ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಕೆ ಹಾಗೂ ಜಾಲಿಬೆಂಚಿ ಗ್ರಾಮದ ಕೆರೆ ತುಂಬಿಸುವ ಯೋಜನೆಗೆ ಸರಕಾರ ಮಂಜೂರಾಗಿದ್ದ ಅನುದಾನ ಮರಳಿ ಪಡೆದಿದ್ದು ಕೂಡಲೇ ಈ ಹಣ ಬಿಡುಗಡೆ ಮಾಡಬೇಕು,ಇಲ್ಲವಾದಲ್ಲಿ ರಕ್ತಕ್ರಾಂತಿ ಹೋರಾಟ ನಡೆಸಬೇಕಾಗಲಿದೆ ಎಂದು ಕರ್ನಾಟಕ ಎಸ್.ಸಿ,ಎಸ್.ಟಿ ಗುತ್ತಿಗೆದಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕೋಬ ದೊರೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹಳೆ ಬಸ್ ನಿಲ್ದಾಣದ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ಟೈರ್ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಮಾತನಾಡಿ,ಕಳೆದ ಐದು ವರ್ಷಗಳ ಹಿಂದೆಯೇ ಕೆರೆ ತುಂಬಿಸುವ ಯೋಜನೆಗೆ ಎರಡುವರೆ ಕೋಟಿ ರೂಪಾಯಿ ಅನುದಾನ ಸರಕಾರ ಬಿಡುಗಡೆಗೊಳಿಸಿದೆ,ಕಾಮಗಾರಿಗಳ ಟೆಂಡರ್ಕೂಡ ಮಾಡಿ ಇನ್ನೇನು ಕಾಮಗಾರಿ ಆರಂಭಿಸಬೇಕಾದ ಸಂದರ್ಭದಲ್ಲಿ ಹಣವನ್ನು ಮರಳಿ ಪಡೆದಿದೆ,ಇದರಲ್ಲಿ ಕೆಬಿಜೆಎನ್ಎಲ್ ಎಮ್.ಡಿ ಅವರ ನಿರ್ಲಕ್ಷ್ಯವೂ ಇದ್ದು ಕೂಡಲೇ ಎಮ್.ಡಿ ಅವರನ್ನು ಅಮಾನತುಗೊಳಿಸಬೇಕು ಹಾಗೂ ರಾಜ್ಯಪಾಲರು ಕೂಡಲೇ ಈ ಹಣ ಮರಳಿ ಬಿಡುಗಡೆಗೆ ಸರಕಾರಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸಿಲ್ದಾರ್ ಕಚೇರಿ ಸಿರಸ್ತೆದಾರ ಗುರುಬಸಪ್ಪ ಪಾಟೀಲ್ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಜು ದರಬಾರಿ,ಕೇಶವ ನಾಯಕ,ಹಣಮಂತ್ರಾಯ,ದವಲಸಾಬ,ದೇವಪ್ಪ ರತ್ತಾಳ,ಮಾನಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.