ಸುರಪುರ: ಕಳೆದ ಎರಡು ಮೂರು ವರ್ಷಗಳಿಂದ ನಾಡಿನಲ್ಲಿ ನಿರಂತರವಾಗಿ ಬರಗಾಲ ಆವರಿಸುತ್ತಿದ್ದು ಈ ವರ್ಷ ಉತ್ತಮವಾಗಿ ಮಳೆ ಹಾಗು ಬೆಳೆ ಬಂದು ನಾಡಿನ ಜನರು ಸಂತೋಷದಿಂದ ಬದುಕುವಂತಾಗಲಿ ಹಾಗು ಜಗತ್ತಿಗೆ ಪಿಡುಗಾಗಿ ಬಾಧಿಸುತ್ತಿರುವ ಕೊರೊನಾ ವೈರಸ್ ನಿರ್ಮೂಲನೆಯಾಗಲಿ ಎಂದು ತಾಲೂಕಿನ ಜಾಲಿಬೆಂಚಿ ಗ್ರಾಮದ ಜನರು ಗ್ರಾಮದ ಬೆಟ್ಟದಲ್ಲಿರುವ ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ಪರುವು ಮಾಡಿ ಹರಕೆ ಸಲ್ಲಿಸಿದರು.
ಬೆಳಿಗ್ಗೆ ೮ ಗಂಟೆ ಸುಮಾರಿಗೆ ಗ್ರಾಮದ ಎಲ್ಲಾ ಜನರು ತಮ್ಮ ತಮ್ಮ ಮನೆಗಳಲ್ಲಿ ವಿವಿಧ ರೀತಿಯ ಅಡುಗೆ ತಯ್ಯಾರಿಸಿಕೊಂಡು ಭಾಜಾ ಬಜಂತ್ರಿಯೊಂದಿಗೆ ದಂಡಗುಂಡ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಇಡೀ ದಿನ ಭಜನೆ ಮಾಡುತ್ತಾ ದೇವರನ್ನು ಧ್ಯಾನಿಸಿದರು.
ಈ ಸಂದರ್ಭದಲ್ಲಿ ಅರ್ಚಕ ಅಮರಯ್ಯಸ್ವಾಮಿ ಮಾತನಾಡಿ,ದಂಡಗುಂಡ ಬಸವೇಶ್ವರನಿಗೆ ಪರುವು ಮಾಡುವ ಸಂಪ್ರದಾಯ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು,ನಾಡಿನಲ್ಲಿ ಸರಿಯಾಗಿ ಮಳೆಯಾಗದ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಬಂದು ಪರುವು ಮಾಡುವುದರಿಂದ ಸಂಜೆ ಮರಳಿ ಮನೆಗೆ ಹೋಗುವಾಗ ಮಳೆ ಬಂದಿರುವ ಉದಾಹರಣೆ ಅನೇಕ ಬಾರಿ ನಡೆದಿದೆ.ಅದರಂತೆ ಈ ವರ್ಷವು ಬಂದಿದ್ದು ನಾಡಿಗೆ ಉತ್ತಮ ಮಳೆ ಬೆಳೆ ದೊರೆಯಲಿ ಹಾಗು ಜಗತ್ತಿಗೆ ಮಹಾ ಮಾರಿಯಾಗಿರುವ ಕೊರೊನಾ ನಿರ್ಮೂಲನೆಯಾಗಲೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬೇಡಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ,ರಾಜಾ ವೆಂಕಟಪ್ಪ ನಾಯಕ ಜಹಾಗಿರದಾರ,ಭೀಮಣ್ಣ ನಾಗನಟಿಗಿ,ಭೀಮಣ್ಣ ಬಿರಾದಾರ್,ರಾಜಾ ನರಸಿಂಹ ನಾಯಕ ಜಹಾಗಿರದಾರ್,ಬಸವರಾಜ ಅಚ್ಚರಡ್ಡಿ,ಶರಣಪ್ಪ ಅಚ್ಚರಡ್ಡಿ,ಅಂಬ್ರೇಶ ಸಾಹುಕಾರ,ಗಂಗಾಧರ ಬಡಿಗೇರ,ಮಾನಪ್ಪ ಚಲುವಾದಿ ಸೇರಿದಂತೆ ಅನೇಕ ಜನರಿದ್ದರು.