ಸುರಪುರ: ನಗರದ ರಂಗಂಪೇಟೆಯ ಹಸನಾಪುರದ ಶ್ರೀ ಮರೆಮ್ಮ ದೇವಾಲಯದ ಪಕ್ಕದಲ್ಲಿ ಕಳೆದ ಅನೇಕ ತಿಂಗಳುಗಳಿಂದ ಹೊನ್ನಪ್ಪ ತಳವಾರ ಮತ್ತವರ ಪತ್ನಿ ಹಾಗು ಮೂವರು ಮಕ್ಕಳೊಂದಿಗೆ ರಸ್ತೆ ಪಕ್ಕದಲ್ಲಿ ಚಿಕ್ಕದಾದ ಸೆಡ್ಡೊಂದನ್ನು ನಿರ್ಮಿಸಿಕೊಂಡು ಯಾವುದೇ ರೀತಿಯ ಆಶ್ರಯವಿಲ್ಲದೆ ಜೀವನ ನಡೆಸುತ್ತಿದೆ.
ಈ ಕುಟುಂಬದ ಸ್ಥಿತಿಯನ್ನು ಕಂಡು ಮರುಗಿದ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಕಲಬುರ್ಗಿ ವಿಭಾಗಿಯ ಸಹ ಪ್ರಮುಖರಾದ ಉಪನ್ಯಾಸಕ ಡಾ: ಉಪೇಂದ್ರ ನಾಯಕ ಸುಬೇದಾರ ಅವರು,ಇಂತಹ ಚಳಿಗಾಲದಲ್ಲಿ ರಸ್ತೆ ಬದಿ ಜೀವನ ನಡೆಸುವುದಕ್ಕೆ ಮರುಗಿ ತಮ್ ಸ್ವಂತ ಹಣದಲ್ಲಿ ನಿತ್ಯದ ಉಪಜೀವನಕ್ಕೆ ಬೇಕಾದ ಅಕ್ಕಿ ಬೇಳೆ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ನೆರವು ನೀಡುವ ಮೂಲಕ ಕುಟುಂಬಕ್ಕೆ ನೆರವಾಗಿದ್ದಾರೆ.
ಅಲ್ಲದೆ ಈ ಸಂದರ್ಭದಲ್ಲಿ ಡಾ: ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ಸರಕಾರಗಳು ಉಳ್ಳವರಿಗೆ ಏನೆಲ್ಲ ಸೌಲಭ್ಯಗಳನ್ನು ನೀಡುತ್ತದೆ ಆದರೆ ಇಂತಹ ಬಡ ಜನರತ್ತ ಕಣ್ಣು ಹಾಯಿಸದಿರುವುದು ನೋವಿನ ಸಂಗತಿಯಾಗಿದೆ.ಸರಕಾರ ಹಾಗು ನಗರಸಭೆ ಈ ಕುಟುಂಬಕ್ಕೆ ಒಂದು ಆಶ್ರಯ ಮನೆಯನ್ನು ನೀಡುವ ಮೂಲಕ ನೆರವಾಗಬೇಕು ಮತ್ತು ಸ್ಥಳಿಯ ಜನಪ್ರತಿನಿಧಿಗಳು ಈ ಕುಟುಂಬಕ್ಕೆ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ ಮಕಾಶಿ ಕ್ಯಾತಪ್ಪ ಮೇದಾ ಸೇರಿದಂತೆ ಇತರರಿದ್ದರು.