ಕಲಬುರಗಿ: ಸಾಲಬಾಧೆ ತಾಳಲಾಗದೆ ರೈತನೋರ್ವ ಕ್ರಿಮಿನಾಶಕ ತೈಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಚಿತ್ತಾಪುರ ತಾಲೂಕಿನ ಕುಂದನೂರ ಗ್ರಾಮದಲ್ಲಿ ಸಂಭವಿಸಿದೆ.
ಮಹೆಬೂಬ ಪಟೇಲ ತಂದೆ ಮಶಾಕಪಟೇಲ ಮೂಲಿಮನಿ (48) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತ ರೈತನಿಗೆ ಪತ್ನಿ, ಪುತ್ರ ಹಾಗೂ ಐವರು ಪುತ್ರಿಯರು ಇದ್ದಾರೆ. ಇತ್ತೀಚೆಗೆ ಉಂಟಾದ ಭೀಕರ ಭೀಮಾ ಪ್ರವಾಹಕ್ಕೆ ತುತ್ತಾಗಿ ಎಂಟು ಎಕರೆ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ ಎನ್ನಲಾಗಿದ್ದು, ಬೆಳೆಯನ್ನೆ ನಂಬಿ ಮಾಡಿದ 2.10 ಲಕ್ಷ ರೂ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆಗೀಡಾಗಿ ಇಲಿ ಸಾಯಿಸುವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಶವವನ್ನು ವಾಡಿ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ವಾಡಿ ಠಾಣೆಯ ಪಿಎಸ್ಐ ವಿಜಯಕುಮಾರ ಭಾವಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.