ಸುರಪುರ: ನಗರದ ತಹಸೀಲ್ದಾರ ಕಚೇರಿ ಆವರಣದಲ್ಲಿ ಮಾದಿಗ ಯುವ ಸೇನೆ ತಾಲೂಕು ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ,ಮುಂಬೈನ ದಾದರನಲ್ಲಿ ನಡೆದ ಡಾ: ಬಿ.ಆರ್.ಅಂಬೇಡ್ಕರರ ಮನೆಯ ಮೇಲಿನ ದಾಳಿಯನ್ನು ಖಂಡಿಸಿದರು.
ಪ್ರತಿಭಟೆನಯ ನೇತೃತ್ವ ವಹಿಸಿದ್ದ ಸಮಿತಿ ಅಧ್ಯಕ್ಷ ಬಸವರಾಜ ಮುಷ್ಠಳ್ಳಿ ಮಾತನಾಡಿ, ದೇಶದಲ್ಲಿ ದಿನನಿತ್ಯವೂ ಕೂಡ ದಲಿತರ ಮೇಲೆ ಹಲ್ಲೆಗಳು ಕೊಲೆಗಳು ನಡೆಯುತ್ತಿವೆ ಅಲ್ಲದೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಬದುಕಿದ ಮುಂಬೈನ ದಾದರನಲ್ಲಿರುವ ಮನೆಯ ಮೇಲೆ ದಾಳಿ ಮಾಡಿರುವ ಕೋಮುವಾದಿಗಳು ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ ಅಲ್ಲದೆ ಮನೆಯ ಹಿಂಬದಿಯ ಗ್ರಂಥಾಲಯವನ್ನು ಕೂಡ ಧ್ವಂಸಗೊಳಿಸಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಜಗತ್ತಿಗೆ ಮಾದರಿಯಾಗುವ ಸಂವಿದಾನವನ್ನು ನಮ್ಮ ದೇಶಕ್ಕೆ ಕೊಡುಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ನೀವಾಸವನ್ನು ಒಂದು ಪವಿತ್ರ ಸ್ಥಳವಾಗಿ ಕಾಣುತ್ತೇವೆ, ಆದರೆ ಕೆಲವು ದುಷ್ಕರ್ಮಿಗಳು ಮನೆಯ ಮೇಲೆ ದಾಳಿ ಮಾಡಿ ಹೇಯ ಕೃತ್ಯ್ಕ ಎಸಗಿರುವುದು ಇಡಿ ದೇಶವೆ ತಲೆತಗ್ಗಿಸುವ ಸಂಗತಿಯಾಗಿದೆ ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸದೆ ಸರ್ಕಾರ ನಿದ್ದೆ ಮಾಡುತ್ತಿದೆ.ಅಂಬೇಡ್ಕರರನ್ನು ಅವಮಾನಿಸಿದರೆ ಅದು ದೇಶಕ್ಕೆ ಅಪಮಾನಿಸಿದಂತಾಗಲಿದೆ. ಆದ್ದರಿಂದ ಅಂಬೇಡ್ಕರರ ರಾಜಗೃಹದ ಮೇಲೆ ದಾಳಿ ಮಾಡಿದವರನ್ನು ಕೂಡಲೆ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ನಂತರ ಕೇಂದ್ರ ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಿವಲಿಂಗಪ್ಪ ಮಾಲಗತ್ತಿ, ಮಹೇಶ ಜಾಲಿಬೆಂಚಿ, ಬಸವರಾಜ ವಾಗಣಗೇರಾ. ದೇವು ಯಡಹಳ್ಳಿ, ದೇವಪ್ಪ ಶಳ್ಳಗಿ, ಪ್ರಬಾಸ ಸದಬ, ಸಿದ್ದು ಯಡಹಳ್ಳಿ, ಮಲ್ಲು ಮುಷ್ಟಳ್ಳಿ ಸೇರಿದಂತೆ ಇನ್ನಿತರರಿದ್ದರು.