ಸುರಪುರ: ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಹಾಗು ಸುರಪುರ ಪೊಲೀಸ್ ಇಲಾಖೆ ವತಿಯಿಂದ ಸಡಕ್ ಸುರಕ್ಷಾ ಜೀವನ್ ರಕ್ಷಾ ಎಂಬ ಜನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ಐವತ್ತಕ್ಕೂ ಹೆಚ್ಚು ಬೈಕ್ಗಳ ರ್ಯಾಲಿಗೆ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು,ಯಾರೇ ಬೈಕ್ ಅಥವಾ ಕಾರ್ ಯಾವುದನ್ನಾಗಲಿ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು,ಇದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ತಾವೇ ಸ್ವತಃ ಬೈಕ್ ಓಡಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾದ ಸುರಪುರ ಠಾಣೆಯ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಅವರು ಮಾತನಾಡಿ,ಸರಕಾರದ ಆದೇಶದಂತೆ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ತಾಲೂಕಿನಾದ್ಯಂತ ಒಂದು ತಿಂಗಳುಗಳ ಕಾಲ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ,ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಜೀವ ರಕ್ಷಣೆಯನ್ನು ಮಾಡಿಕೊಳ್ಳಬೇಕು.ಅಲ್ಲದೆ ಪ್ರತಿಯೊಬ್ಬ ವಾಹನ ಸವಾರ ಕಡ್ಡಾಯವಾಗಿ ಚಾಲನಾ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಹಾಗು ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ತಿಳಿಸಿದರು ಹಾಗು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ರಾಜು ಪುಲ್ಸೆ ಮಾತನಾಡಿದರು.
ನಂತರ ಮಹಾತ್ಮ ಗಾಂಧಿ ವೃತ್ತದಿಂದ ದರಬಾರ ರಸ್ತೆ ಮೂಲಕ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಮಾರ್ಗವಾಗಿ ಹನುಮಾನ ಟಾಕೀಸ್ ರಸ್ತೆಯಿಂದ ಬಸ್ ನಿಲ್ದಾಣದ ಮೂಲಕ ನಗರಸಭೆ ಬಳಿಯಿಂದ ರಂಗಂಪೇಟೆ ಬಜಾರ್ ತಿಮ್ಮಾಪುರ ಮಾರ್ಗವಾಗಿ ಪೊಲೀಸ್ ಠಾಣೆಯ ವರೆಗೆ ರ್ಯಾಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಶರಣಪ್ಪ ಹವಲ್ದಾರ ಚಂದ್ರಶೇಖರ ನಾರಾಯಣಪುರ ಗೃಹ ರಕ್ಷಕ ಇಲಾಖೆ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ವೆಂಕಟೇಶ ಸುರಪುರ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಹಾಗು ಗೃಹ ರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು.