ಕಲಬುರಗಿ: ಕೊರೋನಾ ವೈರಸ್ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬಿಡಾಡಿ ಹಾಗೂ ಇತರೆ ದನಗಳು, ನಾಯಿ, ಹಂದಿ, ಪಕ್ಷಿಗಳಿಗೆ ನೀರು ಮತ್ತು ಆಹಾರಕ್ಕೆ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಇಂತಹ ಪ್ರಾಣಿ-ಪಕ್ಷಿಗಳಿಗೆ ಮಾನವೀಯತೆಯಿಂದ ಅವುಗಳಿಗೂ ನೀರು, ಆಹಾರ ನೀಡುವತ್ತ ಗಮನಹರಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಹುಣಚಿರಾಯ ಎಸ್. ಮೋಟಗಿ ಅವರು ಮನವಿ ಮಾಡಿದ್ದಾರೆ.
ಖಾನಾವಳಿ, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಬೇಕರಿ, ಮುಸುರಿ ಚೆಲ್ಲುವ ಇನ್ನಿತರೆ ಸ್ಥಳಗಳಿಂದ ಆಹಾರವನ್ನು ತೆಗದುಕೊಳ್ಳುವ ಈ ಪ್ರಾಣಿ-ಪಕ್ಷಿಗಳಿಗೆ ಹೋಟೆಲ್-ರೆಸ್ಟೋರೆಂಟ್ ಬಂದ್ನಿಂದ ಆಹಾರದ ಸಮಸ್ಯೆ ಎದುರಿಸುತ್ತಿವೆ. ಮೂಕ ಪ್ರಾಣಿಗಳ ರೋಧನೆ ಅರಿತು ಆಹಾರ ವ್ಯವಸ್ಥೆ ಮಾಡುವ ಮೂಲಕ ಕಾಳಜಿ ಹಾಗೂ ದಯೆ ತೋರುವುದು ಇದೀಗ ಅತೀ ಅವಶ್ಯಕವಾಗಿದೆ.
ಈ ಕುರಿತು ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಪಶು ಸಂಗೋಪನಾ ಅಧಿಕಾರಿಗಳಿಗೆ ಪತ್ರ ಬರೆದು ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕೆಂದು ಕೋರಿದ್ದೇನೆ. ಕಲಬುರಗಿ ನಗರದ ನಂದಿ ಎನಿಮಲ್ ವೆಲ್ಫೇರ್ ಸಂಸ್ಥೆಯಿಂದ ಪ್ರಾಣಿ ಹಾಗೂ ಪಕ್ಷಿಗಳಿಗೆ ನೀರಿನ ತೊಟ್ಟಿ ಇಟ್ಟು ನೀರು ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಕಲಬುರಗಿ ನಗರ ಮತ್ತು ಗ್ರಾಮೀಣ ಭಾಗದ ಸಾರ್ವಜನಿಕರು ಇದೇ ರೀತಿಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕೆಂದು ಕೋರಿರುವ ಅವರು ಸಾರ್ವಜನಿಕರು ತಮ್ಮ ಮನೆಯಲ್ಲಿ ಉಳಿಯಬೇಕು ಹಾಗೂ ಮನೆಯ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡಬೇಕು ಎಂದರು.
ನಾಡಿನ ಎಲ್ಲ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಮಠ-ಮಂದಿರಗಳು ತಮ್ಮ ಮನೆಯ ಸುತ್ತಮುತ್ತಲೂ ಇರುವ ಪ್ರಾಣಿ-ಪಕ್ಷಿಗಳಿಗೆ ಆಹಾರ ಮತ್ತು ನೀರು ಒದಗಿಸುವ ಕಾರ್ಯ ಮಾಡಬೇಕೆಂದು ಅವರು ಮನವಿ ಮಾಡಿದರು.