ಸುರಪುರ:ಕಲಬುರ್ಗಿಯಲ್ಲಿ ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ಸಭೆಯಲ್ಲಿನ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ದಿಂದ ನಗರದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ,ಸಪ್ಟೆಂಬರ್ 17 ರಂದು ಸರಕಾರ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃಧ್ಧಿಗೆ 371 ಜೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು,371 ಜೆ ಅಡಿ ಬರುವ ಸಮಸ್ಯೆಗಳ ಪರಿಹರಿಸಲು ವಿಶೇಷ ನ್ಯಾಯಮಂಡಳಿ ಸ್ಥಾಪಿಸಬೇಕು,ಯಾದಗಿರಿಯಲ್ಲಿ ವಿಶ್ವವಿದ್ಯಾಲಯ ಆರಂಭಿಸಬೇಕು,ಕಲಬುರಗಿಯಲ್ಲಿ ರೈಲ್ವೆ ವಿಭಾಗಿಯ ಕಚೇರಿ ಆರಂಭಿಸಬೇಕು,ಯಾದಗಿರಿ ಜಿಲ್ಲೆಯ ಸೈದಾಪುರ ಮತ್ತು ವಡಿಗೇರ ಪಟ್ಟಣ ಪಂಚಾಯತಿ ಎಂದು ಘೋಷಿಸಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಸಿಲ್ದಾರ್ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಸಂ.ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ,ತಾಲೂಕ ಪದಾಧಿಕಾರಿಗಳಾದ ಶ್ರೀಶೈಲ ಕಾಚಾಪುರ,ಆನಂದ ಮಾಚಗುಂಡಾಳ,ಸೋಮು ಹಾಲಗೇರಿ,ಹಣಮಂತ ದೇವಿಕೇರಿ,ಹಣಮಂತ ಹಾಲಗೇರಿ,ಕೃಷ್ಣಾ ಮಂಗಿಹಾಳ,ಅಯ್ಯಪ್ಪ ವಗ್ಗಾಲಿ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.