಕ್ಷ್ಮೀಪುತ್ರ ವಂದಿಸಿದರು.