ಕಲಬುರಗಿ: ನೋವೆಲ್ ಕರೋನಾ ವೈರಸ್ ಇತ್ತೀಚಿಗೆ ಹೊಸದಾಗಿ ಹುಟ್ಟಿರುವ ವೈರಸವಾಗಿದೆ. ಇದು ಮಾರಣಾಂತಿಕ ವೈರಸ್ ಆಗಿದ್ದು, ಅದರ ಬಗ್ಗೆ ಅನಾವಶ್ಯಕವಾಗಿ ಭಯ ಪಡದೆ, ಮುಂಜಾಗೃತೆ ವಹಿಸುವುದು ತುಂಬಾ ಅಗತ್ಯವಾಗಿದೆಯೆಂದು ವೈದ್ಯಾಧಿಕಾರಿ ಡಾ.ಅನುಪಮ ಕೇಶ್ವಾರ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಮೀಕ್ಷಣಾ ಘಟಕದ ಸಹಯೋಗದೊಂದಿಗೆ ನಗರದ ಶೇಖರೋಜಾದಲ್ಲಿರುವ ಶಹಾಬಜಾರನ ’ನಗರ ಪ್ರಾಥಮಿಕ ಆರೋಗ್ಯ ಕೇಂದ’ದ ವತಿಯಿಂದ ಶೇಖರೋಜಾ, ಮಹಾದೇವ ನಗರ, ಶಹಾಬಜಾರ ಸೇರಿದಂತೆ ಅನೇಕ ಬಡಾವಣೆಗಳು ಹಾಗೂ ಶಹಾಬಜಾರ ನಾಕಾ ಬಸ್ ಸ್ಟಾಂಡ್ನಲ್ಲಿ ಸೋಮವಾರ ಏರ್ಪಡಿಸಿದ್ದ ’ಕರೋನಾ ವೈರಸ್ ಜಾಗೃತಿ ಜಾಥಾ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೋವೆಲ್ ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಮತ್ತು ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ತೀರ್ವ ಜ್ವರ, ತಲೆನೋವು, ನೆಗಡಿ, ಒಣ ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಭೇದಿ ಈ ರೋಗದ ಪ್ರಮುಖ ಲಕ್ಷ್ಣಗಳಾಗಿವೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕಲಿದ್ದಾಗ, ಹಸ್ತ ಲಾಘವ, ವಸ್ತುಗಳನ್ನು ಬಳಿಸಿದಾಗ ರೋಗ ಹರಡುತ್ತದೆ. ಇದಕ್ಕೆ ಸೂಕ್ತ ಲಸಿಕೆ ಇಲ್ಲ. ರೋಗದ ಲಕ್ಷ್ಣಗಳು ಕಂಡುಬಂದರೆ ರೋಗಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆಯೆಂದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶರಣಮ್ಮ ಪಾಟೀಲ ಮಾತನಾಡುತ್ತಾ, ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು, ರೋಗವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ, ಸಾರ್ವಜನಿಕ ಸ್ಥಳಗಳಲ್ಲಿ ಉಗಳಬೇಡಿ, ಮಾಸ್ಕ್ ಧರಿಸಿ ಎಂದು ಜನರಿಗೆ ಅನೇಕ ಸಲಹೆಗಳನ್ನು ನೀಡಿದರು.
ಜಾಥಾದಲ್ಲಿ ಪ್ರಮುಖರಾದ ಉಪನ್ಯಾಸಕ ಎಚ್.ಬಿ.ಪಾಟೀಲ, ರೇಣುಕಾಚಾರ್ಯ ಸ್ಥಾವರಮಠ, ವೀರಣ್ಣ ಡಿ.ಪಟ್ಟಣ, ರವಿ ಚಿಗ್ಗೋಣ, ಅಮರ ಜಿ.ಬಂಗರಗಿ, ಸುನಿಲ ಚೌದರಿ, ರೇವಣಸಿದ್ದಪ್ಪ ಇಂಡಿ, ರಾಜಶೇಖರ ಮೆಟೆಕಾರ, ಜಗನಾಥ, ಗುರುರಾಜ, ಪುಷ್ಪಾ, ರೇಷ್ಮಾ, ನಾಗೇಶ್ವರಿ, ಗುರುರಾಜ, ಗಂಗಾಜ್ಯೋತಿ, ನಾಗಜ್ಯೋತಿ, ನಾಗಮ್ಮ, ಸುಲೋಚನಾ, ಸಂಗೀತಾ, ಗೌರಮ್ಮ, ಮಂಗಳಾ, ಶ್ರೀದೇವಿ, ಚಂದಮ್ಮ, ಸುಮಂಗಲಾ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಬಡಾವಣೆಯ ನಾಗರಿಕರು ಇದ್ದರು.